ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವನ್ನು ಕಳೆದುಕೊಳ್ಳಬೇಡಿ, ತಪ್ಪದೆ ಮತದಾನ ಮಾಡಿ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಜನರಲ್ಲಿ ಮನವಿ ಮಾಡಿದ್ದು ಇದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಪ್ರಮುಖ ಕರ್ತವ್ಯ ಎಂದು ತಿಳಿಸಿದ್ದಾರೆ.
2024 ರ ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗದ ‘ಮೈ ವೋಟ್ ಮೈ ವಾಯ್ಸ್’ ಮಿಷನ್ ವಿಡಿಯೋ ಸಂದೇಶದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್, “ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಜೆಗಳು, ಅದು ನಮ್ಮ ದೇಶ. ಸಂವಿಧಾನವು ನಮಗೆ ನಾಗರಿಕರಾಗಿ ಬಹುಸಂಖ್ಯೆಯ ಹಕ್ಕುಗಳನ್ನು ನೀಡುತ್ತದೆ ಆದರೆ ನಾವು ಪ್ರತಿಯೊಬ್ಬರೂ ನಮ್ಮ ಮೇಲೆ ಹೊರಿಸಲಾದ ಕರ್ತವ್ಯವನ್ನು ನಿರ್ವಹಿಸುತ್ತೇವೆ ಎಂಬ ನಿರೀಕ್ಷೆಯಿದೆ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಮತ ಚಲಾಯಿಸುವುದು ಪೌರತ್ವದ ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಮಹಿಳೆಯರನ್ನು ‘ಈ ರೀತಿ’ ಉಲ್ಲೇಖಿಸದಿರಿ: ಮಹತ್ವದ ಕೈಪಿಡಿ ಬಿಡುಗಡೆಗೊಳಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
“ನಾನು ನಿಮ್ಮೆಲ್ಲರಲ್ಲಿಯೂ ವಿನಂತಿಸುತ್ತೇನೆ. ದಯವಿಟ್ಟು ನಮ್ಮ ಮಹಾನ್ ತಾಯ್ನಾಡಿನ ಪ್ರಜೆಗಳಾಗಿ ಜವಾಬ್ದಾರಿಯುತವಾಗಿ ಮತದಾನ ಮಾಡಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ. ಪ್ರತಿ ಐದು ವರ್ಷಗಳಿಗೊಮ್ಮೆ ನಮ್ಮ ದೇಶಕ್ಕಾಗಿ ಐದು ನಿಮಿಷಗಳನ್ನು ಮೀಸಲಿಡಲು ಸಾಧ್ಯವಾಗುವುದಿಲ್ಲದೇ? ಹೆಮ್ಮೆಯಿಂದ ಮತ ಚಲಾಯಿಸೋಣ. ನನ್ನ ಮತ, ನನ್ನ ಧ್ವನಿ” ಎಂದು ಜಸ್ಟಿಸ್ ಡಿವೈ ಚಂದ್ರಚೂಡ್ ಹೇಳಿದರು.
“ಸರ್ಕಾರವನ್ನು ಚುನಾಯಿಸುವಲ್ಲಿ ನಾಗರಿಕರು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಅದಕ್ಕಾಗಿಯೇ ಈ ಸರ್ಕಾರವು ಜನರ ಸರ್ಕಾರ, ಜನರಿಂದ ಮತ್ತು ಜನರಿಗಾಗಿ ಎಂದು ಹೇಳಲಾಗುತ್ತದೆ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು.
ಇದನ್ನು ಓದಿದ್ದೀರಾ? ನ್ಯಾಯಾಂಗದಲ್ಲಿ ಮಹಿಳಾ ನೇಮಕಾತಿ | ಕರ್ನಾಟಕದಿಂದ ಸಾಮಾಜಿಕ ಪರಿವರ್ತನೆ: ಸಿಜೆಐ ಚಂದ್ರಚೂಡ್
ಮೊದಲ ಬಾರಿಗೆ ಮತದಾರರಾಗಿ ಮತ ಚಲಾಯಿಸಲು ಮತಗಟ್ಟೆಗೆ ಸರತಿ ಸಾಲಿನಲ್ಲಿ ನಿಂತ ಉತ್ಸಾಹವನ್ನು ಹಂಚಿಕೊಂಡಿದ್ದಾರೆ. “ನಾನು ಮತ ಚಲಾಯಿಸುವಾಗ ಬೆರಳಿನ ಶಾಯಿಯು ದೇಶಭಕ್ತಿಯ ಪ್ರಚಂಡ ಭಾವನೆಗಳನ್ನು ಮತ್ತು ರಾಷ್ಟ್ರದೊಂದಿಗಿನ ಒಡನಾಟದ ಗುರುತು ನೀಡುತ್ತದೆ” ಎಂದು ಚಂದ್ರಚೂಡ್ ವಿವರಿಸಿದರು.
ನಾನು ನನ್ನ ಜೀವನದಲ್ಲಿ ಒಂದೇ ಒಂದು ಮತವನ್ನು ಕೂಡಾ ಹಾಕದೆ ಕೂತಿಲ್ಲ. ಕೆಲಸಕ್ಕಾಗಿ ಅಲೆದಾಟ ಮಾಡಿದರೂ ಕೂಡಾ ಮತ ಚಲಾಯಿಸುವುದನ್ನು ಎಂದಿಗೂ ತಪ್ಪಿಸಿಲ್ಲ ಎಂದರು.
ಲೋಕಸಭೆ ಚುನಾವಣೆಯು ಏಪ್ರಿಲ್ 19 ರಿಂದ ಜೂನ್ 1, 2024 ರವರೆಗೆ ನಡೆಯಲಿದೆ. ಚುನಾವಣೆಗಳು ಏಳು ಹಂತಗಳಲ್ಲಿ ನಡೆಯಲಿದ್ದು, ಫಲಿತಾಂಶವನ್ನು ಜೂನ್ 4, 2024 ರಂದು ಪ್ರಕಟಿಸಲಾಗುವುದು. ಇನ್ನು 2019ರ ಲೋಕಸಭೆ ಚುನಾವಣೆಗೆ ಹೋಲಿಸಿದಾಗ 2024ರ ಮೊದಲ ಹಂತದ ಚುನಾವಣೆಯಲ್ಲಿ ಶೇಕಡ 61.06ರಷ್ಟು ಮತದಾನವಾಗಿದೆ. 2019ರಲ್ಲಿ ಶೇಕಡ 70.83 ಮತದಾನವಾಗಿದ್ದು, ಅದಕ್ಕಿಂತ ಶೇಕಡ 9.77ರಷ್ಟು ಕಡಿಮೆ ಮತದಾನವಾಗಿದೆ.