ಮೇ 7ರಂದು ನಡೆಯಲಿರುವ ಬೀದರ ಲೋಕಸಭಾ ಚುನಾವಣೆಗೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದ ಜಿಲ್ಲಾ ಚುನಾವಣಾಧಿಕಾರಿ ಗೋವಿಂದ ರೆಡ್ಡಿ ಹೇಳಿದರು.
ಶನಿವಾರ ಬೀದರ ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನಾಳೆ (ಮೇ 5) ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರ ಅಂತ್ಯಗೊಳ್ಳುತ್ತದೆ. ವೇದಿಕೆ ಕಾರ್ಯಕ್ರಮ, ಮೆರವಣಿಗೆ, ಲೋಡ್ ಸ್ಪೀಕರ್ಗೆ ಅನುಮತಿ ಇರುವುದಿಲ್ಲ. ಅಭ್ಯರ್ಥಿಗಳು ಮನೆ-ಮನೆಗೆ ತೆರಳಿ ಪ್ರಚಾರ ಮಾಡಬಹುದಾಗಿದೆ. ಕಲಂ 144 ಜಾರಿಯಲ್ಲಿ ಇರಲಿದ್ದು ಮೇ 5ರ ಸಂಜೆ 6 ರಿಂದ ಬಾರ್ಗಳು ಮುಚ್ಚಲ್ಪಡುತ್ತವೆ. ಬೀದರ ಲೋಕಸಭಾ ಕ್ಷೇತ್ರದ ಮತದಾರರಲ್ಲದವರು ಪ್ರಚಾರಕ್ಕಾಗಿ ಬಂದವರು ಕ್ಷೇತ್ರಬಿಟ್ಟು ತೆರಳಬೇಕು” ಎಂದು ಸೂಚಿಸಿದರು.
ಬೀದರ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,92,962 ಜನ ಮತದಾರರಿದ್ದು, 18 ಅಭ್ಯರ್ಥಿಗಳು ಹಾಗೂ ಒಂದು ನೋಟಾ ಸೇರಿ ಒಟ್ಟು 19 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5 ಸಖಿ ಪಿಂಕ್ ಮತಗಟ್ಟೆ, 1 ಯುವ ಮತಗಟ್ಟೆ, 1 ವಿಶೇಷ ಚೇತನರ ಮತಗಟ್ಟೆ ಹಾಗೂ 1 ಥೀಮ್ ಬೇಸ್ ವಿಶೇಷ ಮತಗಟ್ಟೆ ಇರಲಿದೆ. 324 ಕ್ರಿಟಿಕಲ್ ಪೋಲಿಂಗ್ ಬೂತ್ ಇರಲಿವೆ. ಚುನಾವಣೆ ದಿನ 120 ವಿಡಿಯೋ ಗ್ರಾಫರ್ ಹಾಗೂ 150 ಸೂಕ್ಷ್ಮ ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, “ಬೀದರ ಲೋಕಸಭಾ ಕ್ಷೇತ್ರದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತದಾರರು ನಿರ್ಭೀತವಾಗಿ ಮತ ಚಲಾಯಿಸಲು ಭದ್ರತೆಯ ಭಾವನೆ ಜನರಲ್ಲಿ ಮೂಡಿಸಲು ಈಗಾಗಲೇ ಜಿಲ್ಲೆಯಾದ್ಯಂತ 31 ಕಡೆ ಏರಿಯಾ ಡಾಮಿನೇಷನ್ ಮಾಡಲಾಗಿದೆ. ಈ ವರ್ಷ 9 ಜನರಿಗೆ ಗಡಿಪಾರು ಮಾಡಲಾಗಿದ್ದು. ಓರ್ವರನ್ನು ಗುಂಡಾ ಕಾಯ್ದೆ ಅಡಿಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದರು.
ಕ್ರಿಟಿಕಲ್ ಹಾಗೂ ಸೂಕ್ಷ್ಮ ಮತಗಟ್ಟೆಗಳಲ್ಲಿ ಶಾಂತಿಭಂಗ ಮಾಡುವ 861 ವ್ಯಕ್ತಿಗಳ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ ಹಾಗೂ 2331 ಜನರಿಗೆ ಮುಚ್ಚಳಿಕೆ ಬರೆದು ಕೊಡಲಾಗುತ್ತಿದೆ. ಪ್ರತಿ ವಿಧಾನ ಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಡಿವೈಎಸ್ಪಿ ಹಂತದ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಫ್ ಸಮಿತಿ ನೋಡಲ್ ಅಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ, “ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಫ್ ಸಮಿತಿ ಬೀದರ ವತಿಯಿಂದ ಬೀದರ ಲೋಕಸಭಾ ಕ್ಷೇತ್ರದಲ್ಲಿ ಶೇ.80 ರಷ್ಟು ಮತದಾನಕ್ಕಾಗಿ ಹಲವಾರು ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾ, ತಾಲೂಕು ಹಾಗೂ ಗ್ರಾ.ಪಂ. ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ವಾಕ್ಥಾನ್, ಕ್ರಿಕೆಟ್, ಸೈಕಲ್ ಜಾಥಾ ಹಾಗೂ ಜಿಲ್ಲೆಯ ವಿವಿಧ ವಸತಿ ನಿಲಯಗಳಲ್ಲಿ ರಂಗೋಲಿ, ಪ್ರಬಂಧ ಸ್ಪರ್ಧೆ ಸೇರಿದಂತೆ ಇತರೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ” ಎಂದು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 35 ಸಾವಿರ ಯುವ ಮತದಾರರಿದ್ದು, ಎಲ್ಲರೂ ಮತ ಚಲಾಯಿಸಬೇಕು. 8 ವಿಶೇಷ ಮತಗಟ್ಟೆಗಳು ಇರಲಿವೆ. ಒಂದೇ ಕಡೆ ಎರಡು ಮೂರು ಮತಗಟ್ಟೆ ಇರುವ ಕ್ಲಸ್ಟರ್ಗಳಲ್ಲಿ ಪೋಲಿಂಗ್ ಬೂತ್ ಸಹಾಯಕರನ್ನು ನಿಯೋಜನೆ ಮಾಡಲಾಗುತ್ತದೆ, ಅವರು ಯಾವ ಮತಗಟ್ಟೆಗಳಲ್ಲಿ ಮತದಾರರ ಹೆಸರು ಇದೆ ಎಂಬ ಮಾಹಿತಿಯನ್ನು ಮತದಾರರಿಗೆ ನೀಡುವುದರಿಂದ ಮತದಾರರಿಗೆ ಅನುಕೂಲವಾಗಲಿದೆ. ಈ ಸಲ ಶೇ. 80 ಪ್ರತಿಶತ ಮತದಾನ ಮಾಡುವ ಗುರಿ ನಮ್ಮದಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಚುನಾವಣಾ ತಹಶಿಲ್ದಾರ ಅಣ್ಣಾರಾವ್ ಪಾಟೀಲ, ವಾರ್ತಾಧಿಕಾರಿ ಜಿ. ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.