ಪ್ರೀತಿಸುವ ಗಂಡಿನ ರೂಪಿಗೆ ‘ಬಾರಯ್ಯ ಮಮಬಂಧು’ ಕೃತಿ ಒಂದು ವಿಶಿಷ್ಟ ಪ್ರಯೋಗವಾಗಿದೆ ಎಂದು ವಿಮರ್ಶಕಿ ಅನುಸೂಯ ಕಾಂಬ್ಳೆ ಅಭಿಪ್ರಾಪಟ್ಟರು.
ತುಮಕೂರು ನಗರದ ಜನಚಳುವಳಿ ಕೇಂದ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ, ಓದು ಲೇಖಕಿ ಬಳಗ, ವಿಚಾರ ಮಂಟಪ ಮತ್ತು ಸಾಕ್ಷಿ ಪ್ರಕಾಶನ ತುಮಕೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ, ಎಚ್ ಎಸ್ ಶ್ರೀಮತಿ ಅವರು ಅನುವಾದಿಸಿರುವ ಬೆಲ್ ಹುಕ್ಸ್ ಅವರ ‘ಬಾರಯ್ಯ ಮಮಬಂಧು’ ಕೃತಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಭಾರತೀಯ ಸ್ತ್ರೀವಾದದ ವಿಸ್ತರಣೆಯಾಗಿ ಈ ಕೃತಿ ಪ್ರಕಟವಾಗಿದ್ದು, ಇಂತಹ ಹಲವು ಕೃತಿಗಳ ಮೂಲಕ ಪಾಶ್ಚಾತ್ಯರ ಸ್ತ್ರೀವಾದಿ ತತ್ವಗಳನ್ನು ನಮಗೆ ಪರಿಚಯಿಸುವ ಕೆಲಸವನ್ನು ಶ್ರೀಮತಿಯವರು ಮಾಡುತ್ತಿದ್ದಾರೆ. ಇದರಲ್ಲಿ ಪುರುಷರನ್ನೂ ಒಳಗೊಳ್ಳುವ ಸ್ತ್ರೀವಾದಿ ಚಿಂತನೆಯಿದೆ” ಎಂದರು.
“ಸ್ತ್ರೀವಾದದ ಕಣ್ಣಿನಿಂದ ಪುರುಷನನ್ನು ಕಾಣುವ ಮೂಲಕ ಪ್ರೀತಿಸುವ ಗಂಡನ್ನು ನಿರ್ಮಿಸುವ ಹಾದಿಯನ್ನು ಈ ಕೃತಿ ಕಾಣಿಸುತ್ತದೆ. ಇದನ್ನು ಮಹಿಳೆಯರಿಗಿಂತಲೂ ಪುರುಷರು ಹೆಚ್ಚು ಓದಬೇಕನಿಸುತ್ತದೆ. ಏಕೆಂದರೆ, ತಾವು ಏನನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ಇದರಿಂದ ಪುರುಷರು ಅರಿಯಬಹುದು. ತಾವು ಕಳೆದುಕೊಂಡದ್ದು ಏನೆಂಬುದನ್ನು ಅರಿತಾಗಲೇ ನಾವು ಪಡೆದುಕೊಳ್ಳಬೇಕಾದ್ದು ಏನೆಂಬುದು ನಮಗೆ ತಿಳಿಯುತ್ತದೆ. ಸ್ತ್ರೀವಾದಿ ಪುರುಷತ್ವವನ್ನು ಕುರಿತು ಈ ಕೃತಿ ಮಾತನಾಡುತ್ತದೆ. ಇಂತಹ ಕೃತಿಗಳನ್ನು ಮತ್ತೆ ಮತ್ತೆ ಓದುವ ಮೂಲಕ ನಮ್ಮನ್ನು ನಾವು ಅರಿಯಬೇಕು” ಎಂದರು.
ಕೃತಿಯ ಅನುವಾದಕಿ ಎಚ್ ಎಸ್ ಶ್ರೀಮತಿ ಮಾತನಾಡಿ, “ಇಡೀ ಪಿತೃ ಪ್ರಧಾನತೆಯ ಚಿಂತನೆಗಳು ಕಟ್ಟುವುದೇ ಗಂಡು ಹೆಣ್ಣಿನ ಲೈಂಗಿಕ ಸಂಬಂಧವನ್ನು ರಾಜಕಾರಣಕ್ಕೆ ದಾಳವನ್ನಾಗಿ ಮಾಡಿಕೊಳ್ಳುವ ಮೂಲಕ. ಇದಕ್ಕೆ ಪೂರಕವಾಗಿ ನಿರ್ಮಿಸಲಾಗಿರುವ ಒಂದು ಸಂಸ್ಥೆ ವಿವಾಹ. ಇದಕ್ಕೂ ಮುನ್ನ ಸಮಾಜದಲ್ಲಿ ಲೈಂಗಿಕ ಸ್ವಾತಂತ್ರ್ಯವಿತ್ತು. ಮುಂದೆ ಮುಂದೆ ಪ್ರಬಲರಲ್ಲಿ ಅಧಿಕಾರ, ದುರ್ಬಲರಲ್ಲಿ ಅಧೀನತೆ ಹೀಗೆ ಸಾಮಾಜಿಕ ವ್ಯವಸ್ಥೆ ರೂಪುಗೊಳ್ಳುತ್ತಾ ಬಂದು ಇಂದಿನ ಸ್ತ್ರೀ-ಪುರುಷರ ಸಂಬಂಧಗಳು ಅಧಿಕಾರ ಮತ್ತು ಅದೀನತೆಯ ಹಿನ್ನೆಲೆಯಲ್ಲಿ ರೂಪುಗೊಳ್ಳುವಂತಾಗಿದೆ. ಇದರಿಂದ ಸ್ತ್ರೀ-ಪುರುಷರಿಬ್ಬರೂ ಬಿಡಿಗಡೆಯಾಗಬೇಕಿದೆ. ಪ್ರೀತಿ ಮತ್ತು ಮಾನವೀಯತೆಯ ನೆಲೆಯಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಗೌರವಿಸಿಕೊಂಡು ಬದುಕಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬೆಲ್ ಹುಕ್ಸ್ ಸೇರಿದಂತೆ ಮೊದಲಾದ ಸ್ತ್ರೀವಾದಿ ಚಿಂತಕರ ಚಿಂತನೆಗಳು ನಮಗೆ ದಾರಿ ತೋರಿಸುತ್ತವೆ” ಎಂದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಸಂವಿಧಾನದ ಉಳಿವಿಗಾಗಿ ʼಶಾಂತಿಯ ತೋಟ ದೇಶ ಉಳಿಸಿʼ ಸಂಕಲ್ಪ ಯಾತ್ರೆ
ಕಾರ್ಯಕ್ರಮದಲ್ಲಿ ಕಲೇಸಂ ಜಿಲ್ಲಾಧ್ಯಕ್ಷ್ಯೆ ಮಲ್ಲಿಕಾ ಬಸವರಾಜು, ಲೇಖಕಿ ಓದು ಬಳಗದ ಸಂಚಾಲಕಿ ಆಶಾ ಬಗ್ಗನಡು, ವಿಚಾರ ಮಂಟಪದ ವರುಣ್ ರಾಜ್, ಡಾ ಅರುಂದತಿ, ಡಾ ಗೋವಿಂದರಾಯ, ಗೀತಾಲಕ್ಷ್ಮಿ, ಸ್ವಾಮಿ ಎಸ್ ಎನ್, ವಾಣಿ ಸತೀಶ್, ಕಲ್ಯಾಣಿ, ರಂಗಮ್ಮ ಹೊದೆಕಲ್, ನವೀನ್ ಕುಮಾರ್ ಪಿ ಅರ್ ಮರಿಯಂ ಬಿ, ರಾಣಿ ಚಂದ್ರಶೇಖರ್ ಸೇರಿದಂತೆ ಇತರರು ಇದ್ದರು.
