ಬೆಂಗಳೂರಿನಲ್ಲಿ ಮಳೆಗಾಲ ಪ್ರಾರಂಭವಾಗಿದ್ದು, ಮಳೆಯಾಗುವ ವೇಳೆ ಮರಗಳು, ಮರದ ರೆಂಬೆ/ಕೊಂಬೆಗಳು ಧರೆಗುರುಳಲಿವೆ. ಇದರಿಂದ ನಾಗರಿಕರಿಗೆ ಹಾಗೂ ವಾಹನ ಸವಾರರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಈ ನಿಟ್ಟಿನಲ್ಲಿ ಪಾಲಿಕೆಯ ಅರಣ್ಯ ವಿಭಾಗವು ಮರ ಕಟಾವು ತಂಡಗಳನ್ನು ನಿಯೋಜಿಸಿದೆ.
“ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಮಳೆಗಾಲದ ವೇಳೆ ಧರೆಗುರುಳುವ ಮರ, ಮರದ ರೆಂಬೆ/ಕೊಂಬೆಗಳನ್ನು ತೆರವುಗೊಳಿಸುವ ಸಲುವಾಗಿ ಮರ ಕಟಾವು ತಂಡಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಧರಗುರುಳಿದ ಮರಗಳನ್ನು ಕಾಲಮಿತಿಯೊಳಗಾಗಿ ತೆರವುಗೊಳಿಸಲಾಗುತ್ತಿದೆ” ಎಂದು ಪಾಲಿಕೆ ತಿಳಿಸಿದೆ.
ಪಾಲಿಕೆಯ ನಿಯಂತ್ರಣ ಕೊಠಡಿಗಳಿಗೆ ಮರ, ಮರದ ರೆಂಬೆ/ಕೊಂಬೆಗಳು ಬಿದ್ದಂತಹ ದೂರುಗಳು ಬಂದ ಕೂಡಲೇ ಆ ದೂರುಗಳನ್ನು ಆಯಾ ವಲಯದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಿದ್ದಾರೆ. ಅನಂತರ ಅಧಿಕಾರಿಗಳು ಮರ, ಮರದ ರೆಂಬೆ/ಕೊಂಬೆ ಬಿದ್ದಿರುವ ಸ್ಥಳಕ್ಕೆ ಮರ ಕಟಾವು ತಂಡಗಳನ್ನು ಕಳುಹಿಸಿ ಧರೆಗುರುಳಿದ ಮರಗಳನ್ನು ಕಟಾವು ಮಾಡಿ ನಾಗರಿಕರು, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿದ್ದು, ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ 28 ಮರ ಕಟಾವು ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇದರ ಜತೆಗೆ ತುರ್ತಾಗಿ ಮರಗಳನ್ನು ತೆರವುಗೊಳಿಸುವ ಸಲುವಾಗಿ ಹೆಚ್ಚುವರಿಯಾಗಿ 11 ತಂಡಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಪ್ರತಿ ತಂಡದಲ್ಲೂ ಏಳು ಕಾರ್ಮಿಕರು, ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಮರಗಳನ್ನು ತೆರವುಗೊಳಿಸುವ ಅವಶ್ಯಕತೆಯಿರುವ ಗರಗಸ, ಕೊಂಬೆಗಳನ್ನು ತುಂಡರಿಸುವ ಯಂತ್ರ, ಹಾರೆ, ಹಗ್ಗ ಸೇರಿದಂತೆ ಇನ್ನಿತರೆ ಸಲಕರಣೆಗಳಿರಲಿವೆ. ಜೊತೆಗೆ ಕಟಾವು ಮಾಡಿದ ಮರದ ತುಂಡುಗಳ ಸಾಗಣೆಗಾಗಿ ವಾಹನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಮಳೆಗಾಲದಲ್ಲಿ ಬಿದ್ದಂತಹ ಮರಗಳನ್ನು ತೆರವುಗೊಳಿಸುವ ಸಲುವಾಗಿ ಈ ಬಾರಿ ವಿನೂತನವಾಗಿ 5 ಬೈಕ್(ದ್ವಿಚಕ್ರ ತಂಡ) ತಂಡಗಳನ್ನು ನಿಯೋಜಿಸಿಕೊಳ್ಳಲಾಗಿದೆ. ಅದರಂತೆ ರಸ್ತೆ ಮೇಲೆ ಬಿದ್ದಂತಹ ಅಥವಾ ತುರ್ತಾಗಿ ಮರಗಳನ್ನು ತೆಗೆಯಬೇಕಾದ ಸ್ಥಳಗಳಿಗೆ ಬೈಕ್ ತಂಡಗಳು ಕೊಂಬೆ ಕಟಾವು ಯಂತ್ರವನ್ನು ತೆಗೆದುಕೊಂಡು ಸ್ಥಳಕ್ಕೆ ತೆರಳಿ ಮರವನ್ನು ಕಟಾವು ಮಾಡಿ ತೆರವುಗೊಳಿಸಲಿದ್ದಾರೆ.
ಮಳೆಗಾಲದ ವೇಳೆ ಬೃಹತ್ ಮರಗಳು ಬಿದ್ದರೆ ಅವುಗಳನ್ನು ತ್ವರಿತಗತಿಯಲ್ಲಿ ತೆರವುಗೊಳಿಸುವ ಸಲುವಾಗಿ ಪಾಲಿಕೆ ಅರಣ್ಯ ವಿಭಾಗವು 2 ಕ್ರೇನ್ ಹಾಗೂ 2 ಜೆಸಿಬಿಗಳನ್ನು ನಿಯೋಜನೆ ಮಾಡಿಕೊಂಡಿದೆ. ಅಲ್ಲದೆ, ಅದನ್ನು ಸಾಗಾಣೆ ಮಾಡುವ ಸಲುವಾಗಿ 8 ಟ್ರ್ಯಾಕ್ಟರ್ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೆಎಎಸ್ ಅಧಿಕಾರಿಯ ಪತ್ನಿ ಅನುಮಾನಾಸ್ಪದ ಸಾವು
ಧರೆಗುಳಿದ ಮರಗಳನ್ನು ಕಟಾವು ಮಾಡಿದ ನಂತರ ಮರದ ದಿಮ್ಮಿಗಳು, ರೆಂಬೆ, ಕೊಂಬೆಗಳ ವಿಲೇವಾರಿಗಾಗಿ ವಲಯಕ್ಕೆ ಒಂದರಂತೆ ಆಯಾ ವಲಯಗಳಲ್ಲಿ 8 ಡಂಪಿಂಗ್ ಯಾರ್ಡ್ಗಳಿದ್ದು, ಹೆಚ್ಚುವರಿಯಾಗಿ ತಾತ್ಕಾಲಿಕವಾಗಿ 6 ಕಡೆ ಡಂಪಿಂಗ್ ಯಾರ್ಡ್ಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳಲ್ಲಿ ಮರದ ದಿಮ್ಮಿ, ರೆಂಬೆ, ಕೊಂಬೆಗಳನ್ನು ವಿಲೇವಾರಿ ಮಾಡಲಾಗುತ್ತದೆ.
ನಗರದಲ್ಲಿ ಈಗಾಗಲೇ ಮಳೆ ಪ್ರಾರಂಭವಾಗಿದ್ದು, ಮೇ 6 ರಿಂದ ಮೇ 10 ರವರೆಗೆ 271 ಮರ ಹಾಗೂ 483 ರೆಂಬೆ, ಕೊಂಬೆಗಳು ಧರೆಗುರುಳಿದಿವೆ. ಮರ ಕಟಾವು ತಂಡಗಳ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ನಾಗರಿಕರಿಂದ ದೂರುಗಳು ಬಂದ ಕೂಡಲೆ ಸ್ಥಳಕ್ಕೆ ತೆರಳಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದೆ.