ಲೋಕಸಭಾ ಚುನಾವಣೆಯ ಅಬ್ಬರದ ಪ್ರಚಾರ, ಮತದಾನ ಮುಗಿದಿದೆ. ಅಭ್ಯರ್ಥಿಗಳು ತುಸು ವಿರಾಮದಲ್ಲಿದ್ದಾರೆ. ಪಕ್ಷದ ಕಾರ್ಯಕರ್ತರು ಸೋಲು, ಗೆಲುವಿನ ಲೆಕ್ಕಚಾರದಲ್ಲಿ ತೊಡಗಿದ್ದಾರೆ.
ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆ ಏಪ್ರಿಲ್ 26ರಂದು ನಡೆದಿದ್ದು, 14 ಕ್ಷೇತ್ರಗಳಲ್ಲಿ ಶೇಕಡಾ 69.56 ರಷ್ಟು ಮತದಾನವಾಗಿತ್ತು. ಎರಡನೇ ಹಂತದಲ್ಲಿ 14 ಕ್ಷೇತ್ರಗಳಲ್ಲಿ ಶೇ. 70.41ರಷ್ಟು ಮತದಾನವಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ 2024ರ ಲೋಕಸಭೆ ಚುನಾವಣೆಯಲ್ಲಿ ಶೇ. 69.96ರಷ್ಟು ಮತದಾನವಾಗಿದೆ.
ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಒಟ್ಟು ಶೇ 65.45ರಷ್ಟು ಮತದಾನವಾಗಿದೆ. ಕ್ಷೇತ್ರದ ವ್ಯಾಪ್ತಿಯ ಒಟ್ಟು 2,024 ಮತಗಟ್ಟೆಗಳಲ್ಲಿ ಸಂಪೂರ್ಣ ಶಾಂತಿಯುತ ಮತದಾನ ನಡೆದಿದೆ.

ಮತದಾನದ ಮರುದಿನವಾದ ಬುಧವಾರ ಕ್ಷೇತ್ರದ ಹೊಟೇಲ್, ಅಂಗಡಿ ಸೇರಿದಂತೆ ಹಳ್ಳಿಯ ಗುಡಿ-ಗುಂಡಾರ, ಚಾವಡಿ ಮೇಲೆ ಕುಳಿತ ಜನ ಮತದಾನದ ಚರ್ಚೆಯಲ್ಲಿಯೇ ಮುಳುಗಿದ್ದು, ತಮ್ಮ ತಮ್ಮ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಚಾರ ಶುರುವಿಟ್ಟುಕೊಂಡಿದ್ದಾರೆ.
ಕೆಂಡದಂತಹ ಬಿಸಿಲಿನ ಝಳಕ್ಕೆ ಹೊರಹೋಗದ ಹಳ್ಳಿಯ ಜನ ಅರಳಿಕಟ್ಟೆ ಮೇಲೆ ಗುಂಪು-ಗುಂಪಾಗಿ ಸೇರಿ ಸುತ್ತಲಿನ ಗ್ರಾಮಗಳಲ್ಲಿಎಷ್ಟು ಮತದಾನವಾಗಿದೆ? ಯಾವ ಪಕ್ಷಕ್ಕೆ ಲೀಡ್ ಇದೆ ಎಂಬ ಕುತೂಹಲದ ಮಾತು. ಈ ಬಾರಿ ಪಕ್ಕಾ ಇವ್ರೇ ಗೆಲ್ತಾರೆ…ಹಾಂಗ್ ಆಗ್ಲಾಕ್ ಚಾನ್ಸೇ ಇಲ್ಲ, ನೂರಕ್ಕೂ ನೂರು ನಾವೇ ಗೆದಿತೇವ್, ಬೇಕಾದರೂ ʼಶರ್ತಿʼ ಹಾಕಿ. ʼಹೋಗ್ಲಿ ತಕೋರಿ, ಯಾರ್ ಗೆದ್ದಿ ಏನ್ ಮಾಡ್ತಾರ್, ಯಾರ್ ಗೆದ್ರೂ ನಾವ್ ದಂಧೆ ಮಾಡದ್ ಏನ್ ತಪ್ತುದಾ? ಸುಮ್ನೆ ಅವ್ರ ಸಲೇಕೆ ನಾವ್ಯಾಕ್ ತಲಿ ಖರಾಬ್ ಮಾಡ್ಕೋಬೇಕ್ʼ ಎಂಬಿತ್ಯಾದ ಚರ್ಚೆಗೆ ತೆರೆ ಎಳೆದು ಮನೆ ದಾರಿ ಹಿಡಿದ ದೃಶ್ಯಗಳು ಸಾಮಾನ್ಯವಾಗಿವೆ.
ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಆದರೆ, ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಇದೆ. ಹೀಗಾಗಿ ಎಲ್ಲೇ ರಾಜಕೀಯ ಚರ್ಚೆ ನಡೆದರೂ ಖಂಡ್ರೆ-ಖೂಬಾ ಅವರದ್ದೇ ಮಾತು. ಚರ್ಚೆ.
‘ಈ ಸಲ ಬಿಜೆಪಿ ಬರೋದ್ ಯಾಕೋ ಭಾಳ್ ಡೌಟ್ ಅದಾ’.. ಅಂತ ಒಬ್ಬರಂದ್ರೆ, ʼಸುಮ್ನಿರೀ ನಿಮ್ಗೆ ಗೊತ್ತಿಲ್ಲ, ಮತಾ.. ಬಿಜೆಪಿನೇ ಬರ್ತುದ್ʼ ಇನ್ನೊಬರು, ಇಲ್ಲ, ಈ ಸಲ ಕಾಂಗ್ರೆಸ್ ಗೆದಿಯೋದು ಪಕ್ಕಾ ಅದಾ ನೋಡ್ರೀʼ ಎಂಬ ವಕಾಲತ್ತು ನಡೆಯುತ್ತಿದೆ.
ಕ್ಷೇತ್ರದಲ್ಲಿ ಬಿಜೆಪಿಯ ಭಗವಂತ ಖೂಬಾ ಹಾಗೂ ಕಾಂಗ್ರೆಸ್ನ ಸಾಗರ್ ಖಂಡ್ರೆ ಅವರ ನಡುವೆ ನೇರ ಹಣಾಹಣಿ ಕಂಡು ಬಂದಿದೆ. ಆದ್ದರಿಂದ, ಇವರಿಬ್ಬರಲ್ಲಿ ಯಾರ ಕೈ ಮೇಲಾಗಿದೆ, ಯಾರಿಗೆ ಹೊಡೆತ ಬಿದ್ದಿದೆ, ಮತದಾರರು ಯಾರಿಗೆ ಜೈ ಎಂದಿದ್ದಾರೆ. ಅದಕ್ಕೆ ಕಾರಣವಾಗಿರುವ ಅಂಶಗಳೇನು ಎಂಬುದರ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಸದ್ಯಕ್ಕೆ ಬಿಸಿಬಿಸಿ ಚರ್ಚೆ, ವಿಶ್ಲೇಷಣೆಗಳು ಭರ್ಜರಿಯಾಗಿ ಶುರುವಾಗಿವೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಅವರು ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿದ್ದರು. ಬಿಜೆಪಿ ಪರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ.ವಿಜಯೇಂದ್ರ, ಆರ್. ಅಶೋಕ ಮತಯಾಚನೆ ಮಾಡಿದ್ದರು. ಎರಡೂ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ, ಸಮಾವೇಶಗಳು ನಡೆಸುವ ಮೂಲಕ ಮತದಾರರ ಮನಸ್ಸು ಗೆಲ್ಲಲು ಇನ್ನಿಲ್ಲದ ಭಾರೀ ಕಸರತ್ತು ನಡೆಸಿದ್ದರು. ಇದೀಗ ಮತದಾರ ಯಾರಿಗೆ ಒಲಿದಿದ್ದಾನೆ ಎಂಬುದು ಇವಿಎಂನಲ್ಲಿ ಭದ್ರವಾಗಿದೆ.
ಕ್ಷೇತ್ರದಲ್ಲಿ ಲಕ್ಷಾಂತರ ಜನ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿ ಮತ ಹಕ್ಕು ಚಲಾಯಿಸಿದ್ದು, ಜಿಲ್ಲೆಯಲ್ಲಿ ದೊಡ್ಡ ಜಾತ್ರೆ ಮುಗಿದಂತಹ ವಾತಾವರಣ ಭಾಸವಾಗುತ್ತಿದೆ. ಬಿಡುವಿರದ ರೀತಿಯಲ್ಲಿ ಹಗಲು ರಾತ್ರಿ ಎನ್ನದೇ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗುತ್ತಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಇದೀಗ ವಿರಾಮದಲ್ಲಿದ್ದಾರೆ. ಆದರೆ, ಯಾವ ಕ್ಷೇತ್ರದಲ್ಲಿ ಹೇಗೆ ಮತದಾನ ನಡೆದಿದೆ, ಯಾರಿಗೆ ಎಷ್ಟು ಲೀಡ್ ಸಿಗಬಹುದು? ಎಂದು ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ರಜ್ವಲ್ ಲೈಂಗಿಕ ಹಗರಣ | ನೂರಾರು ಹಿಂದು ಮಹಿಳೆಯರ ಮಾಂಗಲ್ಯ ಹಗರಣ ಮಾಡಿದ ಪ್ರಕರಣ: ಸಚಿವ ಕೃಷ್ಣಬೈರೇಗೌಡ
ಸದ್ಯ ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತಯಂತ್ರಗಳಲ್ಲಿ ಭದ್ರವಾಗಿದೆ. ಮತದಾರ ಯಾರಿಗೆ ಮಣೆ ಹಾಕಿದ್ದಾನೆ ಎಂಬುದನ್ನು ತಿಳಿಯಲು ಫಲಿತಾಂಶಕ್ಕಾಗಿ ಜನರು ಬರೋಬ್ಬರಿ 28 ದಿನ ಕಾಯಲೇಬೇಕಾಗಿದೆ. ಈಗ ಎಲ್ಲರ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಜೂನ್ 4ರಂದು ಫಲಿತಾಂಶ ಹೊರಬೀಳಲಿದೆ. ಮತಗಳ ಲೆಕ್ಕಚಾರದಲ್ಲಿ ತೊಡಗಿದ ಅಭ್ಯರ್ಥಿಗಳ ಎದೆ ಢವ..ಢವ..! ಶುರುವಾಗಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
ಭಾರೀ ಚಂದ್ ಬರ್ದಿರಿ ಸರ್.