ಹಾಸನ ಪೆನ್ಡ್ರೈವ್ – ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಿ, ಆತನ ವಿರುದ್ಧ ತನಿಖೆ ನಡೆಸಿ, ಶಿಕ್ಷೆಗೆ ಒಳಪಡಿಸಬೇಕು. ಆತನ ಕೃತ್ಯಕ್ಕೆ ರೇವಣ್ಣ ಅವರ ಕುಮ್ಮಕ್ಕು ಇರುವ ಸಾಧ್ಯತೆಗಳಿದ್ದು, ಅವರನ್ನೂ ಬಂಧಿಸಬೇಕು ಎಂದು ಜನಪರ ಚಳುವಳಿಗಳ ಒಕ್ಕೂಟ ಆಗ್ರಹಿಸಿದೆ. ಸೋಮವಾರ ಹಾಸನದಲ್ಲಿ ಪ್ರತಿಭಟನೆ ನಡೆಸಿದೆ.
“ಕಳದೆ ಕೆಲವು ದಿನಗಳಿಂದ ಹಾಸನದಲ್ಲಿ ಪೆನ್ಡ್ರೈವ್ಗಳ ಮೂಲಕ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಹಂಚಲಾಗುತ್ತಿದೆ. ಅವುಗಳು ಈಗ ವಾಟ್ಸಾಪ್ನಲ್ಲಿಯೂ ಹರಿದಾಡುತ್ತಿವೆ. ಎಲ್ಲೆಡೆ ಕೃತ್ಯದ ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಚಿತ್ರಗಳು ಮತ್ತು ದೃಶ್ಯಗಳಲ್ಲಿರುವ ಮಹಿಳೆಯರ ಖಾಸಗಿ ಮತ್ತು ಕೌಟುಂಬಿಕ ಬದುಕು ಛಿದ್ರವಾಗಿದೆ. ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿರುವ ವರದಿಗಳಿವೆ. ಯಾವ ಕ್ಷಣದಲ್ಲಿ ಯಾವಾಗ ಮತ್ತೊಂದು ಪೆನ್ ಡ್ರೈವ್ ಹೊರ ಬರುತ್ತದೆಯೋ, ಅದರಲ್ಲಿ ಯಾವ ಮಹಿಳೆಯ ಖಾಸಗಿ ಚಿತ್ರಗಳು ಮತ್ತು ದೃಶ್ಯಗಳು ಬಿತ್ತರಗೊಳ್ಳಲಿವೆಯೋ ಎಂಬ ಆತಂಕ ಎದುರಾಗಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪ್ರಕರಣದ ಪ್ರಮುಖ ಆರೋಪಿ ಎಂದು ಹೇಳಲಾಗುತ್ತಿರುವ ಪ್ರಜ್ವಲ್ ರೇವಣ್ಣ ಮತ್ತು ಹೊಳೆನರಸೀಪುರದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ರೇವಣ್ಣ ಕೂಡ ಪ್ರಮುಖ ಆರೋಪಿಯಾಗಿದ್ದಾರೆ. ಈ ಇಬ್ಬರನ್ನೂ ಕೂಡಲೇ ಬಂಧಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಯಾವುದೇ ವ್ಯಕ್ತಿಯ ಖಾಸಗಿ ಬದುಕಿನ ವಿಚಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಅಪರಧ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಲಾಭವನ್ನಷ್ಟೇ ಗುರಿಯಾಗಿಸಿಕೊಂಡು ಮಹಿಳೆಯರ ಖಾಸಗಿ ಬದುಕಿನ ಚಿತ್ರಗಳು ಮತ್ತು ದೃಶ್ಯಗಳನ್ನು ಸಾರ್ವಜನಿಕವಾಗಿ ಬಿತ್ತರಿಸುವುದು ಅತ್ಯಂತ ಹೀನ ಕೃತ್ಯ” ಎಂದು ಕಿಡಿಕಾರಿದ್ದಾರೆ.
“ರಾಜಕೀಯ ಅಧಿಕಾರ, ಆಸ್ತಿ ಮತ್ತು ಜಾತಿಯ ಮದದಿಂದ ಮೆರೆಯುತ್ತಿರುವ ಹಾಸನ ಜಿಲ್ಲೆಯ ಪ್ರಭಾವಿ ಕುಟುಂಬದ ಪ್ರಜ್ವಲ್ ರೇವಣ್ಣ ಮಹಿಳೆಯರನ್ನು ತನ್ನ ಕಾಮದಾಹಕ್ಕೆ ನಿರಂತರವಾಗಿ ಬಳಸಿಕೊಂಡಿದ್ದಾನೆ. ಅಲ್ಲದೆ, ಆ ಕೃತ್ಯವನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ಮಹಿಳೆಯರನ್ನು ಈ ಕುಕೃತ್ಯಕ್ಕೆ ಬಳಸಿಕೊಳ್ಳಲು ಅವನು ತನಗಿರುವ ರಾಜಕೀಯ ಅಧಿಕಾರವನ್ನು ಬಳಸಿಕೊಂಡಿದ್ದಾನೆ ಎನ್ನುವುದೂ ಸ್ಪಷ್ಟವಾಗಿದೆ. ತನ್ನ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೂ ಬಲಾತ್ಕಾರವಾಗಿ ಅತ್ಯಾಚಾರ ನಡೆಸಿದ್ದಾನೆ. ಇಂತಹ ವಿಕೃತ ಮತ್ತು ವಿಕ್ಷಿಪ್ತ ಮನಸ್ಸಿನ ವ್ಯಕ್ತಿ ಜನಪ್ರತಿನಿಧಿಯಾಗಿ ಇರುವುದಿರಲಿ ನಾಗರಿಕ ಸಮಾಜದಲ್ಲಿ ಮುಕ್ತವಾಗಿ ಓಡಾಡಿಕೊಂಡಿರುವುದು ಬಹಳ ಅಪಾಯಕಾರಿ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಹೀನ ಕೃತ್ಯಕ್ಕೆ ಆ ವ್ಯಕ್ತಿಯ ಮತ್ತು ಕುಟುಂಬದ ರಾಜಕೀಯ ಪ್ರಭಾವ ಕೆಲಸ ಮಾಡಿರುವ ಸಾಧ್ಯತೆಯಿದೆ. ಆದರೆ, ಯಾವ ಯಾವ ಒತ್ತಡಗಳ ಕಾರಣಕ್ಕೋ, ಕೆಲಸ ಕಾರ್ಯ ಮತ್ತು ಪ್ರಯೋಜನದ ಕಾರಣಕ್ಕೋ ಆತನಿಂದ ಲೈಂಗಿಕವಾಗಿ ಬಳಕೆಯಾಗಿ ವೀಡಿಯೋ ದೃಶ್ಯಗಳಲ್ಲಿ ಸೆರೆಯಾಗಿ ಸಾರ್ವಜನಿಕವಾಗಿ ಮಾನ ಕಳೆದುಕೊಳ್ಳುತ್ತಿರುವ ಮಹಿಳೆಯರು ಮತ್ತು ಅವರ ಕುಟುಂಬದ ಗೋಳು ಮಾತ್ರ ಹೇಳತೀರದಾಗಿದೆ. ಇಂತಹ ಸಂದರ್ಭದಲ್ಲಿ ಮಹಿಳೆಯರಿಗೆ ಸೂಕ್ತ ರಕ್ಷಣೆ ನೀಡಬೇಕಿದೆ” ಎಂದು ಆಗ್ರಹಿಸಿದ್ದಾರೆ.
“ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿರುವಂತೆ ಹೊಳೆನರಸಿಪುರದ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಎಂಬುವವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಳಿ 2 ಸಾವಿರಕ್ಕೂ ಹೆಚ್ಚು ಫೋಟೋ, ವೀಡಿಯೋಗಳಿವೆ ಎಂದು ಹೇಳಿದ್ದಾರೆ. ಅವರಿಗೆ ಅ ವೀಡಿಯೋಗಳನ್ನು ಕೊಟ್ಟ ವ್ಯಕ್ತಿ ಯಾರು? ಎನ್ನುವುದನ್ನು ಪತ್ತೆ ಮಾಡಬೇಕು. ಆತನನ್ನು ವಿಚಾರಣೆ ಒಳಪಡಿಸಿ, ಯಾರಿಗೆಲ್ಲಾ ಆತ ವಿಡಿಯೋಗಳನ್ನು ಹಂಚಿದ್ದಾನೆಎಂಬುದನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ, ಇಂತಹ ವಿಡಿಯೋಗಳು ಹೊರ ಬರುವುದನ್ನು ತಡೆಯಬಹುದು. ಅದರಿಂದ ಹಲವು ಮಹಿಳೆಯರ ಮಾನ, ಪ್ರಾಣಗಳು ಉಳಿಯಲಿವೆ” ಎಂದು ಹೇಳಿದ್ದಾರೆ.
ಪ್ರತಿಭಟನೆಯಲ್ಲಿ ದೇವಿ, ಗೌರಮ್ಮ, ಕೆ.ಎಸ್.ವಿಮಲ, ಜೆಎಂಎಸ್, ಶೋಭಾ ರಾಜ್ಯ
ಸುಶೀಲಾ, ಸಬಿಹಾ ಭೂಮಿಗೌಡ, ಸುಶೀಲ, ರೂಪ, ವಿಮಲ, ಅಖಿಲ ವಿದ್ಯಾಸಂದ್ರ, ಸವಿತಾ, ಸಂದೇಶ್ ದಸಂಸ, ವಿಜಯ್ ಕುಮಾರ್ ಮಾದಿಗ ದಂಡೋರ, ಮುಬಶೀರ್ ಅಹಮದ್, ಮಮತಾ ಶಿವು, ಸೌಮ್ಯ, ಧರ್ಮೇಶ್, ಅರವಿಂದ, ಪುಷ್ಪ, ಜಯಂತಿ, ಸಾಹಿತಿ ಸುವರ್ಣ, ಕಲಾವಿದ ಶಿವಪ್ರಸಾದ್, ಡಿವೈಎಫ್ಐ ಪೃಥ್ವಿ, ಎಚ್.ಆರ್. ನವೀನ್ ಕುಮಾರ್, ಅಬ್ದುಲ್ ಸಮದ್, ಮಲ್ಲಪ್ಪ, ಕೃಷ್ಣ ದಾಸ್, ಎಂಸಿ ಡೋಂಗ್ರೆ, ಧರ್ಮರಾಜ್ ಇತರರು ಇದ್ದರು.