ನಾನು ಕ್ಯಾಮರಾ ಮುಂದೆ ನಟನೆ ಮಾಡುತ್ತೇನೆ. ಆದರೆ, ಪ್ರಧಾನಿ ಮೋದಿ ನಿಜ ಜೀವನದಲ್ಲಿ ನಟನೆ ಮಾಡುತ್ತಿದ್ದು, ಅವರೊಬ್ಬ ದೊಡ್ಡ ನಟರಾಗಿದ್ದಾರೆ ಎಂದು ನಟ ಪ್ರಕಾಶ ರೈ ಮೋದಿಯ ಹೆಸರು ಹೇಳದೆ ಮಹಾಪ್ರಭು ಎನ್ನುವ ಮೂಲಕ ಪರೋಕ್ಷವಾಗಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಯಚೂರು ನಗರದಲ್ಲಿ ಭಾನುವಾರ (ಏ.28) ಸಂಜೆ ಕರ್ನಾಟಕ ವೆಲ್ಫೇರ್ ಟ್ರಸ್ಟ್ ಶಾಲೆಯಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯಿಂದ ಏರ್ಪಡಿಸಿದ್ದ ರಾಜಕೀಯ ಜಾಗೃತಿ ಸಮಾವೇಶದಲ್ಲಿ ಮಾತನಾಡಿ, ದೇಶದ ಜನರು ನನ್ನ ಪರಿವಾರ ಎಂದು ಹೇಳುತ್ತಾನೆ. ಆದರೆ ಆ ಪರಿವಾರದಲ್ಲಿ ರೈತರು ಇಲ್ಲ ಎಂದರು.
ಆತನಿಗೆ ಓದಿನ ಮಹತ್ವ ಗೊತ್ತಿಲ್ಲ. ಹೀಗಾಗಿ ಯುವಕರಿಗೆ ಪಕೋಡ ಮಾರಿ ಎಂದು ಹೇಳುತ್ತಾನೆ. ಇನ್ನೂ ಆತನಿಗೆ ರೈತರ ಸಂಕಷ್ಟ ಹೇಗೆ ಗೊತ್ತಾಗಬೇಕು. ರೈತರಿಗೆ ಕೊಡುವುದು ಭಿಕ್ಷೆ ಅಂದುಕೊಂಡಿದಾರೆ. ರೈತರು ಭಿಕ್ಷೆ ಕೇಳುತ್ತಿಲ್ಲ ಘನತೆ ಕೇಳುತ್ತಿದ್ದಾರೆ. ರೆಸಾರ್ಟ್ಗೆ ನೀರು ಕೊಡುವ ಸರ್ಕಾರ ರೈತರ ಬೆಳೆಗೆ ನೀರು ಕೊಡುತ್ತಿಲ್ಲ.
ಇನ್ನೊಂದು ಪಕ್ಷದ ಸರ್ಕಾರ ಬಂದರೆ ಮಹಿಳೆಯರ ಮಂಗಳಸೂತ್ರ ಕಿತ್ತುಕೊಳ್ಳುತ್ತಾರೆ ಎಂದು ಹೇಳುವವರು ಹೋರಾಟದಲ್ಲಿ ಮಡಿದ ರೈತರ ಪತ್ನಿಯರ ಮಂಗಳಸೂತ್ರ ಯಾರು ಕಿತ್ತಿಕೊಂಡಿದ್ದಾರೆ ಎಂದು ಹೇಳಬೇಕು. ನೇಹಾ ಕೊಲೆ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ.
ಕೊಟ್ಟ ಮಾತನ್ನು ನೆನಪಿಸಿದರೆ ದೇಶ ದ್ರೋಹಿಯ ಪಟ್ಟ ಕಟ್ಟಲಾಗುತ್ತಿದೆ. ನಾವು ಒಗ್ಗಟ್ಟಾಗಿ ನಿಲ್ಲುವವರೆಗೆ ಸರ್ಕಾರಗಳು ಕೆಲಸ ಮಾಡುವುದಿಲ್ಲ. ಕೋಮುವಾದಿ ಸರ್ಕಾರವನ್ನು ಕಿತ್ತೊಗೆದ ನಂತರ ಮುಂದೆ ಬರುವ ಸರ್ಕಾರವನ್ನು ಹೇಳಿದ ಕೆಲಸ ಮಾಡುವವರೆಗೆ ಬಿಡುವುದು ಬೇಡ. ಇಂದಿನ ದಿನಗಳಲ್ಲಿ ಹೋರಾಟದ ಅವಶ್ಯಕತೆ ಇದೆ.
ಮೋದಿಯ ಆಸ್ಥಾನಕ್ಕೆ ವಿದೂಷಕರು ಬೇಕೆ ಹೊರತು ಸಂಸದರಲ್ಲ. ನಾವು ಆರಿಸಿ ಕಳಿಸಿದ 28 ಸಂಸದರು ಕಳೆದ 5 ವರ್ಷದಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗ ಒಂದು ಮಾತನಾಡಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಾದ ನಾವು ನಮ್ಮ ಜವಾಬ್ದಾರಿ ತಿಳಿಯಬೇಕು ಎಂದು ಹೇಳಿದರು.
ಸಂಯುಕ್ತ ಕಿಸಾನ್ ಮೋರ್ಚಾ ಪ್ರಮುಖ ಅವತಾರ ಸಿಂಗ್ ಮಾತನಾಡಿ, ಯಾವುದೇ ರಾಜ್ಯಗಳಾದರೂ ಅಲ್ಲಿನ ರೈತರ ದುಃಖ, ಸಂಕಷ್ಟಗಳು ಒಂದೇ. ಆದರೆ ವಿಷಯ ವಸ್ತು ಮಾತ್ರ ಬೇರೆ ಬೇರೆಯಾಗಿರುತ್ತದೆ. ರೈತರು ಒಗ್ಗೂಡುವ ಮೂಲಕ ಕೇಂದ್ರ ಸರ್ಕಾರವನ್ನು ಮೊಣಕಾಲ ಮೇಲೆ ಕುಳಿತುಕೊಳ್ಳುವಂತೆ ಮಾಡಿದೆ. ಇದೇ ಸರ್ಕಾರ ಮುಂದುವರಿದರೆ ಹೋರಾಟ ಮಾಡುವ ಅಕಾರವನ್ನು ಕಿತ್ತುಕೊಳ್ಳುತ್ತದೆ ಎಂದರು.
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ದೇಶದಲ್ಲಿ 1474 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ ಒಂದು ಸಮಿತಿ ನೇಮಕ ಮಾಡಲಿಲ್ಲ. ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸವನ್ನು ಪ್ರಧಾನಿಯಿಂದ ಆಗಲಿಲ್ಲ. ಆದರೆ ಅದಾನಿ ಮೊಮ್ಮಗನ ನಾಮಕರಣಕ್ಕೆ ಹೋಗುತ್ತಾರೆ. ಕೃಷಿ ಉಳಿಸಲು ಮೋದಿ ಸೋಲಿಸಲು ಮುಂದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಸಂಯುಕ್ತ ಹೋರಾಟ ಸಮಿತಿ ಪದಾಕಾರಿಗಳಾದ ಪ್ರಭಾಕರ ಪಾಟೀಲ್, ಡಿ.ಎಸ್.ಶರಣಬಸವ, ಕೆ.ಜಿ.ವೀರೇಶ, ಮಾರೆಪ್ಪ ಹರವಿ, ಜಾನ್ವೆಸ್ಲಿ, ಖಾಜಾ ಅಸ್ಲಂ ಅಹ್ಮದ್ ಉಪಸ್ಥಿತರಿದ್ದರು.
