ರಘು ಚಂದನ್ಗೆ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನಲೆ ಶಾಸಕ ಎಂ ಚಂದ್ರಪ್ಪ ಅಸಮಧಾನ ವ್ಯಕ್ತಪಡಿಸಿದ್ದು, ಯಡಿಯೂರಪ್ಪ ಅವರಿಂದಲೇ ನನ್ನ ಮಗನಿಗೆ ಟಿಕೆಟ್ ಕೈತಪ್ಪಿದೆ ಎಂದು ಆರೋಪಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗುರುವಾರ ಮಧ್ಯಾಹ್ನದವರೆಗೂ ನನ್ನ ಮಗನ ಹೆಸರು ಫೈನಲ್ ಆಗಿತ್ತು. ಗೋವಿಂದ ಕಾರಜೋಳ ಅವರಿಗೆ ಟಿಕೆಟ್ ನೀಡಿಲ್ಲ, ಅಂದ್ರೆ ಕ್ಯಾಂಪೇನ್ ಮಾಡಲ್ಲವೆಂದು ಯಡಿಯೂರಪ್ಪ ಹೇಳಿದ್ದಾರೆ. ಹೀಗಾಗಿಯೇ, ನನ್ನ ಮಗನಿಗೆ ಟಿಕೆಟ್ ತಪ್ಪಿಸಲಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನನ್ನ ಮಗನಿಗೆ 2019ರಲ್ಲಿ ಟಿಕೆಟ್ ಕೇಳಿದ್ದೆ, ಆಗ ಮುಂದಿನ ಸಾರಿ ಎಂದು ಹೇಳಿದ್ದರು. ನಾರಾಯಣ ಸ್ವಾಮಿ ಪರ ಪ್ರಚಾರ ಮಾಡಿ, 40 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದ್ದೆವು. 2024ರ ಎಲೆಕ್ಷನ್ನಲ್ಲಿ ಟಿಕೆಟ್ ಕೊಡ್ತೇವೆ ಎಂದು ಸಂತೋಷ್ ಅವರು ಕೂಡಾ ಹೇಳಿದ್ದರು. ಇದೇ ಗೋವಿಂದ ಕಾರಜೋಳ ನನ್ನ ಮಗನ ಓಡಾಡಲು ಹೇಳಿದ್ದರು. ಪಕ್ಷದ ಸಭೆಯಲ್ಲಿ ಕೂಡಾ ಹೊರಗಿನ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದಾಗಿ ಧ್ವನಿ ಎತ್ತಿದ್ದೆ. ಸರ್ವೇ ಬಂದವರಿಗೆ ನಮ್ಮ ಜಿಲ್ಲೆಯವರಿಗೆ ಟಿಕೆಟ್ ನೀಡಿ ಎಂದಿದ್ದೆ. ಮೋದಿ, ಅಮಿತ್ ಷಾ ಸರ್ವೇಯಲ್ಲಿ ರಘುಚಂದನ್ ಹೆಸರಿತ್ತು. ಸಿಇಸಿ ಕಮಿಟಿಯಲ್ಲಿ ನನ್ನ ಮಗನ ಹೆಸರು ಫೈನಲ್ ಆಗಿತ್ತು. ನಿನ್ನೆ ಸಂಜೆ ಯಡಿಯೂರಪ್ಪ ಅವರಿಂದ ನನ್ನ ಮಗನಿಗೆ ಟಿಕೆಟ್ ತಪ್ಪಿದೆ” ಎಂದು ಯಡಿಯೂರಪ್ಪರವರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಯಡಿಯೂರಪ್ಪ ಕೆ.ಜೆ ಪಿ.ಕಟ್ಟಿದ್ದಾಗ ಅವರ ಸಮಾಜದವರು ಬರ್ಲಿಲ್ಲ. ನಾನು 6 ತಿಂಗಳ ಮುಂಚೆಯೇ ನಾನು ರಾಜೀನಾಮೆ ಕೊಟ್ಟಿದ್ದೆ. ನಾನು ಇವರನ್ನ ಎಂದೂ ಕೈಬಿಟ್ಟು ಹೋಗಿರಲಿಲ್ಲ. ನಮಗೆ ಯಡಿಯೂರಪ್ಪ ಈ ಬಹುಮಾನ ಕೊಟ್ಟಿದ್ದಾರೆ ಎಂದು ಚಂದ್ರಪ್ಪ ನೊಂದು ನುಡಿದರು.
ಕಾರಜೋಳ ಯಡಿಯೂರಪ್ಪ ನಡುವೆ ಅದೇನು ಸಂಮ್ತಿಂಗ್ ಇದೆಯೋ ಗೊತ್ತಿಲ್ಲ. 550 ಕಿಲೋಮೀಟರ್ ದೂರ ವ್ಯಕ್ತಿಗೆ ಟಿಕೆಟ್ ಕೊಡುವಂತದ್ದು ಏನಿತ್ತು. ನಮಗೆ ತುಂಬಾನೇ ಅನ್ಯಾಯ ಮಾಡಿದ್ದಾರೆ. ಕಾರ್ಯಕರ್ತರ ಅಭಿಪ್ರಾಯದ ನಂತರ ಮುಂದಿನ ನಿರ್ಧಾರ. ವಿಜಯೇಂದ್ರ ಯುವಕ ಎಂದು ಅಧ್ಯಕ್ಷ ಮಾಡಿದ್ದಾರೆ. ನನ್ನ ಮಗನಿಗೆ ಟಿಕೆಟ್ ಕೊಡ್ಲಿಲ್ಲ. ನಮ್ಮ ಸಮಾಜದ ಎಲ್ಲರೂ ಕೈಬಿಟ್ಟು ಹೋಗಿದ್ದಾರೆ, ನಾನು ಮಾತ್ರ ಆಧಾರವಾಗಿದ್ದೆ. ಈಗ ನಮ್ಮ ಸಮಾಜ ಮುಂದಿನ ಹೆಜ್ಜೆ ಇಡುತ್ತದೆ. ಮೋದಿ ದೇಶ & ರಾಜ್ಯಕ್ಕೆ ಅಗತ್ಯ ಎಂದು ನಾನು ಭಾವಿಸಿದ್ದೇನೆ. ಬೊಮ್ಮಾಯಿ ಸಂಪುಟದಲ್ಲಿ ನನಗೆ ಅನ್ಯಾಯ ಮಾಡಿದ್ರು. ಹಗಲು ರಾತ್ರಿ ಯಡಿಯೂರಪ್ಪ ಮನೆಗೆ ನಾನು ದುಡಿದೆ, ನಾನು ಏನು ಅನ್ಯಾಯ ಮಾಡಿದ್ದೆ. ನಿನ್ನೆ ಮಧ್ಯಾಹ್ನ ಘೋಷಣೆ ಮಾಡ್ತಾ ಇದ್ರು, ಇದನ್ನ ತಪ್ಪಿಸಿದ್ದಾರೆ ಎಂದು ಆರೋಪ ಮಾಡಿದರು.
ನಮ್ಮ ಕಾರ್ಯಕರ್ತರ ಸಭೆ ಬಳಿಕ ಮುಂದಿನ ತೀರ್ಮಾನ. ನೂರಾರು ಬಾರಿ ಯಡಿಯೂರಪ್ಪ ಜೊತೆ ಚರ್ಚೆ ಮಾಡಿದ್ದೆ, ಅವರು ಕಾಳಜಿ ತೋರಿಲ್ಲ. ಯಡಿಯೂರಪ್ಪ ಕಿಚನ್ ಕ್ಯಾಬಿನೆಟ್ ನಲ್ಲಿ ಇದಿದ್ದಕ್ಕೆ ಈ ಬಹುಮಾನ. ಚುನಾವಣೆಗೆ ನಾನು ನಿಂತಾಗ ನಯಾ ಪೈಸೆ ಪಾರ್ಟಿ ಫಂಡ್ ಕೊಡ್ಲಿಲ್ಲ ಎಂದರು.
ಚಿತ್ರದುರ್ಗದಲ್ಲಿ ಮಹಾನ್ ನಾಯಕ ಒಬ್ಬ ಇದ್ದಾನೆ, ಅವನದ್ದು ಜಾಸ್ತಿ ಆಗಿದೆ, ಈಗಾಗಲೇ ಶಾಸ್ತಿ ಆಗಿದೆ, ಮುಂದಿಯೂ ಶಾಸ್ತಿ ಆಗುತ್ತದೆ. ನಮ್ಮ ಪಕ್ಷದಲ್ಲಿ ಸೋತವರನ್ನ ಕರೆತಂದು ಎಂಪಿ ಮಾಡಿದ್ವಿ ಅಷ್ಟು ನಿಯತ್ತಿಂದ ಮಾಡಿದ್ದೇವೆ, ನಾನು ನಂಬಿಸಿ ಮೋಸ ಮಾಡಲ್ಲ ಆ ಮಹಾನ್ ನಾಯಕನನ್ನ ಅರ್ಥ ಮಾಡಿಕೊಂಡು ಹೇಳುತ್ತೇನೆ. ಮದಕರಿ ಕೋಟೆಗೆ ನುಗ್ಗಲು ಸಂಧಿ ತೋರಿಸಲು ಒಬ್ಬ ಇರ್ಬೇಕು, ಅಂಥವರು ಇದ್ದಾರೆ ಒಳಗೆ ಬಂದಾಗ ಏನಾಯ್ತು, ಮುಂದೆ ಮಹಾನ್ ನಾಯಕನಿಗೆ ಅದೇ ಆಗುತ್ತೆ ಪರೋಕ್ಷವಾಗಿ ಮಾಜಿ ಶಾಸಕ ತಿಪ್ಪಾರೆಡ್ಡಿ ವಿರುದ್ದ ಚಂದ್ರಪ್ಪ ಗುಡುಗಿದ್ದಾರೆ.