ಮೆಕ್ಕೆಜೋಳದ ಹೊಲದಲ್ಲಿ ಅವಿತು ಕುಳಿತಿದ್ದ ಚಿರತೆ ಜನರನ್ನು ನೋಡಿ ಭೀತಿಯಿಂದ ಓಡ ತೊಡಗಿದಾಗ ಪ್ರಾಣದ ಭಯದಿಂದ ಜನರು ಕಲ್ಲಿನಿಂದ ಒಡೆಯಲು ಶುರು ಮಾಡಿದ್ದಾರೆ. ನಂತರ ಜನರೇ ಆ ಚಿರತೆ ಹಿಡಿದು ಕಾಲು ಕಟ್ಟಿದ್ದಾರೆ. ನಂತರ ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ನಿತ್ರಾಣಗೊಂಡಿದ್ದ ಚಿರತೆಯನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರು ಗ್ರಾಮದಲ್ಲಿ ನಡೆದಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಚಿರತೆಯೊಂದು ಗ್ರಾಮದ ಸರಹದ್ದಿನಲ್ಲಿ ಓಡಾಟ ನಡೆಸಿ ಭಯ ಹುಟ್ಟಿಸಿತ್ತು. ಅಲ್ಲದೆ ನಾಲ್ವರ ಮೇಲೆ ದಾಳಿ ಮಾಡಿತ್ತು. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದರು. ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕಾರಣದಿಂದ ಅವಿತು ಕುಳಿತಿದ್ದ ಚಿರತೆ ಕಂಡು ಇಲ್ಲಿನ ಜನರು ತಾವೇ ಕೈಯಲ್ಲಿ ದೊಣ್ಣೆ ಹಿಡಿದು ಚಿರತೆ ಸೆರೆ ಹಿಡಿದಿದ್ದಾರೆ.
ಹೊನ್ನಾಳಿ ಹಾಗೂ ನ್ಯಾಮತಿ ಭಾಗದಲ್ಲಿ ಆಗಾಗ್ಗೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಹೊನ್ನಾಳಿ ತಾಲೂಕಿನ ಕೋಟೆ ಮಲ್ಲೂರು ಭಾಗದಲ್ಲಿ ಚಿರತೆ ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿತ್ತು. ಜನರು ಹೊಲ ತೋಟಗಳಿಗೆ ತೆರಳಲು ಭಯ ಬೀಳುವಂತೆ ಸನ್ನಿವೇಶ ಸೃಷ್ಟಿಯಾಗಿತ್ತು.
ಕೆಲವರು ಹೊಲಕ್ಕೆ ಹೋಗುವಾಗ ಮೆಕ್ಕೆಜೋಳದ ಹೊಲದಲ್ಲಿ ಚಿರತೆಯು ಅವಿತು ಕುಳಿತಿದೆ. ಇದನ್ನು ಅಲ್ಲಿನ ಜನರು ಗಮನಿಸಿದ್ದಾರೆ. ಬಳಿಕ ಹಿಂಡು ಹಿಂಡಾಗಿ ಬಂದ ಜನ ದೊಣ್ಣೆ ಹಿಡಿದು ಒಟ್ಟಿಗೆ ನುಗ್ಗಿದ್ದಾರೆ. ಇವರಿಂದ ತಪ್ಪಿಸಿಕೊಂಡು ಓಡಲು ಶುರು ಮಾಡಿದ ಚಿರತೆಗೆ ಕಲ್ಲುಗಳಿಂದ ಹೊಡೆದಿದ್ದಾರೆ. ಬಳಿಕ ಚಿರತೆಯನ್ನು ಹಿಡಿದು ಕಾಲು ಕಟ್ಟಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಚಿರತೆಯನ್ನು ರಕ್ಷಣೆ ಮಾಡಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದು, “ಚಿರತೆ ಕಳೆದ ಮೂರ್ನಾಲ್ಕು ದಿವಸದಿಂದ ಜ್ಚರದಿಂದ ಬಳಲಿದೆ. ಹಾಗಾಗಿ ಮೆಕ್ಕೆಜೋಳದ ಹೊಲದಲ್ಲಿ ಮಲಗುತ್ತಿತ್ತು. ಈ ಚಿರತೆಗೆ 108 ಡಿಗ್ರಿ ತಾಪಾಮಾನವಿದ್ದು, ಬದುಕಿದ್ದೇ ಹೆಚ್ಚು. ಹೀಗಾಗಿ ಚಿರತೆ ನಿತ್ರಾಣಗೊಂಡು ಓಡಾಡಲೂ ಆಗದೆ ಜನರಿಗೆ ಸಿಕ್ಕಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಸುಧಾಕರ್ ದುರ್ವರ್ತನೆಗೆ ಬೇಸತ್ತು ಪಕ್ಷಾಂತರ: ಮಾಜಿ ಶಾಸಕ ಬಚ್ಚೇಗೌಡ
ನಿತ್ರಾಣಗೊಂಡ ಚಿರತೆಗೆ ಡಿಎಫ್ಒ ಶಶಿಧರ್ ಶಿವಮೊಗ್ಗದ ತ್ಯಾವರೆಕೊಪ್ಪದಿಂದ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಚಿರತೆ ಬದುಕುಳಿದಿದೆ. ಸದ್ಯ ಚಿರತೆಗೆ ಚಿಕಿತ್ಸೆ ನೀಡಲಾಗಿದ್ದು, ಗುಣಮುಖವಾದ ನಂತರ ರೆಸ್ಕ್ಯೂ ಸೆಂಟರ್ಗೆ ಚಿರತೆ ಬಿಡಲಾಗುವುದೆಂದು ಡಿಎಫ್ಒ ಶಶಿಧರ್ ತಿಳಿಸಿದ್ದಾರೆ.
