ಸಂಘ ಪರಿವಾರದ ಮುಖಂಡರು, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸದಸ್ಯರು ಹಾಗೂ ಜೈನ ಸನ್ಯಾಸಿಗಳ ನಿಯೋಗ ಮಂಗಳವಾರ (ಮೇ 7) ರಾಜಸ್ಥಾನದ ಅಜ್ಮೀರ್ನಲ್ಲಿರುವ ‘ಅಧೈ ದಿನ್ ಕಾ ಜೊನ್ಪ್ರಾ’ ಮಸೀದಿಗೆ ಭೇಟಿ ನೀಡಿತ್ತು. ಐತಿಹಾಸಿಕ ಮಸೀದಿಯನ್ನು ಪರಿಶೀಲಿಸಿದ ನಿಯೋಗವು, ಈ ಹಿಂದೆ ಆ ಸ್ಥಳದಲ್ಲಿ ಜೈನ ದೇವಾಲಯಗಳಿದ್ದವು ಎಂದು ಪ್ರತಿಪಾದಿಸಿದೆ.
ಜೈನ ಸನ್ಯಾಸಿ ಸುನೀಲ್ ಸಾಗರ್ ಅವರು ಮಸೀದಿ ಇರುವ ಜಾಗದಲ್ಲಿ ಜೈನ ತೀರ್ಥಂಕರರ ಬಸದಿಗಳಿದ್ದವು ಎಂದು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಬೆನ್ನಲ್ಲೇ, ಅಜ್ಮೀರ್ನ ಬಿಜೆಪಿ ನಾಯಕರು ‘ಅಯೋಧ್ಯೆ, ಕಾಶಿ ಮತ್ತು ಮಥುರಾ ಮಾದರಿಯಲ್ಲಿ ಇಲ್ಲಿನ ಜೈನ ಸ್ಮಾರಕವನ್ನು ರಕ್ಷಿಸಬೇಕು’ ಎಂದು ಒತ್ತಾಯಿಸಿದ್ದು, ಅಜ್ಮೀರನ್ನು ಕೋಮು ವಿವಾದಿತ ತಾಣವನ್ನಾಗಿ ಮಾಡಲು ಮುಂದಾಗಿದ್ದಾರೆ.
“ಅಜ್ಮೀರ್ ಮಸೀದಿಯಲ್ಲಿ ನಾವು ಗಣೇಶ್ ಅಥವಾ ಯಕ್ಷನನ್ನು ಹೋಲುವ ತೀರ್ಥಂಕರರು ಹಾಗೂ ದೇವತೆಗಳ ವಿಗ್ರಹಗಳನ್ನು ನೋಡಿದ್ದೇವೆ. ಈ ವಿಗ್ರಹಗಳನ್ನು ಇರಿಸಲಾಗಿರುವ ಕೊಠಡಿಗಳ ಕೀಲಿಕೈ ಇಲ್ಲದ ಕಾರಣ ನಾವು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಮೊಘಲರು ಭಾರೀ ಪ್ರಭಾವ ಹೊಂದಿದ್ದ ಕಾಲವಿತ್ತು. ಅವರು ಹಳೆಯ ಸ್ಮಾರಕಗಳನ್ನು ಬದಲಾಯಿಸಿ, ಅತೀ ಕಡಿಮೆ ಸಮಯದಲ್ಲಿ ಹೊಸ ರೂಪ ನೀಡಿದ್ದರಿಂದ ಇದನ್ನು ‘ಅಧೈ ದಿನ್ ಕಾ ಜೊನ್ಪ್ರಾ’ ಎಂದು ಕರೆಯಲಾಗುತ್ತಿವೆ ಸಾಧ್ಯತೆಯಿದೆ” ಎಂದು ಜೈನ ಸನ್ಯಾಸಿ ಸುನೀಲ್ ಸಾಗರ್ ಹೇಳಿದ್ದಾರೆ.
“ಸ್ಮಾರಕದ ಬಳಿ ಇನ್ನಷ್ಟು ವಿಗ್ರಹಗಳು ಹೂತು ಹೋಗಿರುವ ಶಂಕೆ ಇದೆ. ಅವುಗಳನ್ನು ಪತ್ತೆ ಹಚ್ಚಲು ಉತ್ಖನನ ನಡೆಸಬೇಕು” ಎಂದು ಸಾಗರ್ ಹೇಳಿದ್ದಾರೆ.
“ನಮ್ಮ ಭೇಟಿಯ ವೇಳೆ ನಗರದ ಹಲವಾರು ಯುವಕರು ನಮ್ಮೊಂದಿಗಿದ್ದರು. ಮುಸ್ಲಿಂ ಸಮುದಾಯದವರೂ ಇದ್ದರು. ಎಲ್ಲರೂ ಶಾಂತಿಯಿಂದ ಬದುಕಬೇಕು. ಆದರೆ, ಎಲ್ಲರೂ ಪರಸ್ಪರರ ಸಂಸ್ಕೃತಿಯನ್ನು ಗೌರವಿಸಬೇಕು. ಸ್ಮಾರಕದಲ್ಲಿರುವ ವಸ್ತುಗಳನ್ನು ಯಾರಿಗೆ ಸೇರಿದ್ದು ಎಂದು ಗುರುತಿಸಿ, ಅವರಿಗೆ ಹಿಂದಿರುಗಿಸಬೇಕು” ಎಂದು ಸಾಗರ್ ಹೇಳಿದ್ದಾರೆ.
‘ಅಧೈ ದಿನ್ ಕಾ ಜೋನ್ಪ್ರಾ’ ಪ್ರಸ್ತುತ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಅಡಿಯಲ್ಲಿದೆ. “ಈ ಐತಿಹಾಸಿಕ ಮಸೀದಿಯನ್ನು ಕ್ರಿ.ಶ 1199ರಲ್ಲಿ ದೆಹಲಿಯ ಮೊದಲ ಸುಲ್ತಾನ ಕುತುಬ್-ಉದ್-ದಿನ್-ಐಬಕ್ ನಿರ್ಮಿಸಿದರು. ದೆಹಲಿಯ ಕುತುಬ್-ಮಿನಾರ್ ಸಂಕೀರ್ಣದಲ್ಲಿರುವ ಮಸೀದಿ ನಿರ್ಮಾಣವಾದ ಸಮಯದಲ್ಲೇ ಈ ಮಸೀದಿ ಕೂಡ ನಿರ್ಮಾಣವಾಗಿದೆ. ಅಜ್ಮೀರ್ನ ಮಸೀದಿಯನ್ನು ಕ್ರಿ.ಶ 1213ರಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಕೆತ್ತಿದ ಕಾರ್ಬೆಲ್ಡ್ ಕಮಾನುಗಳಿಂದ ಸುಂದರಗೊಳಿಸಲಾಗಿದೆ,” ಎಂದು ASI ಜೈಪುರ ವೆಬ್ಸೈಟ್ ವಿವರಿಸಿದೆ.
“ಆದಾಗ್ಯೂ, ಸುಮಾರು ಕ್ರಿ.ಶ 11 ರಿಂದ 12ನೇ ಶತಮಾನದಲ್ಲಿ ಮಸೀದಿ ಸಮೀಪದಲ್ಲಿ ಹಿಂದೂ ದೇವಾಲಯ ಇದ್ದವು. ಅವುಗಳ ಕೆಲವು ಶಿಲ್ಪಗಳನ್ನು ಸುರಕ್ಷತೆ ಮತ್ತು ಭದ್ರತಾ ಉದ್ದೇಶಗಳಿಗಾಗಿ ಮಸೀದಿ ಸಂಕೀರ್ಣದಲ್ಲಿ ಇರಿಸಲಾಗಿದೆ. ದೇವಾಲಯಗಳ ಕೆಲವು ಅವಶೇಷಗಳಿಂದ ನಿರ್ಮಿಸಲಾದ ಈ ಮಸೀದಿಯನ್ನು ‘ಅಧೈ-ದಿನ್-ಕಾ-ಜೋನ್ಪ್ರಾ’ ಎಂದು ಕರೆಯಲಾಗುತ್ತದೆ. ಪ್ರಾಯಶಃ, ಇಲ್ಲಿ ಎರಡೂವರೆ ದಿನಗಳ ಕಾಲ ಜಾತ್ರೆ ನಡೆಯುತ್ತಿತ್ತು” ಎಂದು ವೆಬ್ಸೈಟ್ನ ವಿವರಣೆಯಲ್ಲಿ ಉಲ್ಲೇಖಿಸಲಾಗಿದೆ.
ಈ ವರದಿ ಓದಿದ್ದೀರಾ?: ಸಾಮೂಹಿಕ ‘ಸಿಕ್ ಲೀವ್’ ಹಾಕಿಕೊಂಡ ಸಿಬ್ಬಂದಿಗಳು; 78 ವಿಮಾನಗಳು ರದ್ದು!
“ಕಂಠಾಭರಣ ಸಂಸ್ಕೃತ ಪಾಠಶಾಲೆ ಇಲ್ಲೇ ಇತ್ತು ಎಂದು ಇತಿಹಾಸದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ನಾವು ಸುನೀಲ್ ಸಾಗರ್ ಮಹಾರಾಜ್ ಅವರೊಂದಿಗೆ ಮಸೀದಿಯ ಕಾಂಪೌಂಡ್ ಪರಿಶೀಲಿಸಲು ಹೋಗಿದ್ದೆವು. ಕೆಲವು ಮುಸ್ಲಿಂ ಸಮುದಾಯದ ಮುಖಂಡರು ನಮಾಜ್ ನಡೆಯುತ್ತಿದೆಯೆಂದು ನಾವು ಸ್ಮಾರಕವನ್ನು ಪ್ರವೇಶಿಸದಂತೆ ವಿರೋಧಿಸಿದರು. ‘ನಮಾಜ್ಗೆ ಅಡ್ಡಿಪಡಿಸುವ ಉದ್ದೇಶ ನಮಗಿಲ್ಲ’ವೆಂದು ನಾವು ಹೇಳಿದೆವು. ಕಾಂಪೌಂಡ್ ಅನ್ನು ಪರಿಶೀಲಿಸಿದೆವು” ಎಂದು ವಿಎಚ್ಪಿ ಸದಸ್ಯ, ವಕೀಲ ಶಶಿ ಪ್ರಕಾಶ್ ಇಂಡೋರಿಯಾ ಹೇಳಿದ್ದಾರೆ.
“ಅಧೈ ದಿನ್ ಕಾ ಜೋನ್ಪ್ರಾ ಎಂದು ಕರೆಯಲ್ಪಡುವ ಸ್ಮಾರಕವು ಕಂಠಾಭರಣ ಸಂಸ್ಕೃತ ಪಾಠಶಾಲೆಯಾಗಿತ್ತು. ಅದನ್ನು ದುಷ್ಕರ್ಮಿಗಳು ನಾಶಪಡಿಸಿ ಆಕ್ರಮಿಸಿಕೊಂಡಿದ್ದಾರೆ. ಸ್ಥಳವು ಎಎಸ್ಐ ಅಧೀನದಲ್ಲಿರುವುದರಿಂದ ಮಥುರಾದ ಕಾಶಿ ವಿಶ್ವನಾಥ್ ಮತ್ತು ಕೃಷ್ಣ ಜನ್ಮಭೂಮಿ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು” ಎಂದು ಬಿಜೆಪಿ ನಾಯಕ ಮತ್ತು ಅಜ್ಮೀರ್ ಉಪಮೇಯರ್ ನೀರಜ್ ಜೈನ್ ಹೇಳಿದ್ದಾರೆ.