ರಾಜ್ಯದಲ್ಲಿನ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವುದು, ರಾಜ್ಯದ ಎಲ್ಲ ತಾಲೂಕಿನಲ್ಲಿ ಮಡಿಕಟ್ಟೆಗಳನ್ನು ನಿರ್ಮಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಾವಣಗೆರೆ ನಗರದಲ್ಲಿ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ನೇತೃತ್ವದ ಮಡಿವಾಳ ಸಮುದಾಯದವರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿದ ಬಳಿಕ ಸಮುದಾಯವು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವುದಾಗಿ ಘೋಷಣೆ ಮಾಡಿತು.
ಕಾಂಗ್ರೆಸ್ ಅಭ್ಯರ್ಥಿ ಡಾ ಪ್ರಭಾ ಮಲ್ಲಿಕಾರ್ಜುನ ಮನವಿ ಸ್ವೀಕರಿಸಿ ಮಾತನಾಡಿ, “ನಿಮ್ಮ ಬೇಡಿಕೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸಾಧ್ಯವಾದ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನ ಮಾಡಲಾಗುವುದು. ಉಳಿದಂತೆ ಸ್ವಸಹಾಯ ಗುಂಪುಗಳಿಗೆ ಸಹಾಯಧನ, ಎಲ್ಲ ತಾಲೂಕುಗಳಲ್ಲಿ ಮಡಿಕಟ್ಟೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲು ಸರ್ಕಾರದ ಜತೆಗೆ ಮಾತುಕತೆ ನಡೆಸಲಾಗುವುದು” ಎಂದು ಭರವಸೆ ನೀಡಿದರು.
“ದಾವಣಗೆರೆ ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೆ ಅರ್ಭಥಿಯಾಗಿ ನಾನು ಸ್ಪರ್ಧಿಸಿದ್ದು, ಕೇವಲ ಬಹುಮತ ನೀಡುವ ಬದಲು ಒನ್ ವೇ ಮತದಾನ ಆಗುವ ನಿಟ್ಟಿನಲ್ಲಿ ಮಡಿವಾಳ ಸಮುದಾಯವು ಒಟ್ಟಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡಿ ಪ್ರಚಂಡ ಬಹುಮತದಿಂದ ಆರಿಸಿ ಸಂಸತ್ತಿಗೆ ಕಳುಹಿಸಿಕೊಡಬೇಕು” ಎಂದು ಮನವಿ ಮಾಡಿದರು.
ಮಡಿವಾಳ ಸಮಾಜದ ಕಾರ್ಯಾಧ್ಯಕ್ಷ ಎಚ್ ಜಿ ಉಮೇಶ್ ಮಾತನಾಡಿ, “ಈ ಹಿಂದೆ ಕಾಂಗ್ರೆಸ್ ಆಡಳಿತ ಇದ್ದಾಗ ವಿದ್ಯಾರ್ಥಿ ನಿಲಯಕ್ಕೆ ನಿವೇಶನ ನೀಡಿ ₹50 ಲಕ್ಷ ಅನುದಾನವನ್ನು ನೀಡಿತ್ತು. ಅಲ್ಲದೇ ಮತ್ತೊಂದು ನಿವೇಶನವನ್ನು ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ನೀಡುವ ಮೂಲಕ ಸಮುದಾಯದ ಏಳಿಗೆಗೆ ಮುಂದಾಗಿತ್ತು” ಎಂದು ಮಾಹಿತಿ ನೀಡಿದರು.
“ಮಡಿವಾಳ ಸಮುದಾಯದ ಪ್ರಮುಖ ಬೇಡಿಕೆಯಾದ ರಾಜ್ಯದ ಎಲ್ಲ ತಾಲೂಕುಗಳಲ್ಲಿ ದೋಭಿಘಾಟ್ ನಿರ್ಮಾಣ ಮಾಡಲು ನಿವೇಶನ ಗುರುತಿಸುವ ಜತೆಗೆ ಬಟ್ಟೆ ತೊಳೆಯುವ ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿಕೊಡಲು ಹಾಗೂ ತಾಲೂಕು ಮಟ್ಟದಲ್ಲಿ ನಮ್ಮ ಜನಾಂಗದಲ್ಲಿ ಸೂರುಗಳು ಇಲ್ಲದೇ ಇರುವ ನಿರಾಶ್ರಿತರನ್ನು ಗುರುತಿಸಿ ನಿವೇಶನ ಮಂಜೂರು ಮಾಡಿ, ಸರ್ಕಾರದ ವಸತಿ ಯೋಜನೆಯ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿ, ಆಂತಹ ಬಡಾವಣೆಗಳಿಗೆ “ಶ್ರೀ ಬಸವ ಮಾಚಿದೇವ ಬಡಾವಣೆ”ಯೆಂದು ನಾಮಕರಣ ಮಾಡಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕ್ಷೇತ್ರದ ರಕ್ಷಣೆಗೆ, ಅಭಿವೃದ್ಧಿಗೆ ಆದ್ಯತೆ: ಗೀತಾ ಶಿವರಾಜ್ಕುಮಾರ್
ಈ ವೇಳೆ ಜಿಲ್ಲಾಧ್ಯಕ್ಷ ಎಂ ನಾಗೇಂದ್ರಪ್ಪ, ಧನಂಜಯ, ಸುರೇಶ್ ಕೋಗುಂಡೆ, ವಿಜಯ ಕುಮಾರ್, ಜಗಳೂರು ರಮೇಶ್, ಕಂಚಿಕೆರೆ ಕೆಂಚಪ್ಪ, ಹೊನ್ನಾಳಿ ಮಹಾಂತೇಶ್, ತೌಡೂರು ಮಣ್ಣ, ಆಂಜಿನಪ್ಪ ಪೂಜಾರ್, ಶಕುಂತಲಮ್ಮ, ನಾಗಮ್ಮ, ರುದ್ರೇಶ್, ದುಗ್ಗಪ್ಪ, ಅಣ್ಣಪ್ಪ ಸೇರಿದಂತೆ ಸಮಾಜದ ಇತರರು ಇದ್ದರು.
