ಲೋಕಸಭಾ ಚುನಾವಣೆ ವೇಳೆ ದ್ವೇಷ ಭಾಷಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿವರಣೆ ಪಡೆಯುವಂತೆ ಭಾರತ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್ಸಿಸಿ) ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಮೋದಿಯವರ ದ್ವೇಷ ಭಾಷಣಗಳ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ಹಲವು ದೂರುಗಳನ್ನು ಸಲ್ಲಿಸಲಾಗಿದ್ದರೂ, ಆಯೋಗವು ನೇರವಾಗಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಕೇಳುವ ಬದಲು ಬಿಜೆಪಿಗೆ ಕೇವಲ ಒಂದು ಶೋಕಾಸ್ ನೋಟಿಸ್ ನೀಡಿದೆ ಎಂದು ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಕೆ ಸೆಲ್ವಪೆರುಂತಗೈ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 21ರಿಂದ ಅನೇಕ ಚುನಾವಣಾ ಸಭೆಗಳಲ್ಲಿ ಪ್ರಧಾನಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ. ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ ಖುದ್ದು ಮೋದಿಯೇ ಅಪರಾಧಿಯಾಗಿದ್ದಾರೆ. ಅವಹೇಳನಕಾರಿ ಮತ್ತು ವಿಭಜನಕಾರಿ ಭಾಷಣಗಳಿಗೆ ಮೋದಿ ಅವರು ಏಕಮಾತ್ರ ಜವಾಬ್ದಾರರಾಗಿದ್ದಾರೆ. ಕ್ರಮ ಕೈಗೊಳ್ಳದ ಚುನಾವಣಾ ಆಯೋಗದ ಮೃದು ಧೋರಣೆ ತಪ್ಪು ಸಂದೇಶ ನೀಡಲಿದ್ದು, ದೇಶದ ಸಂಪೂರ್ಣ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯನ್ನು ಹಾಳುಮಾಡುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಕ್ಕಳ ಬಗೆಗಿನ ಮಮಕಾರ ಮತ್ತು ಮೋದಿಯ ಸೋಗಲಾಡಿತನ
ಬಿಜೆಪಿ 2024ರ ಲೋಕಸಭೆ ಚುನಾವಣೆಯನ್ನು ಶತಾಯಗತಾಯ ಗೆಲ್ಲಲು ಯತ್ನಿಸುತ್ತಿದ್ದು ಕೋಮುವಾದದ ಮೂಲಕ ವಿಭಜನೆಯ ಪ್ರಚಾರದಲ್ಲಿ ತೊಡಗಿದೆ. ಸ್ವತಃ ಪ್ರಧಾನಿಯೇ ಮುಸ್ಲಿಮರನ್ನು “ನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರು” ಎಂದು ಕರೆದಿದ್ದಾರೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಬಗ್ಗೆ ಪ್ರಧಾನಿ ತಪ್ಪುದಾರಿಗೆಳೆಯುವ ಮತ್ತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದು ಹೀಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವುದನ್ನು ತಡೆಯಬೇಕು ಅರ್ಜಿಯಲ್ಲಿ ಕೆ ಸೆಲ್ವಪೆರುಂತಗೈ ತಿಳಿಸಿದ್ದಾರೆ.
ವಿರೋಧಿಗಳು ಗೆಲುವು ಸಾಧಿಸಿದರೆ ಹಿಂದೂಗಳ ಸಂಪತ್ತು ಮುಸ್ಲಿಮರ ಕೈ ಸೇರುತ್ತಾರೆ ಎಂಬ ಅವರ ಮಾತೂ ಪ್ರತಿರೋಧಕ್ಕೆ ಅರ್ಹವಾದುದು. ಮೇ 1 ರಂದು ಚೆನ್ನೈನಲ್ಲಿರುವ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಈ ಕುರಿತು ಪತ್ರ ಬರೆದಿದ್ದರೂ ಅವರು ಇದುವರೆಗೆ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಹೈಕೋರ್ಟ್ಗೆ ಪ್ರಸ್ತುತ ಅರ್ಜಿ ಸಲ್ಲಿಸಲಾಗಿದ್ದು ಮೋದಿ ಅವರಿಂದ ವಿವರಣೆ ಪಡೆಯುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ ಡಿ ಜಗದೀಶ್ ಚಂದಿರ ಮತ್ತು ಆರ್ ಕಲೈಮತಿ ಅವರಿದ್ದ ರಜಾಕಾಲೀನ ಪೀಠದೆದುರು ಪ್ರಸ್ತಾಪಿಸಲಾಯಿತು. ಆದರೆ ಪೀಠ, ರಿಜಿಸ್ಟ್ರಿ ಮೂಲಕ ವಿಚಾರಣೆಗೆ ಸಂಖ್ಯೆ ಪಡೆಯುವಂತೆ ಸೂಚಿಸಿತು.
