- ಗೋವಿಂದರಾಜನಗರ ಕ್ಷೇತ್ರದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ
- ಮೇ 10ರಂದು ಅರ್ಹರೆಲ್ಲರೂ ಮತದಾನ ಮಾಡುವಂತೆ ಮನವಿ
ದೇಶದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ಮತ ಚಾಲಾಯಿಸುವ ಅವಕಾಶವಿದೆ. ಮತದಾನ ಮಾಡುವುದು ಅತ್ಯಮೂಲ್ಯವಾದದ್ದು, ಎಲ್ಲ ಮತದಾರರು ತಪ್ಪದೇ ಮತದಾನ ಮಾಡಿ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಲಯ ಆಯುಕ್ತ ಡಾ. ಆರ್.ಎಲ್ ದೀಪಕ್ ಮನವಿ ಮಾಡಿದರು.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಡ್ಡಾಯ ಮತದಾನ ಮಾಡಲು ಗೋವಿಂದರಾಜನಗರ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬಿಬಿಎಂಪಿ ಜಾಥಾ ಕಾರ್ಯಕ್ರಮ ನಡೆಸಿದೆ. ಈ ವೇಳೆ ವಲಯ ಆಯುಕ್ತ ಡಾ.ಆರ್.ಎಲ್ ದೀಪಕ್ ಮಾತನಾಡಿದರು.
“ಉತ್ತಮ ಜನಪ್ರತಿನಿಧಿ ಆಯ್ಕೆ ಮಾಡಲು ಕಡ್ಡಾಯವಾಗಿ ಮತದಾನ ಮಾಡಬೇಕು. ಆದ್ದರಿಂದ ಎಲ್ಲ ಯುವ ಮತದಾರರು ಮತದಾನದ ಪ್ರಾಮುಖ್ಯತೆಯನ್ನು ಅರಿತು ಮತದಾನ ಮಾಡಬೇಕು” ಎಂದು ಹೇಳಿದರು.
“ಭಾರತ ದೇಶದ ಪ್ರಜೆಗಳಾದ ನಮಗೆ ಚುನಾವಣೆ ಆಯೋಗ ನಾವು ಮತದಾನ ಮಾಡಲು ಬೇಕಾದ ಮತದಾರ ಪಟ್ಟಿ, ಮತದಾನ ಮಾಡಲು ಬೂತ್ ವ್ಯವಸ್ಥೆ ಹಾಗೂ ನಿರ್ಭಿತಿಯಿಂದ ಮತದಾನ ಮಾಡಲು ಸೂಕ್ತ ಭದ್ರತೆ ವ್ಯವಸ್ಥೆ ಮಾಡಲಾಗಿದೆ” ಎಂದು ಜಂಟಿ ಆಯುಕ್ತ ಲೋಕನಾಥ್ ತಿಳಿಸಿದರು.
“ಒಂದು ಮತದಿಂದ ಬದಲಾವಣೆ ತರಲು ಸಾಧ್ಯ. ಸಂವಿಧಾನ ನೀಡಿರುವ ಮತದಾನ ಹಕ್ಕುನ್ನು ಎಲ್ಲರೂ ತಪ್ಪದೆ ಚಲಾಯಿಸಿ. 80ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನರಿಗೆ ಮನೆಯಿಂದ ಮತದಾನ ನೀಡಲು ಅವಕಾಶ ನೀಡಲಾಗಿದೆ. ಮೇ 10ರಂದು ಪ್ರತಿಯೊಬ್ಬ ಮತದಾರರು ವೋಟ್ ಮಾಡಿ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯಿರಿ” ಎಂದರು.
ಈ ಸುದ್ದಿ ಓದಿದ್ದೀರಾ? ಇನ್ಮುಂದೆ ಬೆಂಗಳೂರಿನ ಆಟೋಗಳಲ್ಲಿ ‘ಸೀಟ್ ಬೆಲ್ಟ್’: ಪ್ರಯಾಣಿಕರ ಸುರಕ್ಷತೆ ಮೊದಲ ಆದ್ಯತೆ ಎಂದ ರ್ಯಾಪಿಡೋ
ಈ ವೇಳೆ ವಲಯ ಆರೋಗ್ಯಧಿಕಾರಿ ಮನೋರಂಜನ್ ಹೆಗಡೆ, ಆರೋಗ್ಯ ವೈದ್ಯಾಧಿಕಾರಿ ರಾಜೇಂದ್ರ, ಸಹಾಯಕ ಕಾರ್ಯಪಾಲಕ ಅಭಿಯಂತರು ಹಾಗೂ ನೋಡಲ್ ಅಧಿಕಾರಿ ಉಮೇಶ್, ಕಂದಾಯಧಿಕಾರಿ, ಅಪಾರ್ಟ್ ಮೆಂಟ್ ನಿವಾಸಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.