ಹಾಸನ ಸಂಸದ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯ ಸ್ಲಂ ಮಹಿಳಾ ಘಟಕ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆ ನೇತೃತ್ವವಹಿಸಿ ಮಹಿಳಾ ಘಟಕದ ಸಂಚಾಲಕರಾದ ಅನುಪಮ ಮಾತನಾಡಿ, ಪ್ರಜ್ವಲ್ ಕರ್ಮಕಾಂಡ ಮೊದಲೇ ಗೊತ್ತಿದ್ದರು ಹಾಸನದಿಂದ ಲೋಕಸಭೆ ಸ್ಪರ್ಧಿಸಲು ಅವಕಾಶ ನೀಡಿದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೆಣ್ಣು ಮಕ್ಕಳಿಗೆ ದ್ರೋಹ ಬಗೆದಿವೆ, ತಾಳಿ ಬಗ್ಗೆ ಮಾತನಾಡುವ ಪ್ರಧಾನಿಗಳು ಈ ಪ್ರಕರಣದ ಬಗ್ಗೆ ಮೌನವಹಿಸಿರುವುದು ಏಕೆ? ಮಂಗಳಸೂತ್ರ ಬರೀ ಮಾತಿಗಾಗಿ ಅಥವಾ ರಾಜಕಾರಣಕ್ಕೆ ಬಳಸಿಕೊಳ್ಳುವುದು ಎಷ್ಟು ಸರಿ. ತಕ್ಷಣ ಚುನಾವಣಾ ಆಯೋಗ ಈ ಪ್ರಕರಣದ ಬಗ್ಗೆ ಮಧ್ಯೆ ಪ್ರವೇಶ ಮಾಡಬೇಕೆಂದು ಆಗ್ರಹಿಸಿದರು.
ಬೆಳಗುಂಬ ರಸ್ತೆಯ ಸ್ಲಂ ಭವನದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಪ್ರಜ್ವಲ್ ಪೆನ್ಡ್ರೖವ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಎಸ್ಐಟಿ ರಚಿಸಿದ್ದು ಕೂಡಲೇ ಅವರನ್ನು ಬಂಧಿಸಿ ದೌರ್ಜನ್ಯಕ್ಕೆ ಒಳಗಾದ ಹಾಗೂ ಸಾವಿರಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯನಡೆಸಿರುವ ಆರೋಪದ ಹಿನ್ನಲೆಯಲ್ಲಿ ಮಹಿಳಾ ಆಯೋಗದ ಶಿಫಾರಸಿನ ಮೇಲೆ ರಾಜ್ಯ ಸರ್ಕಾರ ಕ್ರಮವಹಿಸಿರುವುದನ್ನು ಸಂಘಟನೆ ಸ್ವಾಗತಿಸುತ್ತದೆ ಎಂದರು.
ಆದರೆ, ಆರೋಪಿಗೆ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಮುಖ ರಾಜಕಾರಣಿಗಳ ಬೆಂಬಲವಿರುವುದರಿಂದ ಈಗಾಗಲೇ ವಿದೇಶಕ್ಕೆ ಪಲಾಯನಗೊಂಡಿದ್ದು ತಕ್ಷಣವೇ ಎಸ್ಐಟಿ ಬಂಧಿಸಿ ನೊಂದ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸ್ಲಂ ಮಹಿಳಾ ಸಮಿತಿ ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್, ತಿರುಮಲಯ್ಯ ಪದಾಧಿಕಾರಿಗಳಾದ ಮಂಗಳಮ್ಮ, ಪೂರ್ಣಿಮಾ, ಸಂದ್ಯಾಯಾದವ್, ಹನುಮಕ್ಕ, ಶಾರದಮ್ಮ, ಗಂಗಾ, ಸುಧಾ, ಪಾರ್ವತಮ್ಮ, ವಸಂತಮ್ಮ, ದೇವಿಕಾ, ಶಾಂತಮ್ಮ, ಮುಂತಾದವರು ಪಾಲ್ಗೊಂಡಿದದ್ದರು.
