“ರಾಜ್ಯದಲ್ಲಿ (ಮಹಾರಾಷ್ಟ್ರ) ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಪರವಾಗಿ ಅನುಕಂಪದ ಅಲೆ ಇದೆ” ಎಂದು ಮಹಾರಾಷ್ಟ್ರದ ಅಜಿತ್ ಪವಾರ್ ಬಣದ ನಾಯಕ ಛಗನ್ ಭುಜಬಲ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ನಡುವೆ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಛಗನ್ ಭುಜಬಲ್ ಅವರು, “ಉದ್ಧವ್ ಠಾಕ್ರೆಯವರ ಶಿವಸೇನೆ ವಿಭಜನೆಯಾದ ಬಗ್ಗೆ ಮತ್ತು ಎನ್ಸಿಪಿಯ ಒಂದು ಬಣವು ಪಕ್ಷವನ್ನು ಬದಲಿಸಿದ ಬಗ್ಗೆ ಸಹಾನುಭೂತಿಯ ಅಲೆ ಇದೆ ಎಂದು ನಾನು ನಂಬುತ್ತೇನೆ. ಇದು ಅವರ ರ್ಯಾಲಿಗಳಲ್ಲಿ ಕಂಡುಬರುತ್ತದೆ” ಎಂದರು.
2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅವಿಭಜಿತ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ 25 ಸ್ಥಾನಗಳ ಪೈಕಿ 23ರಲ್ಲಿ ಗೆಲುವು ಸಾಧಿಸಿತ್ತು. ಉತ್ತರ ಪ್ರದೇಶದ ನಂತರ ಮಹಾರಾಷ್ಟ್ರದಲ್ಲಿ ಬಿಜೆಪಿಯ ಅಧಿಕ ಸಂಸದರು ಇದ್ದಾರೆ. ಆದರೆ 2022 ರಿಂದ ಶಿವಸೇನೆ ಮತ್ತು ಎನ್ಸಿಪಿ ಎರಡು ಭಾಗಗಳಾಗಿ ವಿಭಜನೆಯಾದ ನಂತರ ಮಹಾರಾಷ್ಟ್ರದ ರಾಜಕೀಯವು ಸಂಕೀರ್ಣವಾಗಿದೆ.
ಇದನ್ನು ಓದಿದ್ದೀರಾ? ಅಘೋಷಿತ ತುರ್ತು ಪರಿಸ್ಥಿತಿ | ಅಂಬೇಡ್ಕರ್ ರಚಿತ ಸಂವಿಧಾನ ನಾಶಕ್ಕೆ ಬಿಜೆಪಿ ಪಿತೂರಿ: ಶರದ್ ಪವಾರ್
ಪ್ರಸ್ತುತ, ಎರಡು ಶಿವಸೇನೆಗಳಿದ್ದು ಒಂದು ಉದ್ಧವ್ ಠಾಕ್ರೆ ಬಣ ಮತ್ತೊಂದು ಏಕನಾಥ್ ಶಿಂಧೆ ಬಣವಾಗಿದೆ. ಅದೇ ರೀತಿ, ಎರಡು ಎನ್ಸಿಪಿಗಳಿದೆ. ಒಂದು ಶರದ್ ಪವಾರ್ ಬಣ ಮತ್ತು ಅಜಿತ್ ಪವಾರ್ ಬಣವಾಗಿದೆ. ರಾಜ್ಯ ಸರ್ಕಾರವು ಬಿಜೆಪಿ-ಶಿವಸೇನೆ (ಏಕನಾಥ್ ಶಿಂಧೆ) ಮತ್ತು ಎನ್ಸಿಪಿ (ಅಜಿತ್ ಪವಾರ್) ಮೈತ್ರಿಯನ್ನು ಹೊಂದಿದೆ.
ಭುಜಬಲ್ ಪ್ರಕಾರ, ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅವಿಭಜಿತ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು ಮತ್ತು ಪಕ್ಷಗಳು ಕ್ರಮವಾಗಿ 23 ಮತ್ತು 18 ಕ್ಷೇತ್ರಗಳಲ್ಲಿ ಗೆದ್ದಿದ್ದವು. “ಅವರು (ಶಿವಸೇನೆ ಯುಬಿಟಿ ಮತ್ತು ಶರದ್ ಪವಾರ್) ಅವರು 2014 ಮತ್ತು 2019 ರಲ್ಲಿ ಮಾಡಿದ ರೀತಿಯಲ್ಲಿ ವಿಫಲವಾಗುತ್ತಿರುವಂತೆ ತೋರುತ್ತಿಲ್ಲ” ಎಂದು ಭುಜಬಲ್ ಹೇಳಿದರು.
ಇದನ್ನು ಓದಿದ್ದೀರಾ? ನಿಮ್ಮದು ಬೇರೆ ಪಕ್ಷ, ಶರದ್ ಪವಾರ್ ಚಿತ್ರ, ಚಿಹ್ನೆ ಬಳಸುವುದೇಕೆ?; ಅಜಿತ್ ಬಣಕ್ಕೆ ಸುಪ್ರೀಂ ಪ್ರಶ್ನೆ
“ಆದರೆ ಜನರ ನಂಬಿಕೆ ಇನ್ನೂ ನರೇಂದ್ರ ಮೋದಿಯವರ ಮೇಲಿದೆ. ಮೋದಿ ಅವರು ಬಲವಾದ ಸರ್ಕಾರವನ್ನು ರಚಿಸಬೇಕೆಂದು ಜನರು ಬಯಸುತ್ತಾರೆ” ಎಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಹಾಯುತಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದ ಭುಜಬಲ್ ಅವರು ನಾಸಿಕ್ ಸ್ಥಾನಕ್ಕೆ ಅಭ್ಯರ್ಥಿ ಘೋಷಣೆ ವಿಳಂಬವಾದ ಕಾರಣ ಇತ್ತೀಚೆಗೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.
ನಾಸಿಕ್ ಸ್ಥಾನಕ್ಕೆ ಅಭ್ಯರ್ಥಿಯನ್ನು ಹೆಸರಿಸಲು ಪಕ್ಷ ಅಧಿಕ ಸಮಯ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದ್ದ ಅವರು ಶೀಘ್ರವೇ ಈ ಸ್ಥಾನಕ್ಕೆ ಅಭ್ಯರ್ಥಿ ಘೋಷಿಸುವಂತೆ ಒತ್ತಾಯಿಸಿದ್ದರು.
ನಾಸಿಕ್ನಲ್ಲಿ ಮೇ 20 ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ. ಮಹಾರಾಷ್ಟ್ರದ 48 ಲೋಕಸಭಾ ಸ್ಥಾನಗಳಿಗೆ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.