ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟವು ದೆಹಲಿಯಲ್ಲಿ ಅಪ್ಪಿಕೊಳ್ಳುತ್ತಿದೆ, ಕೇರಳದಲ್ಲಿ ಭಿಕ್ಷೆ ಬೇಡುತ್ತಿದೆ, ಕರ್ನಾಟಕದಲ್ಲಿ ದಬ್ಬಾಳಿಕೆ ನಡೆಸುತ್ತಿದೆ ಎಂದು ಕೇಂದ್ರ ಕುಟುಂಬ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಮಂಗಳೂರಿಗೆ ಬಂದಿದ್ದ ಸ್ಮೃತಿ ಇರಾನಿ ಉದ್ಯಮಿಗಳ ಜೊತೆ ಸಂವಾದ ನಡೆಸಿದ್ದಾರೆ. ಬಳಿಕ ರ್ಯಾಲಿಯಲ್ಲಿ ಮಾತನಾಡಿದ ಅವರು ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
“ವಯನಾಡಿನಲ್ಲಿ (ಕಾಂಗ್ರೆಸ್ ನಾಯಕ) ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ ಬಳಿಕ ಕೆಲವು ಸಮಸ್ಯೆಗಳು ಎದುರಾಗಿವೆ. ಅವರು ದಕ್ಷಿಣ ಭಾರತದಿಂದ ಸ್ಪರ್ಧಿಸುತ್ತಿರುವುದಕ್ಕೆ ಎಡಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಉತ್ತರ ಪ್ರದೇಶದಲ್ಲಿ ಏಕೆ ಸ್ಪರ್ಧಿಸುತ್ತಿಲ್ಲವೆಂದು ಪ್ರಶ್ನಿಸಿದ್ದಾರೆ. ಆದರೆ, ಅದೇ ಎಡಪಕ್ಷದ ಸದಸ್ಯರು ದೆಹಲಿಗೆ ಹೋದಾಗ ಅವರನ್ನು ತಬ್ಬಿಕೊಳ್ಳುವುದು ಕಂಡುಬರುತ್ತದೆ. ಈಗ ದೆಹಲಿಯಲ್ಲಿ ಅಪ್ಪಿಕೊಳ್ಳುವುದು, ಕೇರಳದಲ್ಲಿ ಭಿಕ್ಷೆ ಬೇಡುವುದು, ಕರ್ನಾಟಕದಲ್ಲಿ ದಬ್ಬಾಳಿಕೆ ನಡೆಸುವುದು ಎಂಬ ಸ್ಥಿತಿ ಬಂದಿದೆ” ಎಂದು ಹೇಳಿದ್ದಾರೆ.
ಸಂಜೆ ನಡೆದ ಸಭೆಯಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, “ಮಹಿಳೆಯರು ಗಂಭೀರ ರಾಜಕೀಯ ವಿಷಯಗಳತ್ತ ಗಮನ ಹರಿಸಬೇಕು. ರಾಜಕೀಯವನ್ನು ಗಂಭೀರವಾಗಿ ಪರಿಗಣಿಸುವ ಮಹಿಳೆಯರು ಮಾತ್ರ ಸಾಮಾಜಿಕ ಮತ್ತು ರಾಜಕೀಯವಾಗಿ ಮೇಲೆ ಏರಲು ಸಾಧ್ಯವಾಗುತ್ತದೆ. ಮತದಾನ ಮಾಡುವುದು ಮತ್ತು ನೀವು ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸುವುದು ಬಹಳ ಮುಖ್ಯವಾದ ವಿಷಯ” ಎಂದು ಹೇಳಿದ್ದಾರೆ.