ಲೋಕಸಭಾ ಚುನಾವಣೆಯಲ್ಲಿ ನನಗೆ ಮತ ಹಾಕಿ ಗೆಲ್ಲಿಸಿ. ನಿಮ್ಮ ಧ್ವನಿಯಾಗಿ ಕೆಲಸ ಮಾಡುವೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾಮಲ್ಲಿಕಾರ್ಜುನ ಮತದಾರರಿಗೆ ಮನವಿ ಮಾಡಿದರು.
ಹರಪನಹಳ್ಳಿ ಪಟ್ಟಣದ ತರಳ ಬಾಳು ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ಸರ್ವಾಧಿಕಾರಿಯಾಗಿ ದೇಶದಲ್ಲಿ ಆಡಳಿತ ನಡೆಸುತ್ತಲಿದೆ. ಬರ ಅನುದಾನ ನಮ್ಮ ರಾಜ್ಯಕ್ಕೆ ನೀಡಿಲ್ಲ ಎಂದು ದೂರಿದರು.
ನನಗೆ ಮತಹಾಕಿ ಗೆಲ್ಲಿಸಿದರೆ ತ್ರಿಬಲ್ ಇಂಜಿನ ಸರ್ಕಾರವಾಗುತ್ತದೆ, ಎಂ.ಪಿ ಲತಾ ಶಾಸಕರಿದ್ದಾರೆ. ದಾವಣಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ ಇದ್ದಾರೆ. ನಾನು ಗೆದ್ದರೂ ಮೂರನೇ ಇಂಜಿನ್ ಆಗಿ ಕೆಲಸ ಮಾಡುತ್ತೇನೆ. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಿ ಎಂದು ಹೇಳಿದರು.
ನಮ್ಮ ಮನೆ, ಮನಸ್ಸಿನ ಬಾಗಿಲು ಯಾವಾಗಲೂ ತೆಗೆದಿರುತ್ತೆ, ನಾನು ನಮ್ಮ ಮಾವ ಶಾಮನೂರು ಶಿವಶಂಕರಪ್ಪಹಾಗೂ ಪತಿ ಎಸ್.ಎಸ್. ಮಲ್ಲಿಕಾರ್ಜುನರವರಿಂದ ಸಮಾಜ ಸೇವೆಯಿಂದ ಸಾಕಷ್ಟು ಕಲಿತಿದ್ದೇನೆ ಎಂದ ಅವರು, ದಾವಣಗೆರೆಯಲ್ಲಿ ಎಸ್.ಎಸ್ ಟ್ರಸ್ಟಿಂದ ಬಿಪಿಎಲ್ನವರಿಗೆ ಈಗಾಗಲೇ ಉಚಿತ ಡಯಾಲಿಸಿಸ್, ಮಹಿಳೆಯರಿಗೆ ಉಚಿತ ಡಿಲವರಿ, ಕಣ್ಣಿನ ಪೊರೆ ಚಿಕಿತ್ಸೆ, ದಂತ ಚಿಕಿತ್ಸೆ ಹೀಗೆ ಅನೇಕ ಆರೋಗ್ಯ ಸೇವೆಗಳನ್ನು ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಕ್ಕೂ ವಿಸ್ತರಿಸುತ್ತೇವೆ ಎಂದು ತಿಳಿಸಿದರು.
ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅಧ್ಯಕ್ಷತೆ ವಹಿಸಿ ಮಾತನಾಡಿ, ತಳಮಟ್ಟದಿಂದ ಕಾರ್ಯಕರ್ತರು ಕೆಲಸ ಮಾಡಬೇಕು. ಮತ ಹಾಕಿ ನಂತರ ಕೆಲಸ ಕೇಳಿ, ಪಕ್ಷದ ಕೆಲಸ ಹಾಗೂ ನೀವು ಹೇಳಿದ ಕೆಲಸ ಮಾಡುತ್ತೇನೆ. ತಾಳ್ಮೆ ಇರಲಿ ಎಂದರು.
ಈಗಾಗಲೇ ಹರಪನಹಳ್ಳಿ ಕ್ಷೇತ್ರಕ್ಕೆ ನಾನು ಸಾಕಷ್ಟು ಅನುದಾನ ತಂದಿದ್ದೇನೆ. ಜೂನ್ ತಿಂಗಳಲ್ಲಿ ಇನ್ನೂ 100 ಕೋಟಿ ಅನುದಾನ ಬರುತ್ತೆ ಎಂದು ಅವರು ತಿಳಿಸಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಮಾತನಾಡಿ, ಪ್ರತಿ ಹಳ್ಳಿ, ಪ್ರತಿ ಪಂಚಾಯ್ತಿಯಲ್ಲೂ ಕಾಂಗ್ರೆಸ್ ಜೀವಂತವಿದೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ ಎಂದು ಕೋರಿದರು.
ವಿಜಯನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿರಾಜ್ ಶೇಕ್ ಮಾತನಾಡಿ, ದೇಶದಲ್ಲಿ ವೈರತ್ನದ ರಾಜಕಾರಣ ನಡೆಯುತ್ತಲಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬಿಜೆಪಿ ವಿರುದ್ಧ ಮಾತನಾಡುವವರ ಧ್ವನಿ ಹತ್ತಿಕ್ಕುತ್ತಿದೆ ಎಂದ ಅವರು, ಅದಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಿ ಎಂದರು.
ಮುಖಂಡರಾದ ಸಿ.ಚಂದ್ರಶೇಖರಭಟ್, ಪಿ.ಮಹಾಬಲೇಶ್ವರಗೌಡ, ಡಿ.ಬಸವರಾಜ, ವೈ.ಕೆ.ಬಿ.ದುರುಗಪ್ಪ, ಎಂ.ರಾಜಶೇಖರ, ಅಬ್ದುಲ್ ರಹಿಮಾನ್ ಕೋಡಿಹಳ್ಳಿ ಭೀಮಣ್ಣ, ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಎಂದು ಮನವಿ ಮಾಡಿದರು.
