ಜನರ ಕೆಂಗಣ್ಣಿಗೆ ಗುರಿಯಾಗುವ ಬಂಡವಾಳಶಾಹಿ ಪಕ್ಷಗಳು ಹೊಸ ಮುಖಗಳೊಂದಿಗೆ, ಹೊಸ ಗ್ಯಾರಂಟಿಗಳೊಂದಿಗೆ ಮತ್ತೆ ಜನರ ಬಳಿಗೆ ಬರುತ್ತಿವೆ. ಇನ್ನೊಂದೆಡೆ ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿರುವ ಪಕ್ಷ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವ ಭರವಸೆ ಸುಳ್ಳಾಗಿದೆ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಎಸ್ಯುಸಿಐ(ಕಮ್ಯೂನಿಸ್ಟ್) ಪಕ್ಷದಿಂದ ನಾಗಜ್ಯೋತಿ ಬಿ ಎನ್ ಆರೋಪಿಸಿದರು.
ವಿಜಯಪುರ ಲೋಕಸಭಾ ಕ್ಷೇತ್ರದ ಎಸ್ಯುಸಿಐ(ಕಮ್ಯೂನಿಸ್ಟ್) ಪಕ್ಷದಿಂದ ಶುಕ್ರವಾರ ನಾಮಪತ್ರ ಸಲ್ಲಿಸಿ ಮಾತನಾಡಿದರು.
“ಪ್ರಸ್ತುತ ಭಾರತದ ಯುವಜನರು ನಿರುದ್ಯೋಗ ಎದುರಿಸಲಾಗದೆ ಯುದ್ಧಪೀಡಿತ ರಷ್ಯಾ, ಇಸ್ರೇಲ್ ಮೊದಲಾದ ರಾಷ್ಟ್ರಗಳಿಗೆ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ಇನ್ನೊಂದೆಡೆ ಜಾಗತಿಕ ಹಸಿವಿನ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಪಾತಾಳದಲ್ಲಿದೆ” ಎಂದು ಹೇಳಿದರು.
“ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ನೀರಿಗಾಗಿ ಹಾಹಾಕಾರ ಇದ್ದರೂ ಕೂಡಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಕ್ಷುಲ್ಲಕ ರಾಜಕೀಯದಲ್ಲಿ ಮುಳುಗಿವೆಯೇ ಹೊರತು ಜನರ ಸಂಕಷ್ಟಗಳಿಗೆ ಗಮನ ಹರಿಸುತ್ತಿಲ್ಲ” ಎಂದರು.
ಜನಸಮುದಾಯ ಹಾಗೂ ರೈತ, ಕೃಷಿ, ಕಾರ್ಮಿಕರಿಗೆ ಅವಶ್ಯಕತೆ ಇರುವುದು ಉದ್ಯೋಗ, ಶಿಕ್ಷಣ, ವಸತಿಗಳಂತಹ ಸೌಲಭ್ಯಗಳು. ಇಂತಹ ಜ್ವಲಂತ ಸಮಸ್ಯೆಗಳ ವಿರುದ್ಧ ಲೋಕಸಭೆಯಲ್ಲಿ ಧ್ವನಿ ಎತ್ತಲು ಜನ ಹೋರಾಟಗಳಿಂದ ಹೊರಹೊಮ್ಮಿದ ಅಭ್ಯರ್ಥಿ ನಾಗಜ್ಯೋತಿ ಬಿ ಎನ್ ಅವರು ಎಸ್ಯುಸಿಐ(ಕಮ್ಯೂನಿಸ್ಟ್) ಪಕ್ಷದ ನೇತೃತ್ವದಲ್ಲಿ ಕಣಕ್ಕಿಳಿಯಲಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಕಾರು ಮತ್ತು ಟ್ರಕ್ ನಡುವೆ ಭೀಕರ್ ರಸ್ತೆ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು
ಸಂಘಟನಾಕಾರರು ಮಾತನಾಡಿ, “ವಿಜಯಪುರ ಜಿಲ್ಲೆಯ ಎಲ್ಲ ಮತದಾರರು ಎಸ್ಯುಸಿಐ ಕಮ್ಯೂನಿಸ್ಟ್ ಪಕ್ಷ ಬೆಳೆಸಿದ ಹೋರಾಟ ಚಳವಳಿಗಳನ್ನು ಗುರುತಿಸಿ, ಜನಹೋರಾಟದಲ್ಲಿ ಹೊರಹೊಮ್ಮಿದ ಅಭ್ಯರ್ಥಿ ಕಾಮ್ರೇಡ್ ನಾಗಜ್ಯೋತಿ ಬಿ ಎನ್ ರವರನ್ನು ಗೆಲ್ಲಿಸಬೇಕು” ಎಂದು ಮನವಿ ಮಾಡಿದರು.
ನಾಮಪತ್ರ ಸಲ್ಲಿಸುವಾಗ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಬಿ ಭಗವಾನರೆಡ್ಡಿ, ಹಿರಿಯರಾದ ವಿ ಎ ಪಾಟೀಲ, ವಕೀಲ ಸಂಗಾರೆಡ್ಡಿ ದೇಸಾಯಿ, ಪಕ್ಷದ ಜಿಲ್ಲಾ ಸಮಿತಿಯ ಸದಸ್ಯ ಸಿದ್ದಲಿಂಗ ಬಾಗೇವಾಡಿ ಇದ್ದರು.
