ರಾಜ್ಯದಲ್ಲಿ ಮೇ 7 ರಂದು ನಡೆಯುವ ಎರಡನೇ ಹಂತದ ಲೋಕಸಭಾ ಚುನಾವಣೆಯು ಉರಿಬಿಸಿಲಿನಲ್ಲಿ ರಂಗೇರಿದೆ. ರಾಷ್ಟ್ರ ರಾಜಕಾರಣದ ಘಟಾನುಘಟಿ ನಾಯಕರು ಉತ್ತರ ಕರ್ನಾಟಕದ ಹದಿನಾಲ್ಕು ಕ್ಷೇತ್ರಗಳಲ್ಲಿ ಭರ್ಜರಿ ಮತಬೇಟೆಗೆ ಕಸರತ್ತು ನಡೆಸುತ್ತಿದ್ದಾರೆ.
ಎರಡನೇ ಹಂತದಲ್ಲಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿವೆ. ಈ ಕ್ಷೇತ್ರಗಳ ಮತದಾರರ ಒಲವು ನಿಲುವುಗಳು ಕೂಡ ಗಮನ ಸೆಳೆಯುತ್ತಿವೆ.
ಮತದಾರರು ಯಾವ ಅಂಶಗಳ ಮೇಲೆ ಮತ ಹಾಕುತ್ತಾರೆಂಬ ಕುತೂಹಲವಂತೂ ಇದ್ದೇ ಇದೆ. ಆದರೆ ಈ ಸಲದ ಚುನಾವಣೆಯಲ್ಲಿ ’ಬೆಲೆ ಏರಿಕೆ’ಯನ್ನು ಆಧರಿಸಿ ಮತ ಚಲಾಯಿಸುವ ಸೂಚನೆಗಳು ಸದರಿ ಹದಿನಾಲ್ಕು ಕ್ಷೇತ್ರಗಳಲ್ಲೂ ಕಾಣುತ್ತಿರುವುದರಿಂದ ಬಿಜೆಪಿ ಕೊಚ್ಚಿ ಹೋಗುವ ಸಾಧ್ಯತೆಗಳು ಸ್ಪಷ್ಟವಾಗಿ ಕಾಣುತ್ತಿವೆ.
‘ಈದಿನ.ಕಾಂ’ ನಡೆಸಿದ ಸಮೀಕ್ಷೆಯ ವೇಳೆ, “ಕಳೆದ ಹತ್ತು ವರ್ಷಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂದು ನೀವು ಭಾವಿಸುತ್ತೀರಾ?” ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿರುವವರಲ್ಲಿ ಶೇ. 84.85ರಷ್ಟು ಜನರು ಬೆಲೆ ಏರಿಕೆಯಾಗಿದೆ ಎಂದಿದ್ದಾರೆ. ಶೇ. 9ರಷ್ಟು ಜನರು ಇಲ್ಲ ಅಂದರೆ, ಶೇ. 5.96ರಷ್ಟು ಜನರು ಪ್ರತಿಕ್ರಿಯಿಸಲು ಹಿಂದೇಟು ಹಾಕಿದ್ದಾರೆ.
“ಬೆಲೆ ಏರಿಕೆಗೆ ಯಾರು ಕಾರಣವೆಂದು ಭಾವಿಸುತ್ತೀರಿ?” ಎಂಬ ಮಹತ್ವದ ಪ್ರಶ್ನೆಯನ್ನೂ ಕೇಳಲಾಗಿತ್ತು. ಶೇ. 44.50ರಷ್ಟು ಜನರು ಬಿಜೆಪಿ ಕಾರಣವೆಂದೂ, ಶೇ. 22.91ರಷ್ಟು ಜನರು ಕಾಂಗ್ರೆಸ್ ಪಕ್ಷ ಕಾರಣವೆಂದೂ, ಕಾಂಗ್ರೆಸ್- ಬಿಜೆಪಿ ಎರಡೂ ಪಕ್ಷಗಳು ಕಾರಣವೆಂದು ಶೇ. 19.56 ಜನ ಪ್ರತಿಕ್ರಿಯಿಸಿದ್ದಾರೆ. ಶೇ 10.13ರಷ್ಟು ಜನರು ’ಗೊತ್ತಿಲ್ಲ, ನಾನು ಹೇಳಲ್ಲ’, ಎಂದರೆ ಶೇ. 1.98 ಜನರು ಯಾರೂ ಕಾರಣರಲ್ಲ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಶೇ. 0.9ರಷ್ಟು ಜನರು ಮಾತ್ರ ಜೆಡಿಎಸ್ ಕಾರಣವೆಂದು ಹೇಳಿದ್ದಾರೆ.
ಬಿಜೆಪಿ ಮಾತ್ರ ಬೆಲೆ ಏರಿಕೆಗೆ ಕಾರಣ ಮತ್ತು ಬಿಜೆಪಿ- ಕಾಂಗ್ರೆಸ್ ಎರಡೂ ಕಾರಣ ಎಂದು ಹೇಳುವ ಮತದಾರರ ಪ್ರಮಾಣ ಒಟ್ಟು 64.06ರಷ್ಟಿದೆ. ಅಂದರೆ ಬಿಜೆಪಿ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ ಇದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ರಾಷ್ಟ್ರ ಮಟ್ಟದಲ್ಲಿ ನಡೆದಿರುವ ಸಮೀಕ್ಷೆಗಳು ಕೂಡ ಬೆಲೆ ಏರಿಕೆಯನ್ನು ಎತ್ತಿ ಹಿಡಿದಿವೆ. ಸರ್ವೆಗಳಿಗೆ ಹೆಸರಾದ ‘ಸಿಎಸ್ಡಿಎಸ್ ಲೋಕನೀತಿ’ ನಡೆಸಿದ್ದ ಸಮೀಕ್ಷೆಯಲ್ಲಿ, “ಕಳೆದ ಐದು ವರ್ಷಗಳಲ್ಲಿ ಬೆಲೆ ಏರಿಕೆ ಆಗಿದೆಯೇ?” ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಶೇ.71ರಷ್ಟು ಮಂದಿ ಹೌದು ಎಂದರೆ, ಶೇ. 13ರಷ್ಟು ಜನರು ಇಲ್ಲ ಎಂದಿದ್ದರು. ಶೇ. 13ರಷ್ಟು ಜನ ಯಥಾಸ್ಥಿತಿ ಇರುವುದಾಗಿ ಹೇಳಿದ್ದರು. ಬೆಲೆ ಏರಿಕೆ ಆಗಿದೆ ಎಂದವರಲ್ಲಿ ಶೇ. 76ರಷ್ಟು ಬಡವರು, ಶೇ.70ರಷ್ಟು ಅತಿ ಬಡವರು, ಶೇ.66 ಮಧ್ಯಮ ವರ್ಗ, ಶೇ. 68ರಷ್ಟು ಮೇಲ್ವರ್ಗದ ಜನರು ಇದ್ದಾರೆ. ಶೇ. 72ರಷ್ಟು ಗ್ರಾಮೀಣರು, ಶೇ. 69ರಷ್ಟು ಪಟ್ಟಣವಾಸಿಗಳು, ಶೇ. 33ರಷ್ಟು ನಗರ ವಾಸಿಗಳು ಬೆಲೆ ಏರಿಕೆಯಾಗಿದೆ ಎಂದಿರುವುದು ಗಮನಾರ್ಹ.
ವಿಶ್ವಾಸಾರ್ಹ ಸಮೀಕ್ಷೆಗಳು ಹೇಳುತ್ತಿರುವ ಸತ್ಯಗಳು ’ಬಿಜೆಪಿ’ಗೆ ಅಹಿತಕರವಾಗಿವೆ. ಬೆಲೆ ಏರಿಕೆಯ ನಡುವೆ ಕಾಂಗ್ರೆಸ್ ಪಕ್ಷವು ಐದು ಗ್ಯಾರಂಟಿಗಳನ್ನು ಚುನಾವಣಾ ಅಸ್ತ್ರವಾಗಿ ಬಳಸುತ್ತಿರುವುದರಿಂದ ಬಯಲು ಸೀಮೆ ಉತ್ತರ ಕರ್ನಾಟಕದಲ್ಲಿ ಭಾರೀ ಪರಿಣಾಮ ಬೀರುವ ಸೂಚನೆ ಕಾಣುತ್ತಿದೆ.

ದಿನಬಳಕೆ ಪದಾರ್ಥಗಳ ಬೆಲೆ , ದಿನಾಂಕ 01 ಮೇ 2024
ಅಕ್ಕಿ 57 – 60
ಬೆಲ್ಲ 52 – 54
ಸಕ್ಕರೆ 48 – 52
ಗೋಧಿ ಹಿಟ್ಟು 60 – 65
ಚಾ ಹುಡಿ 340 – 350
ಉಪ್ಪು10 – 15
ತೊಗರಿ ಬೇಳೆ 140 – 160
ಉದ್ದಿನ ಬೇಳೆ 140 – 160
ಕೊಬ್ಬರಿ ಎಣ್ಣೆ ಒಂದು ಲೀಟರ್ 180 – 200
ಎಳ್ಳೆಣ್ಣೆ ಒಂದು ಲೀಟರ್ 230 – 240
ತುಪ್ಪ ಒಂದು ಲೀಟರ್ 650 – 700
ಹಾಲು ಒಂದು ಲೀಟರ್ 52 – 60
ತೆಂಗಿನಕಾಯಿ ಒಂದರ 25 – 30
ಎಳನೀರು ಒಂದರ 40 – 45
ನಿಂಬೆಹಣ್ಣು ಒಂದರ 5 – 7
ಊಟ ಮಾಡುವ ಬಾಳೆ ಎಲೆ ಒಂದರ 5 – 7
ಪೆಟ್ರೋಲ್ ಒಂದು ಲೀಟರ್ 101
ಡೀಸೆಲ್ ಒಂದು ಲೀಟರ್ 85
ಅಡುಗೆ ಅನಿಲ ಸಿಲಿಂಡರ್ ಒಂದರ 810.50 ( ಚುನಾವಣೆ ಘೋಷಣೆಗೆ ಮೊದಲು 1010.50 )
# ಬೆಲೆ ಏರಿಕೆಯಾಗಿದೆಯೋ , ಇಳಿಕೆಯಾಗಿದೆಯೋ ? ದೇಶಕ್ಕೇ ಗೊತ್ತಿದೆ.
ಬಿಸಿಲಿನ ತಾಪ ಏರುತ್ತಿದೆ ! ಬೆಲೆಯೂ ಎರುತ್ತಿದೆ ! ಎಲ್ಲರೂ ಕಷ್ಟ – ನಷ್ಟ ಅನುಭವಿಸುತ್ತಿದ್ದಾರೆ. 😳