ಗ್ರಾಮೀಣ ಪ್ರದೇಶಗಳ ಮತದಾರರಲ್ಲಿ ಕಡ್ಡಾಯ ಮತದಾನದ ಬಗ್ಗೆ ಮಹಿಳಾ ಸ್ವ-ಸಹಾಯ ಸಂಘಗಳು ಹೆಚ್ಚು ಜಾಗೃತಿ ಮೂಡಿಸಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಾಲೂಕಿನ ಮತದಾನ ಪ್ರಮಾಣ ಹೆಚ್ಚಳಕ್ಕೆ ಶ್ರಮವಹಿಸಬೇಕು ಎಂದು ಗದಗ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿ ಸಿ ಬಿ ದೇವರಮನಿ ಹೇಳಿದರು.
ಗದಗ ಜಿಲ್ಲಾ ಮತ್ತು ನರಗುಂದ ತಾಲೂಕು ಚುನಾವಣೆ ಸ್ವೀಪ್ ಸಮಿತಿಯಿಂದ ನರಗುಂದ ನಗರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಮಾತನಾಡಿದರು.
“ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಸಂಘಟನೆಗಳು ಪ್ರಭಲವಾಗಿವೆ. ಗ್ರಾಮೀಣ ಪ್ರದೇಶದ ಜನರ ಜತೆ ನಿರಂತರವಾಗಿ ಒಡನಾಟ ಇಟ್ಟುಕೊಂಡಿರುವ ಮಹಿಳಾ ಸಂಘಟನೆಗಳು ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ವಲಸೆ ಹೋಗಿದ್ದರೆ ಅಂತಹ ಕುಟುಂಬಗಳ ಸದಸ್ಯರನ್ನು ಸಂಪರ್ಕಿಸಿ ಮತದಾನದ ದಿನದಂದು ಕರೆತರುವ ಕೆಲಸವಾಗಬೇಕು. ಗ್ರಾಮೀಣ ಮಟ್ಟದಲ್ಲಿ ಇತಂಹ ಕಾರ್ಯವನ್ನು ಮಹಿಳಾ ಸಂಘಗಳು ಮಾಡಿದರೆ ತಾಲೂಕಿನ ಮತದಾನ ಪ್ರಮಾಣ ಗಣನೀಯ ಹೆಚ್ಚಳಕ್ಕೆ ಸಹಾಯಕವಾಗುತ್ತದೆ” ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವ ಬಿ ಮಾತನಾಡಿ, “ಮತದಾನ ದಿನ ರಜೆ ಸಿಕ್ಕಿತೆಂದು ಅನ್ಯ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬೇಡಿ. ಸಂವಿಧಾನ ಭವಿಷ್ಯದ ದೇಶದ ಭದ್ರತೆಗಾಗಿ ಮತದಾನ ಎಂಬ ಹಕ್ಕನ್ನು ನಮಗೆ ನೀಡಿದೆ. ನಮ್ಮ ಹಕ್ಕನ್ನು ಮತದಾನ ದಿನ ನಾವು ಮರೆತರೆ ನಮ್ಮ ಹಕ್ಕಿಗೆ ನಾವು ಮಾಡಿದ ಅವಮಾನ ಎಂಬಂತೆ. ಹೀಗಾಗಿ ತಪ್ಪದೇ ಮತದಾನ ಮಾಡಿ ನಮ್ಮ ಗೌರವವನ್ನು ಕಾಪಾಡಿಕೊಳ್ಳುವುದರ ಜತೆಗೆ ದೇಶದ ಗೌರವವನ್ನು ಎತ್ತಿ ಹಿಡಿಯೋಣ” ಎಂದರು.
ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಡಾ ಎಚ್ ಬಿ ಹುಲಗಣ್ಣವರ ಮಾತನಾಡಿ, “ಎಲ್ಲ ದಾನಕ್ಕಿಂತ ಮತದಾನ ಶ್ರೇಷ್ಟ ದಾನವಾಗಿದೆ. ಮತದಾನ ದಿನ ಬದ್ಧತೆಯಿಂದ, ಕಾಳಜಿಯಿಂದ ಮತದಾನ ಕಾರ್ಯ ಸುಲಲಿತವಾಗಿ ನಡೆಯುವಂತಾಗಬೇಕು. ಇದಕ್ಕೆ ನಮ್ಮೆಲ್ಲ ಸಿಬ್ಬಂದಿ ವರ್ಗದ ಸಹಕಾರ ಅವಶ್ಯಕ” ಎಂದು ತಿಳಿಸಿದರು.
ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯತ್ ನರಗುಂದದ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದರ ಮಾತನಾಡಿ, “ಕಡ್ಡಾಯ ಮತದಾನಕ್ಕೆ ತಾಲೂಕು ಸ್ವೀಪ್ ಸಮಿತಿಯಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಸಾರ್ವಜನಿಕರು ಮತದಾನದಿಂದ ತಪ್ಪಿಸಿಕೊಳ್ಳದೇ ತಮ್ಮ ಹಕ್ಕನ್ನು ಮತದಾನ ದಿನ ಚಲಾಯಿಸಿ ಯೋಗ್ಯ ಅಭ್ಯರ್ಥಿಯನ್ನು ಆಯ್ಕೆಮಾಡಿ” ಎಂದು ತಿಳಿಸಿದರು.
ಕಡ್ಡಾಯ ಮತದಾನ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಎನ್.ಆರ್.ಎಲ್.ಎಂ ಮಹಿಳಾ ಸಂಘಟನೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿಗಳು, ಪುರಸಭೆ ಕಾರ್ಯಾಲಯದ ಸಿಬ್ಬಂದಿ ಹಾಗೂ ತಾಲೂಕು ಪಂಚಾಯತ ಸಿಬ್ಬಂದಿ ವರ್ಗ ಮತ್ತು ತಾಲೂಕಿನ ೧೩ ಗ್ರಾಮ ಪಂಚಾಯತಗಳ ಸಿಬ್ಬಂದಿ ವರ್ಗಕ್ಕೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಆನಂದ ಭೋವಿ ಅವರು ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ನಗರದ ಪುರಸಭೆ ಮುಖ್ಯ ಕಚೇರಿಯಿಂದ ಮತದಾನ ಜಾಗೃತಿ ಜಾಥಾ ಆರಂಭವಾಗಿ ನಗರದ ಟಿಎಂಸಿ ರೋಡ್, ಮಾರ್ಕೆಟ್ ಮುಖ್ಯ ರಸ್ತೆ, ಬಸವೇಶ್ವರ ಸರ್ಕಲ್, ಮೂಲಕ ಸಂಚರಿಸಿ ನಗರದ ಶಿವಾಜಿ ಸರ್ಕಲ್ನಲ್ಲಿ ಮತದಾನ ಕುರಿತಾದ ವಿಶೇಷ ಘೋಷಣೆಗಳನ್ನು ಕೂಗುತ್ತಾ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ ಕಡ್ಡಾಯ ಮತದಾನ ಕುರಿತು ಜಾಗೃತಿ ಮೂಡಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಬಿಜೆಪಿ ನಾಯಕರದ್ದು ಭೂ ಮಾಲಿಕ ಪಕ್ಷ: ಕಿಮ್ಮನೆ ರತ್ನಾಕರ್
ಕಡ್ಡಾಯ ಮತದಾನ ಜಾಗೃತಿ ಜಾಥಾದಲ್ಲಿ ತಹಶೀಲ್ದಾರ್ ಶ್ರೀಶೈಲ ತಳವಾರ, ಪುರಸಭೆ ಮುಖ್ಯ ಅಧಿಕಾರಿ ಅಮಿತ್ ತಾರದಾಳೆ, ಸಿಡಿಪಿಓ ಪ್ರದೀಪ ನಾಡಿಗೇರ, ಟಿಎಚ್ಒ ರೇಣುಕಾ, ಕೆ ಎಸ್ ಹಾದಿಮನಿ, ಸಹಾಯಕ ನಿರ್ದೇಶಕ, ಪಂಚಾಯತ್ ರಾಜ್ ಸಂತೋಷಕುಮಾರ್ ಪಾಟೀಲ್ ಸೇರಿದಂತೆ ಬಹುತೇಕರು ಇದ್ದರು.
