ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಿದ್ಧತೆ ಹಾಗೂ ವಿವಿಧ ಹಂತಗಳ ಪ್ರಕ್ರಿಯೆಗಳನ್ನು ವೀಕ್ಷಿಸಲು ಐದು ರಾಷ್ಟ್ರಗಳ ಚುನಾವಣಾ ಆಯೋಗಗಳ ಪ್ರತಿನಿಧಿಗಳ ಅಂತರ್ ರಾಷ್ಟ್ರೀಯ ತಂಡ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿತು.
ಬೆಳಗಾವಿ ಜಿಲ್ಲೆಗೆ ಆಗಮಿಸಿದ ಕಾಂಬೋಡಿಯಾ, ನೇಪಾಳ, ಮೊಲ್ಡೊವಾ, ಸಿಷೆಲ್ ಹಾಗೂ ತುನಿಷಿಯಾ ದೇಶಗಳ ಚುನಾವಣಾ ಆಯೋಗಗಳ ಹತ್ತು ಸದಸ್ಯರ ತಂಡವನ್ನು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ಬರಮಾಡಿಕೊಂಡರು.
ಅಂತರ್ ರಾಷ್ಟ್ರೀಯ ನಿಯೋಗದಲ್ಲಿ ಕಾಂಬೋಡಿಯಾ ದೇಶದ ರಾಷ್ಟ್ರೀಯ ಚುನಾವಣಾ ಮಂಡಳಿಯ ಸದಸ್ಯರಾದ ಹೆಲ್.ಸರಾಥ್, ಕಾಂಬೋಡಿಯಾ ದೇಶದ ರಾಷ್ಟ್ರೀಯ ಚುನಾವಣಾ ಮಂಡಳಿಯ ಮುಖ್ಯ ಕಾರ್ಯದರ್ಶಿ ಹೌಟ್ ಬೋರಿನ್, ಮೊಲ್ಡೊವಾ ದೇಶದ ಕೇಂದ್ರ ಚುನಾವಣಾ ಆಯೋಗದ ಸದಸ್ಯರಾದ ಡಾನಾ ಮಂಟೇನುವಾ, ಮೊಲ್ಡೊವಾ ದೇಶದ ಕೇಂದ್ರ ಚುನಾವಣಾ ಆಯೋಗದ ಸ್ಥಳೀಯ ಜಿಲ್ಲಾ ಚುನಾವಣಾ ಪತಿಷತ್ ಮುಖ್ಯಸ್ಥರಾದ ಆ್ಯಡ್ರಿಯನ್ ಗಮರ್ತಾ ಎಸಾನು, ನೇಪಾಳ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ದಿನೇಶ್ ಕುಮಾರ್ ಥಾಪಾಲಿಯಾ, ನೇಪಾಳ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಥಾನೇಶ್ವರಬುಸಾಲ್, ಸಿಷೆಲ್ ದೇಶದ ಚುನಾವಣಾ ಆಯೋಗದ ಮುಖ್ಯಸ್ಥ ಡ್ಯಾನಿ ಸಿಲ್ವಾ ಲುಕಾಸ್, ಸಿಷೆಲ್ ದೇಶದ ಚುನಾವಣಾ ಆಯೋಗದ ಆಯುಕ್ತ ನೊರ್ಲಿಸ್ ನಿಕೋಲಸ್ ರೋಸ್ ಹೋರೌ, ತುನಿಷಿಯಾ ಎಲೆಕ್ಷನ್ ಹೈಕಮಿಷನ್(ಐಎಸ್ಐಇ) ನ ಮಾನಸ್ರೀ ಮೊಹ್ಮದ್ ತ್ಲಿಲಿ ಹಾಗೂ ತುನಿಷಿಯಾ ಎಲೆಕ್ಷನ್ ಹೈಕಮಿಷನ್(ಐಎಸ್ಐಇ) ನ ಪ್ರಾದೇಶಿಕ ನಿರ್ದೇಶಕರಾದ ಜೆಲ್ಲಾಲಿ ನಬೀಲ್ ಇದ್ದಾರೆ.
ರಾಷ್ಟ್ರೀಯ ನಿಯೋಗದ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ಚುನಾವಣಾ ಸಿದ್ಧತೆಗಳ ಕುರಿತು ಮಾಹಿತಿಯನ್ನು ನೀಡಿದರು.
ಬೆಳಗಾವಿ ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ್ ವಿಕಾಸ್, ಜಿಲ್ಲಾ ಪೊಲೀಸ್ ವರಿಷ್ಢಾಧಿಕಾರಿ ಡಾ.ಭೀಮಾಶಂಕರ ಗುಳೇದ, ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಶುಭಂ ಶುಕ್ಲಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮೇ 7 ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ವನಿತಾ ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ನಿಯೋಗದ ಸದಸ್ಯರು, ಮಸ್ಟರಿಂಗ್ ಕುರಿತು ಮಾಹಿತಿ ಪಡೆದುಕೊಂಡರು.
ಮತಗಟ್ಟೆ ಸಿಬ್ಬಂದಿ ನಿಯೋಜನೆ, ಸ್ಟ್ರಾಂಗ್ ರೂಮ್, ಮತಯಂತ್ರಗಳ ವಿತರಣೆ, ಮತಗ್ಟೆಗೆ ಚುನಾವಣಾ ಅಧಿಕಾರಿ/ಸಿಬ್ಬಂದಿ ತಂಡಗಳ ರವಾನೆ ಹಾಗೂ ಸಾರಿಗೆ ವ್ಯವಸ್ಥೆಯ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.
ಚುನಾವಣೆ ಘೋಷಣೆಯಾದ ತಕ್ಷಣವೇ ಮಾದರಿ ನೀತಿಸಂಹಿತೆ ಜಾರಿಗೆ ಬರುತ್ತದೆ. ಮಾದರಿ ನೀತಿಸಂಹಿತೆ ಉಲ್ಲಂಘನೆಗಳನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಥಾಪಿಸಲಾಗಿರುವ ಸುಸಜ್ಜಿತ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಲ್ಲಿ ಎಂಸಿಸಿ ತಂಡ ಕಾರ್ಯನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಇಡೀ ಜಿಲ್ಲೆಯಾದ್ಯಂತ ಸ್ಥಾಪಿಸಲಾಗಿರುವ ಚೆಕ್ ಪೋಸ್ಟ್ ಗಳನ್ನು ವೆಬ್ ಕ್ಯಾಮೆರಾ ಮೂಲಕ ಒಂದೇ ಕಡೆ ಕುಳಿತು ನಿಗಾ ವಹಿಸುವ ವ್ಯವಸ್ಥೆ; ಜಿಪಿಎಸ್ ಆಧಾರಿತ ವಾಹನಗಳೊಂದಿಗೆ ಕ್ಷೇತ್ರದಾದ್ಯಂತ ಸಂಚರಿಸುವ ಎಫ್.ಎಸ್.ಟಿ. ತಂಡಗಳಿಗೆ ತಕ್ಷಣವೇ ಮಾಹಿತಿ ರವಾನಿಸಲು ಅನುಕೂಲವಾಗುವಂತಹ ಏಕೀಕೃತ ವ್ಯವಸ್ಥೆಯ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಯಿತು.
