ಪ್ರಧಾನಿ ಮೋದಿಯವರು ಹಾಗೂ ಬಿಜೆಪಿಯ ಅನೇಕ ಶಾಸಕರು, ಸಂಸದರು ಹಾಗೂ ಅಭ್ಯರ್ಥಿಗಳು ಬಹಿರಂಗವಾಗಿ ನಾವು 400 ಸೀಟ್ ಗೆದ್ದರೆ ದೇಶದಲ್ಲಿ ಸಂವಿಧಾನ ಬದಲಾಯಿಸುವುದಾಗಿ ಹೇಳಿದ್ದಾರೆ. ಬಿಜೆಪಿಗೆ 2/3ರಷ್ಟು ಬಹುಮತ ನೀಡಿದರೆ, ಈ ದೇಶದಲ್ಲಿ ಸಂವಿಧಾನ ಇರುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಪರ ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಆಯೋಜಿಸಿದ ಕೋಲಿ, ಕಬ್ಬಲಿಗ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ, “ದೇಶದ ಸಂವಿಧಾನ ತಿರುಚುವುದು, ಪ್ರಜಾಪ್ರಭುತ್ವ ಹಾಳು ಮಾಡುವುದು ಬಿಜೆಪಿ ಹಾಗೂ ಆರ್ಎಸ್ಎಸ್ ನವರ ಮುಖ್ಯ ಅಜೆಂಡಾವಾಗಿದೆ. ಸಂವಿಧಾನ ಬದಲಾದರೆ ಯಾವುದೇ ರೀತಿಯ ಮೀಸಲಾತಿ ಪಡೆಯಲಾಗುವುದಿಲ್ಲ. ಮೀಸಲಾತಿ ವಿರೋಧಿ ಬಿಜೆಪಿ, ಆರ್ಎಸ್ಎಸ್ನಿಂದ ಸಂವಿಧಾನವನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಮಾಡಲಿದೆ” ಎಂದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಂದಂತೆ ಈ ಬಾರಿಯೂ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಬೀಡುಬಿಟ್ಟಿದ್ದಾರೆ. ಕ್ಷೇತ್ರದಲ್ಲಿ ರಾತ್ರಿ ಹಗಲು ಎನ್ನದೇ ಸುತ್ತಾಡಿ ಮೋದಿ ತರಹ ಸುಳ್ಳು ಹೇಳಿ ಪ್ರಚಾರ ನಡೆಸುತ್ತಿದ್ದಾರೆ, ಅವರಿಂದ ಮತದಾರರು ಎಚ್ಚರವಾಗಿರಬೇಕು ಎಂದು ಹೇಳಿದರು.
ಕೇಂದ್ರದಲ್ಲಿ 30 ಲಕ್ಷ ಉದ್ಯೋಗಗಳು ಖಾಲಿ ಉಳಿದಿವೆ, ಅದರಲ್ಲಿ ಶೇ.50% ರಷ್ಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ, ಉಳಿದ ಶೇ 50% ರಷ್ಟು ಓಬಿಸಿ ಹಾಗೂ ಇತರೆ ಸಮಾಜದವರಿಗೆ ಮೀಸಲಿವೆ. ಆದರೆ ಈ ಉದ್ಯೋಗಗಳು ಬಡವರಿಗೆ ನೀಡಿದರೆ ಅವರು ಆರ್ಥಿಕವಾಗಿ ಬಲಿಷ್ಠರಾಗುತ್ತಾರೆ ಎಂಬ ಕಾರಣಕ್ಕೆ ಮೋದಿ ಸರ್ಕಾರ ಉದ್ಯೋಗ ಭರ್ತಿ ಮಾಡಲು ಕೈಗೆತ್ತಿಕೊಳ್ಳುತ್ತಿಲ್ಲ ಎಂದರು.
“ಮಲ್ಲಿಕಾರ್ಜುನ ಖರ್ಗೆಯವರು ಶಿವ ಮತ್ತು ರಾಮನಲ್ಲಿ ವ್ಯತ್ಯಾಸ ಮಾಡಿ ಸಮಾಜವನ್ನು ವಿಂಗಡಿಸುತ್ತಿದ್ದಾರೆ ಎಂದು ಮೋದಿಯವರು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಹನ್ನೆರಡು ಜೋತಿರ್ಲಿಂಗದಲ್ಲಿ ನನ್ನ ಹೆಸರು ʼಮಲ್ಲಿಕಾರ್ಜುನʼ ಅಂತ ಇದ್ದೀನಿ, ನಾನೇಕೆ ವಿರೋಧಿಸಲಿ ಎಂದು ಹೇಳಿದ್ದೇನೆ ಎಂದರು. ಬಿಜೆಪಿ, ಆರ್ಎಸ್ಎಸ್ನವರು ಜಾತಿ, ಧರ್ಮದ ಆಧಾರದಲ್ಲಿ ದೇಶ ಒಡೆಯಬೇಡಿ” ಎಂದು ಹೇಳಿದರು.
ಬಿಜೆಪಿಯಿಂದ ದೇಶ ಉದ್ದಾರ ಆಗುವುದಿಲ್ಲ, ಸ್ವಾತಂತ್ರ್ಯವಾಗಿ ಬಾಳಿ ಬದುಕಿ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಸಿದರೆ ಮಾತ್ರ ನಾವು ಸ್ವತಂತ್ರವಾಗಿ ಮಾತಾಡಲು ಅಧಿಕಾರ ಇರುತ್ತದೆ ಎಂದು ಎಚ್ಚರಿಸಿದರು.
“ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯಿಂದ ಬಡವರಿಗೆ ಆರ್ಥಿಕವಾಗಿ ಅನುಕೂಲ ಆಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ʼಮಹಿಳಾ ನ್ಯಾಯʼ ಯೋಜನೆಯಡಿ ಕುಟುಂಬದ ಮಹಿಳೆಗೆ ಪ್ರತಿ ವರ್ಷ ಒಂದು ಲಕ್ಷ ರೂ. ಹಣ ನೇರ ವರ್ಗಾವಣೆ ಮಾಡುತ್ತೇವೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ 72 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದ್ದರು. ಅದೇ ಮಾದರಿಯಲ್ಲಿ ʼರೈತ ನ್ಯಾಯʼ ಯೋಜನೆಯಡಿ ರೈತರ ಸಾಲ ಮನ್ನಾ ಮಾಡುವುದು, ಯುವ ನ್ಯಾಯ, ಕಾರ್ಮಿಕ ನ್ಯಾಯ ಹಾಗೂ ಜಾತಿ ಜನಗಣತಿ ಮಾಡುವ ಮಹತ್ವದ ಯೋಜನೆಗಳು ನಮ್ಮದಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಧಾನಿಯನ್ನಾಗಿಸಿದ ಹಾಸನಕ್ಕೆ ಗೌಡರು ಕೊಟ್ಟ ಉಜ್ವಲ ಕೊಡುಗೆ ಈ ಪ್ರಜ್ವಲ
ದೇಶದಲ್ಲಿ ಸಂವಿಧಾನಬದ್ಧ ಸರ್ಕಾರ ಆಡಳಿತಕ್ಕೆ ಬರಬೇಕಾದರೆ, ಪ್ರಜಾಪ್ರಭುತ್ವ ಉಳಿಯಬೇಕಾದರೆ ಬರುವ ಮೇ 7ರಂದು ನಡೆಯಲಿರುವ ಲೋಕಸಭಾ ಚುನಾವಣೆ ದಿನದಂದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಕೋರಿದರು.