“ಬಿಜೆಪಿ-ಜೆಡಿಎಸ್ ಮೈತ್ರಿಯಾದ ಬಳಿಕ ತೆನೆಹೊತ್ತ ಮಹಿಳೆ ಚಿಹ್ನೆ ಇರುತ್ತಾ ಅಥವಾ ಕಮಲದ ಚಿಹ್ನೆ ಇರುತ್ತಾ ಎಂದು ಕೇಳುತ್ತಿದ್ದಾರೆ. ಈ ಬಗ್ಗೆ ಜನರಿಗೆ ಅನುಮಾನ ಗೊಂದಲ ಬೇಡ. ತೆನೆಹೊತ್ತ ಮಹಿಳೆ ನಮ್ಮ ಚಿಹ್ನೆಗೆ ಕಮಲ ಎಂದು ಹೊಸದಾಗಿ ನಾಮಕರಣ ಮಾಡಿದ್ದೇವೆ” ಎಂದು ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಮಂಚಿಗನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಅವರು, “ದೇಶಕ್ಕಾಗಿ ನಡೆಯುತ್ತಿರುವ ಚುನಾವಣೆ ಲೋಕಸಭಾ ಚುನಾವಣೆ. ಅಭಿವೃದ್ಧಿ ವಿಚಾರದಲ್ಲಿ ನಮಗೆ ಯಾರೂ ಸರಿಸಾಟಿಯೇ ಇಲ್ಲ” ಎಂದಿದ್ದಾರೆ.
“ಕಾಂಗ್ರೆಸ್ ನಾಯಕರು ಮಾತು ಎತ್ತಿದರೇ, ಎಚ್.ಡಿ.ರೇವಣ್ಣ ದುರಹಂಕಾರಿ ಎಂದೆನ್ನುತ್ತಾರೆ. ಆದರೆ, ರೇವಣ್ಣನವರಿಗೆ ಸ್ವಲ್ಪ ಸಿಟ್ಟು ಜಾಸ್ತಿ ಇದೆ. ಆದರೆ, ಅವರ ಹೃದಯದಲ್ಲಿ ಪ್ರೀತಿ ಇದೆ. ರೇವಣ್ಣನವರು ಸ್ವಂತ ಕುಟುಂಬವನ್ನೂ ಮರೆತು ಜನರಿಗಾಗಿ ದುಡಿಯುತ್ತಾರೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅಬಕಾರಿ ಪ್ರಕರಣ | ಇಡಿ ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ; ಏ.15ರಂದು ವಿಚಾರಣೆ
“ನನ್ನ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಎಚ್.ಡಿ ರೇವಣ್ಣ ಅವರ ಕಣ್ಣೀರು ಒರೆಸುವ ಕೆಲಸ ಮಾಡಿ. ರೇವಣ್ಣ ಅವರಿಗೆ ಬಲತುಂಬುವ ಕೆಲಸ ಮಾಡಿ. ನಾನು ಗೆದ್ದ ಬಳಿಕ ಈ ಭಾಗದಲ್ಲಿ ಇಲ್ಲಿಯವರೆಗೂ ಏನೇನೂ ಕೆಲಸ ಮಾಡಿದ್ದೇನೆಂದು ಅರ್ಧ ಗಂಟೆವರೆಗೂ ಹೇಳಬಲ್ಲೇ, ಮನೆ ಮನೆಗೆ ನೀರು ತರಿಸುವ ಕೆಲಸ ಮಾಡಿದ್ದೇನೆ. ₹4907 ಕೋಟಿ ರೂಪಾಯಿ ಅನುದಾನ ತಂದಿದ್ದೇನೆ. ರಸ್ತೆಗಳನ್ನ ಮಾಡಿಸಿದ್ದೀನಿ” ಎಂದಿದ್ದಾರೆ.
“ಆರ್ಎಸ್ಎಸ್ ಸ್ವಯಂ ಸೇವಕ ವಿಜಯಕುಮಾರ್ ಮೇಲೆ ಹಲ್ಲೆ ಪ್ರಕರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಮೀಲಾಗಿದ್ದಾರೆ. ಪೊಲೀಸರು ಒತ್ತಡಕ್ಕಡ ಸಿಲುಕಿದ್ದಾರೆ. ವಿಜಯಕುಮಾರ್ಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ” ಎಂದು ಹೇಳಿದರು.
“ವಿಜಿಯವರ ಮೇಲೆ ಮಾರಕಾಸ್ತ್ರ ಬಳಸಿ ಹಲ್ಲೆ ಮಾಡಿದ್ದಾರೆ. ತಲೆಗೆ ಕಲ್ಲಿನಿಂದ ಹೊಡೆದಿದ್ದಾರೆ. ಅಂಗಡಿ ನಾಶಪಡಿಸಿದ್ದಾರೆ. ವಿಜಿಯವರು ಹಿಂದುತ್ವಕ್ಕಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರಿಗಿನ್ನೂ ಮದುವೆಯಾಗಿಲ್ಲ. ಅವರ ಬಳಿ ಆಸ್ಪತ್ರೆಗೆ ಕಟ್ಟಲು ಹಣ ಸಹ ಇಲ್ಲ. ಅವರ ತುಂಬಾ ಒಳ್ಳೆಯ ವ್ಯಕ್ತಿ. ಅವರ ಮೇಲೆ ಹಲ್ಲೆ ಮಾಡುವಂತಹವರ ಮನಸ್ಥಿತಿ ಹೇಗಿರಬೇಕು. ವಿಜಿಯವರಿಗೆ ಏನಾದರೂ ಆಗಿದ್ದರೇ, ಅವರ ತಂದೆ-ತಾಯಿಯನ್ನ ಯಾರು ನೋಡಿಕೊಳ್ಳುತ್ತಿದ್ದರು” ಎಂದು ಹೇಳಿದರು.
“ವಿಜಿಯವರ ತಲೆಗೆ ಬಲವಾಗಿ ಪೆಟ್ಟು ಬಿದ್ದಿದ್ದರಿಂದ ಸಬ್ಕಾನ್ಷಿಯಸ್ ಲೆವೆಲ್ನಲ್ಲಿ ಇರಲಿಲ್ಲ. ರಾತ್ರಿ ಸ್ವಲ್ಪ ಚೇತರಿಸಿಕೊಂಡ ಮೇಲೆ ಹೇಳಿಕೆ ಕೊಟ್ಟಿದ್ದಾರೆ. ಈ ಪ್ರಕರಣದಲ್ಲಿ ಕೆಲವರು ರಾತ್ರೋರಾತ್ರಿ ಹಾಸನದಿಂದ ಪೊಲೀಸರಿಗೆ ಫೋನ್ ಮಾಡಿಸಿದ್ದಾರೆ. ಕಿಡಿಗೇಡಿಗಳ ಮೇಲೆ ಪೊಲೀಸರು ಕಠಿಣವಾದ ಕ್ರಮ ಜರುಗಿಸಬೇಕಿತ್ತು. ಆದರೆ ವಿಫಲರಾಗಿದ್ದಾರೆ. ರಾಜಕೀಯ ಒತ್ತಡಕ್ಕೆ ಮಣಿದು ರೌಡಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ” ಎಂದು ಕಿಡಿಕಾರಿದರು.
“ಈ ಬಗ್ಗೆ ಸೂಕ್ತವಾದ ತನಿಖೆಯಾಗಬೇಕು. ಸಂತ್ರಸ್ತರಿಗೆ ನ್ಯಾಯ ಕೊಡಿಸುವುದು ಪೊಲೀಸರ ಜವಾಬ್ದಾರಿಯಾಗಿದೆ. ಜನಪರ ಕೆಲಸ ಮಾಡುವ ಖಾಕಿ ಯಾರೋ ಒಬ್ಬರ ಗುಲಾಮರಾಗಬಾರದು” ಎಂದು ಹೇಳಿದರು.