ಕರ್ನಾಟಕ ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿ ಸದಸ್ಯರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡಲಿಕ್ಕೆ ಹಿಂಜರಿಯುವುದಿಲ್ಲ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರದೀಪ್. ಚ. ಪಾಟೀಲ್ ಸರ್ಕಾರವನ್ನು ಎಚ್ಚರಿಸಿದರು.
ವಿಜಯಪುರದಲ್ಲಿ ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಇಂದು ರಾಜ್ಯ ವ್ಯಾಪ್ತಿಯಲ್ಲಿ ಗ್ರಾ. ಪಂ ಸದಸ್ಯರು ಗ್ರಾಮೀಣ ಪ್ರಾಂತ್ಯಗಳ ಸಮಸ್ಯೆಗಳು ಮತ್ತು ಗ್ರಾಮಗಳ ಅಭಿವೃದ್ಧಿಗಾಗಿ ಅಧಿಕಾರಿಗಳನ್ನು ಜೊತೆಗೂಡಿಸಿಕೊಂಡು ಶ್ರಮಿಸುತ್ತಿರುವದಾಗಿ ತಿಳಿಸಿದರು.
ಸರ್ಕಾರದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳ ಜೊತೆಗೆ ಹಳ್ಳಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಇವರನ್ನು ಕಡಿಗಣಿಸುವುದು ಮತ್ತು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಗಳಲ್ಲಿ ಸದಸ್ಯರನ್ನು ನಿರ್ಲಕ್ಷಿಸಿರುವುದಲ್ಲದೆ ಸಾಮಾನ್ಯ ಸಭೆಗೆ ಗೈರಿ ಹಾಜರು ಎಂದು ಸುಳ್ಳು ಆರೋಪ ಮಾಡಿದ್ದಾರೆ ಎಂದರು.
ಅದೇ ಸಂದರ್ಭದಲ್ಲಿ ಪಂಚಾಯಿತಿಯ ಮುಂದೆ ಧರಣಿ ಕೂತಿರುವ ಸದಸ್ಯರಿಗೆ ಸುಳ್ಳು ಭರವಸೆ ನೀಡುವುದರ ಮುಖಾಂತರ ಸಮಾಧಾನಪಡಿಸಿರುತ್ತಾರೆ ಹೊರತು ನ್ಯಾಯ ಕೊಡಿಸಿರುವುದಿಲ್ಲ ಎಂದು ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲಾ, ಶಿಡ್ಲಘಟ್ಟ ತಾಲೂಕ, ಜೆ. ವೆಂಕಟಪುರ, ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯೆ ಶಶಿಕಲಾ ಅಂಬರೀಶ್ ಅಧಿಕಾರಿಗಳು ವರ್ತಿಸಿದ ವಿಧಾನ ಸರಿಯಲ್ಲ ಎಂದರು.
ಅಲ್ಲಿನ ಪಿಡಿಒ, ಅವರ ಪ್ರಶ್ನೆಗಳಿಗೆ ಸಾಮಾನ್ಯ ಸಭೆಯಲ್ಲಿ ಸರಿಯಾದ ಸಮಾಧಾನ ನೀಡದೆ, ನಿರ್ಲಕ್ಷ್ಯವಾಗಿ ಮತ್ತು ಚಿಟಿಕೆ ಹೊಡೆಯುವುದರ ಮುಖಾಂತರ ಗುಂಡಾವರ್ತನೆ ತೋರಿರುವುದು ಖಂಡನಿಯ ಎಂದರು. ಈಗಾಗಲೇ ಈ ವಿಷಯಕ್ಕೆ ಸಂಬಂಧಪಟ್ಟ ತಮ್ಮ ಒಕ್ಕೂಟ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರಾದ, ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರಿಗೆ ದೂರು ನೀಡಲಾಗಿದೆ ಎಂದರು.
ರಾಜ್ಯ ಸರ್ಕಾರವು ಕೂಡಲೇ ಈ ವಿಷಯದ ಮೇಲೆ ಗಮನಹರಿಸಿ, ಸಂಬಂಧಿತ ಪಿಡಿಒ ಅವರನ್ನು ವಿಚಾರಣೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮವಹಿಸಿ, ಸದಸ್ಯರಿಗೆ ನ್ಯಾಯ ಕೊಡಿಸದಿದ್ದರೆ ರಾಜ್ಯಾದ್ಯಂತ ತಮ್ಮ ಒಕ್ಕೂಟ ನೇತೃತ್ವದಲ್ಲಿ ಉಗ್ರಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರ ನೀಡಿದರು.
ಸಮಾಜದಲ್ಲಿ ಗೌರವಕ್ಕಾಗಿ ಕೆಲಸ ಮಾಡುತ್ತಿರುವ ಗ್ರಾಮ ಪಂಚಾಯತಿ ಸದಸ್ಯರನ್ನು ಅಧಿಕಾರಿಗಳು ಮತ್ತು ಸಿಬ್ಬಂದಿ ಈ ರೀತಿ ನಿರ್ಲಕ್ಷ ಭಾವದಿಂದ ನೋಡಿದರೆ, ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಕೆಟ್ಟು ಹೆಸರು ಬರುವ ಅವಕಾಶ ಇರುವುದರಿಂದ ಮಾನ್ಯ ಪಂಚಾಯತ್ ರಾಜ್ ಸಚಿವರು ಹಾಗೂ ಸಂಬಂಧಿತ ಇಲಾಖೆ ಅಧಿಕಾರಿಗಳು ಗ್ರಾಮ ಪಂಚಾಯತಿ ಸದಸ್ಯರ ಹಕ್ಕುಗಳ ರಕ್ಷಣಾ ಮತ್ತು ಉತ್ತಮ ಆಡಳಿತಕ್ಕಾಗಿ ಕ್ರಮವಹಿಸಲು ಈ ಮೂಲಕ ಪ್ರದೀಪ್. ಚ. ಪಾಟೀಲ್ ಮನವಿ ಮಾಡಿದ್ದಾರೆ.
