ದಶಕಗಳ ಹಿಂದೆ ನಡೆದಿರುವ ಜನಪರ ಚಳವಳಿಗಳ ಚೇತನವನ್ನು ನಾವು ಉಳಿಸಿಕೊಂಡಿಲ್ಲ. ಆದರೆ ಅದನ್ನು ನಂಬಿ ಈವರೆಗೆ ಹೋರಾಟ ಮಾಡುತ್ತಿದ್ದೇವೆ ಎಂದು ಸಾಮಾಜಿಕ ಹೋರಾಟಗಾರ ಕೆ.ಫಣಿರಾಜ್ ವಿಷಾದ ವ್ಯಕ್ತಪಡಿಸಿದರು.
‘ಮೇ ಸಾಹಿತ್ಯ ಮೇಳ’ದ ಅಂಗವಾಗಿ ಶನಿವಾರ ನಡೆದ ‘ಸಂವಿಧಾನದ ಚಿಂತನೆಗಳುʼ ಕುರಿತ ಮೊದಲ ಗೋಷ್ಠಿಯಲ್ಲಿ ʼಭಾರತದಲ್ಲಿನ ಕೋಮುರಾಜಕಾರಣದ ಇತಿಹಾಸʼದ ಕುರಿತು ಮಾತನಾಡಿ, “ಸಂಘ ಪರಿವಾರವು ಎಲ್ಲ ವಲಯವನ್ನೂ ವ್ಯಾಪಿಸಿದ್ದು, ಈವರೆಗೆ ಆಎಸ್ಎಸ್ 75 ಸಂಘಟನೆಗಳನ್ನು ಸ್ಥಾಪಿಸಿದೆ. ಇದರ ಪರಿಣಾಮವಾಗಿ ಹಿಂದೂ ರಾಷ್ಟ್ರವಾದದ ಪರಿಕಲ್ಪನೆ ಎಲ್ಲೆಡೆ ಬೇರೂರಿದೆ. ಹಿಂದೂತ್ವ ಯಾವ ಬಗೆಯಲ್ಲಿ ಎಲ್ಲ ವಲಯಗಳನ್ನು ಬಾಧಿಸುತ್ತಿದೆ ಎಂಬುದನ್ನು ಜನರಿಗೆ ತಿಳಿಸಬೇಕಿದೆ” ಎಂದು ಹೇಳಿದರು.
“ಮತೀಯ ಮತ್ತು ಜಮೀನ್ದಾರಿ ವ್ಯವಸ್ಥೆ ಪರ ಇರುವ ಸಂಘ ಪರಿವಾರ, ಆರಂಭದಿಂದಲೇ ಸಂವಿಧಾನದ ವಿರೋಧಿ ಆಶಯಗಳನ್ನು ಹೊಂದಿದೆ. ಮುಸ್ಲಿಂ, ಕ್ರಿಶ್ಚಿಯನ್ನರ ಬಗ್ಗೆ ಸಮಾಜದಲ್ಲಿ ಭಯ ಮೂಡಿಸಿ, ಹಿಂದೂಗಳನ್ನು ಒಗ್ಗೂಡಿಸುವ ತಂತ್ರಗಾರಿಕೆಯನ್ನು ಅದು ಅನುಸರಿಸುತ್ತಿದೆ. 1940ರಲ್ಲಿ ನೂರು ಶಾಖೆಗಳನ್ನು ಹೊಂದಿದ್ದ ಆರ್ಎಸ್ಎಸ್, 2015ರ ಹೊತ್ತಿಗೆ 55,000 ಶಾಖೆಗಳನ್ನು ತೆರೆದಿದೆ. ನಿರಂತರವಾಗಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರುದ್ಧ ವಿದ್ರೋಹದ ಹೋರಾಟ ನಡೆಸುತ್ತಿರುವ ಕೆಳವರ್ಗದ ಸಂಘ ಪರಿವಾರದ ಕೆಲಸಗಳು ಮೇಲ್ನೋಟಕ್ಕೆ ಕಾಣುವುದಿಲ್ಲ. ಅದು ತಳಮಟ್ಟದಲ್ಲಿ ಕೆಲಸ ಮಾಡುತ್ತಿದೆ” ಎಂದು ವಿಶ್ಲೇಷಿಸಿದರು.
“ದಲಿತ, ಬೌದ್ಧ, ಮುಸ್ಲಿಂ ಘಟಕಗಳನ್ನು ಸ್ಥಾಪಿಸಿರುವ ಆರ್ಎಸ್ಎಸ್, ಕಾರ್ಮಿಕ ಹಾಗೂ ಶಿಕ್ಷಣ ವಲಯಕ್ಕೂ ಪ್ರವೇಶಿಸಿದೆ. ಅದರಲ್ಲೂ ಕೆಳವರ್ಗದ ಯುವ ಪೀಳಿಗೆಯ ತಲೆಯಲ್ಲಿ ಹಿಂದೂ ರಾಷ್ಟ್ರವಾದಿ ಯೋಚನಾಲಹರಿಯನ್ನು ತುಂಬಿ, ಹೋರಾಟಕ್ಕೂ ಆ ವರ್ಗದ ಯುವಕ- ಯುವತಿಯರನ್ನೇ ಕಳಿಸುವ ತಂತ್ರಗಾರಿಕೆ ಸಂಘ ಪರಿವಾರ ಹೊಂದಿದೆ. ತಳಸಮುದಾಯದ ಯುವಕನೊಬ್ಬನನ್ನು ಹೋರಾಟಕ್ಕೆ ಹಚ್ಚುವ ಆ ಮೂಲಕ ಹಿಂದೂ ರಾಷ್ಟ್ರವಾದವನ್ನು ಮತ್ತಷ್ಟು ಪ್ರಖರಗೊಳಿಸುವ ಹುನ್ನಾರವು ʼಕಾಂತಾರʼ ಚಿತ್ರದ ಮೂಲಕ ಅನಾವರಣಗೊಂಡಿದೆ” ಎಂದು ಟೀಕಿಸಿದರು.
ʼಸಂವಿಧಾನ ಪೀಠಿಕಾ ಭಾಗ, ಆದರ್ಶ- ಅವಲೋಕನʼ ಕುರಿತು ಹಿರಿಯ ನ್ಯಾಯವಾದಿ ಮೋಹನ ಕಾತರಕಿ ಮಾತನಾಡಿ, “ಹಿಂದೂ ಎಂಬ ಪದ ಅಥವಾ ಧರ್ಮವು ಬಿಜೆಪಿ ಅಥವಾ ಸಂಘ ಪರಿವಾರದ ಆಸ್ತಿಯಲ್ಲ. ಭಾರತದ ಸಂವಿಧಾನ ಒಂದು ವೇಳೆ ಒಬಿಸಿ ಅಥವಾ ದಲಿತರಿಗೆ ಸವಲತ್ತು ಕೊಟ್ಟಿರದಿದ್ದರೆ, ಹಿಂದೂ ಧರ್ಮ ಉಳಿಯುತ್ತಿರಲಿಲ್ಲ. ಆ ಬಗ್ಗೆಯೂ ಯೋಚಿಸಬೇಕು. ಹಿಂದೂ ಧರ್ಮದ ಬಗ್ಗೆ ಬಿಜೆಪಿಗೆ ಒಲವಿಲ್ಲ. ಅದೊಂದು ಮತಗಳಿಕೆಯ ಅಸ್ತ್ರವಷ್ಟೇ” ಎಂದು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಗುಜರಾತ್ | ರಾಜ್ಕೋಟ್ನ ಗೇಮಿಂಗ್ ಝೋನ್ನಲ್ಲಿ ಭಾರೀ ಬೆಂಕಿ ಅವಘಡ; 20 ಮಂದಿ ಮೃತ್ಯು
ಡಾ. ರಾಜಶೇಖರ ನಾರನಾಳ, ಸವಿತಾ ಅಂಗಡಿ, ಹಿರಿಯ ಸಾಹಿತಿ ಎಚ್.ಎಸ್.ಪಾಟೀಲ ಉಪಸ್ಥಿತರಿದ್ದರು. ಪತ್ರಕರ್ತ ಶರಣಪ್ಪ ಬಾಚಲಾಪುರ ನಿರೂಪಿಸಿದರು.