ರಾಜ್ಯದಲ್ಲಿ ಜಾರಿಗೆ ತಂದ ಐದು ಗ್ಯಾರಂಟಿಗಳು ಬರಗಾಲ ಮತ್ತು ಬೆಲೆ ಏರಿಕೆಯ ಇಂದಿನ ದಿನಮಾನಗಳಲ್ಲಿ ಜನಸಾಮಾನ್ಯರ ಕೈಹಿಡಿದಿವೆ ಎಂದು ಶಿವಮೊಗ್ಗ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಅಭಿಪ್ರಾಯಪಟ್ಟರು.
ತಾಲೂಕಿನ ಸಿರಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಗೆರೆ ಮಾರಿಕಾಂಬಾ ದೇವಸ್ಥಾನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮಾಂತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
“ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ, ಮಹಿಳೆಯರಿಗೆ ವಾರ್ಷಿಕ ₹1 ಲಕ್ಷ ಕುಟುಂಬ ನಿರ್ವಹಣೆ ಭತ್ಯೆ ಸೇರಿದಂತೆ ಅನೇಕ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ. ಗ್ಯಾರಂಟಿ ಯೋಜನೆಗಳು ಶೇ.100ರಷ್ಟು ನಮ್ಮ ಕೈಹಿಡಿಯಲಿವೆ. ಇವುಗಳಿಂದ ಬಿಜೆಪಿಯವರು ಸೇರಿದಂತೆ ಎಲ್ಲ ವರ್ಗದ ಜನರಿಗೂ ಅನುಕೂಲ ಆಗಿದ್ದು, ಆರ್ಥಿಕ ಶಕ್ತಿ ಸಿಕ್ಕಿದೆ” ಎಂದು ಹೇಳಿದರು.
“ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ 60 ಸಾವಿರ ಕುಟುಂಬಗಳು ಒಂದಿಲ್ಲೊಂದು ಯೋಜನೆಯ ಫಲಾನುಭವಿಗಳಾಗಿವೆ. ಫಲಾನುಭವಿಗಳೆಲ್ಲರಿಗೂ ಕಾಂಗ್ರೆಸ್ ಬಗ್ಗೆ ಕೃತಜ್ಞತೆ ಇರುವುದು ನನಗೆ ಶ್ರೀರಕ್ಷೆಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ ಪಲ್ಲವಿ ಮಾತನಾಡಿ, “ತಳಮಟ್ಟದಲ್ಲೆಲ್ಲೂ ನರೇಂದ್ರ ಮೋದಿ ಅಲೆ ಇಲ್ಲ. ಇರುವುದೆಲ್ಲವೂ ರಾಜ್ಯ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ಮತ್ತು ಕಾಂಗ್ರೆಸ್ ಅಲೆ ಎಂದ ಅವರು, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಅವರಿಗೆ ಬೆಂಬಲಿಸಬೇಕು” ಎಂದು ಕೋರಿದರು.
ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, “ಈ ಭಾಗಕ್ಕೆ ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪ ಅವರು ಅತಿ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರೂ ಕೂಡ ಇಲ್ಲಿನ ರೈತರ ನೆರವಿಗೆ ನಿಂತಿದ್ದರು. ಅದೇ ಹಾದಿಯಲ್ಲಿ ಗೀತಾ ಅವರೂ ಕೂಡ ಸಾಗಲಿದ್ದಾರೆ. ಆದ್ದರಿಂದ, ಈ ಚುನಾವಣೆಯಲ್ಲಿ ಗೀತಾ ಶಿವರಾಜ್ಕುಮಾರ್ ಅವರಿಗೆ ಮತ ನೀಡಿ ಹರಸಬೇಕು” ಎಂದರು.
ಕಾಂಗ್ರೆಸ್ ಮುಖಂಡ ಶ್ರೀನಿವಾಸ ಕರಿಯಣ್ಣ ಮಾತನಾಡಿ, “ಗ್ಯಾರಂಟಿ ಯೋಜನೆಗಳಿಂದ ಎಲ್ಲ ಜಾತಿ- ಧರ್ಮಗಳಿಗೆ ಅನುಕೂಲವಾಗಿದೆ. ಕಡುಬಡವರು ಬದುಕು ರೂಪಿಸಿಕೊಂಡಿದ್ದಾರೆ. ಗ್ಯಾರಂಟಿ ಯೋಜನೆ ಋಣ ತೀರಿಸಲು ಸಿಕ್ಕ ಅವಕಾಶವಿದು. ಆದ್ದರಿಂದ, ಇಲ್ಲಿ ಗೀತಕ್ಕ ಅವರಿಗೆ ಮತ ನೀಡಬೇಕು” ಎಂದರು.
“ಸಿರಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೀತಾ ಶಿವರಾಜ್ಕುಮಾರ್ ಪರ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಇಲ್ಲಿ ಹೆಚ್ಚು ಕೂಲಿ ಕಾರ್ಮಿಕರು ಬದುಕು ಕಟ್ಟಿಕೊಂಡಿದ್ದಾರೆ. ಇದರಿಂದ, ಗ್ಯಾರಂಟಿ ಯೋಜನೆಗಳು ಜನರ ಬದುಕಿಗೆ ಆಸರೆಯಾಗಿವೆ” ಎಂದು ಸ್ಥಳೀಯರಾದ ವಿನಾಯಕ, ಮಲೆಶಂಕರ ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಒಕ್ಕಲಿಗರು ಒಗ್ಗೂಡಿ ಮುದ್ದಹನುಮೇಗೌಡರನ್ನು ಗೆಲ್ಲಿಸಬೇಕು: ಶಾಸಕ ಟಿ ಬಿ ಜಯಚಂದ್ರ
ವಿ ನಿಗಮ ಅಧ್ಯಕ್ಷ ಎಸ್ ರವಿಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಾಂತವೀರ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ ಆರ್ ನಾಗರಾಜ, ಲೋಕೇಶಪ್ಪ, ನಿರಂಜನ್, ಧೀರರಾಜ ಹೊನ್ನವಿಲೆ, ಇಕ್ಕೇರಿ ರಮೇಶ್, ಗಿರೀಶ್, ಉಡ್ಡಪ್ಪ, ಮಸ್ಕರ್ ರಾಜಪ್ಪ, ಕೆ ಪಿ ಗಣಪತಿ, ಅಣ್ಣಪ್ಪ, ಕಲೀಂ, ಕೆ ಆರ್ ಲೋಕೇಶ್, ಶ್ರೀನಿವಾಸ, ಕೆ ಸಿ ನಾಗರಾಜ, ನೂರುಲ್ಲಾ, ದೊಡಪ್ಪ, ಶಂಕರಪ್ಪ, ಕೃಷ್ಣಮೂರ್ತಿ ಇದ್ದರು.
