ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರಗಳು ಸೇರಿದಂತೆ ಇನ್ನಿತರೆ ಜಾಹೀರಾತುಗಳ ತೆರವು ಹಾಗೂ ಅವುಗಳನ್ನು ನಿಯಂತ್ರಿಸಲು ‘ಜಾಹೀರಾತು ಮುಕ್ತ ಅಭಿಯಾನ’ವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆರಂಭಿಸಿದೆ.
“ಪಾಲಿಕೆಯ ವ್ಯಾಪ್ತಿಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ‘ಪಾಲಿಕೆಯ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿಗಳು-2018’ರಲ್ಲಿ ಅಂಗಡಿ ಮುಂಗಟ್ಟು ಜಾಹೀರಾತುಗಳು, ವಾಹನ ಸ್ವ-ಜಾಹೀರಾತು ಇನ್ನಿತರೆ ಸಣ್ಣಪುಟ್ಟ ಜಾಹೀರಾತುಗಳನ್ನು ಸೀಮಿತ ಅವಧಿಗೆ ಮತ್ತು ಸೀಮಿತ ಅಳತೆಗೆ(ಪಿಪಿಪಿ ಯೋಜನೆಗಳು ಸೇರಿದಂತೆ) ಅನುಮತಿಸಲು ಮಾತ್ರ ಅವಕಾಶವಿದೆ” ಎಂದು ಹೇಳಿದೆ.
“ಇವುಗಳನ್ನು ಹೊರತುಪಡಿಸಿ ಇತರೆ ಯಾವುದೇ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಿ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶನ, ಎಲ್ಇಡಿ ಜಾಹೀರಾತು ಪ್ರದರ್ಶನ ಹಾಗೂ ಸಾರ್ವಜನಿಕ ಮತ್ತು ವೈಯಕ್ತಿಕ ಜಾಹೀರಾತುಗಳು, ಶುಭಾಶಯಗಳು, ಸಭೆ ಸಮಾರಂಭಗಳು ಕುರಿತ ಜಾಹೀರಾತು, ಪ್ರಕಟಣೆಗಳ ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರ, ಬಾವುಟಗಳು ಇತ್ಯಾದಿ ಅಳವಡಿಸುವುದನ್ನು ನಿಷೇಧಿಸಲಾಗಿದ್ದರೂ ಸಹ ಮತ್ತೆ ಮತ್ತೆ ಅಳವಡಿಸುತ್ತಿರುವುದರಿಂದ ಸಾರ್ವಜನಿಕ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದು ಅಲ್ಲದೇ ನಗರದ ಸೌಂದರ್ಯ ಹಾಳಾಗುತ್ತಿದೆ ಮತ್ತು ಪರಿಸರಕ್ಕೆ ಮಾರಕವಾಗಿದೆ” ಎಂದು ತಿಳಿಸಿದೆ.
ಪರಿಸರ(ಸಂರಕ್ಷಣೆ), ಕಾಯಿದೆ 1986ರ ಸೆಕ್ಷನ್ 5ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಪ್ಲಾಸ್ಟಿಕ್ ಬಳಸುವುದನ್ನು ನಿಷೇದಿಸಲಾಗಿದೆ. ಆದ್ದರಿಂದ ನಗರದ ವಸತಿ ಪ್ರದೇಶಗಳಲ್ಲಿ, ಖಾಸಗಿ ಸ್ವತ್ತುಗಳಲ್ಲಿ, ಅನಧಿಕೃತ ವಾಣಿಜ್ಯ ಜಾಹೀರಾತುಗಳು, ಪ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಭಿತ್ತಿಪತ್ರಗಳು, ಇನ್ನಿತರೆ ಮುದ್ರಣ ಪ್ರಕಟಣೆ/ಜಾಹೀರಾತು ಹಾಗೂ ಖಾಸಗಿ ಸ್ವತ್ತುಗಳಲ್ಲಿ ಅಳವಡಿಸಿರುವ ವಾಣಿಜ್ಯ ಜಾಹೀರಾತುಗಳು, ಬೃಹತ್ ಎಲ್ಇಡಿ ಜಾಹೀರಾತುಗಳು, ಸೈಕಲ್ ಜಾಹೀರಾತುಗಳು, ವಾಣಿಜ್ಯ ಜಾಹೀರಾತುಗಳು, ವಾಹನ ಜಾಹೀರಾತುಗಳು ಇತರೆ ಜಾಹೀರಾತುಗಳು ಕಂಡು ಬಂದಲ್ಲಿ ಕೇಂದ್ರ ಕಚೇರಿ ಹಾಗೂ ಆಯಾ ವಲಯಗಳ ಕಚೇರಿಗಳಿಗೆ ಮಾಹಿತಿ ನೀಡಲು ನಾಗರೀಕರಲ್ಲಿ ಮನವಿ ಮಾಡಿದೆ.
ಮಾಹಿತಿ ನೀಡಿದಂತಹ ಸ್ಥಳದಲ್ಲಿ ಯಾವುದೇ ಅನಧಿಕೃತ ಜಾಹೀರಾತು ಪ್ರದರ್ಶನ ಮತ್ತು ಜಾಹೀರಾತು ಫಲಕಗಳನ್ನು ಪಾಲಿಕೆಯು ಸಂಬಂಧಪಟ್ಟವರಿಗೆ ದಂಡ ವಿಧಿಸಿ ತಕ್ಷಣವೇ ತೆರವುಗೊಳಿಸುತ್ತಾರೆ. ಅಲ್ಲದೇ ಇದಕ್ಕೆ ಸಂಬಂಧಿಸಿದಂತೆ ಅಪರಾಧ ಎಸಗಿರುವವರಿಗೆ ಕರ್ನಾಟಕ ಮುಕ್ತ ಸ್ಥಳಗಳ (ವಿರೂಪಗೊಳಿಸುವಿಕೆ ತಡೆ) ಕಾಯ್ದೆ 1981ರ ಅಡಿಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿ, ಕಾನೂನು ರೀತಿಯ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದೆ.
ಈ ಸಂಬಂಧ ಬಿಬಿಎಂಪಿಯ ಅನಧಿಕೃತ ನಾನಾ ಜಾಹೀರಾತುಗಳನ್ನು ನಿಯಂತ್ರಿಸುವ ಮುಕ್ತ ಅಭಿಯಾನಕ್ಕೆ ನಾಗರೀಕರಲು ಕೈ ಜೋಡಿಸಿ ಬೆಂಬಲಿಸಲು ಪಾಲಿಕೆಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ರವರು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಟ್ ಕಾಯಿನ್ ಹಗರಣ | ಸೈಬರ್ ಕ್ರೈಂ ಠಾಣೆ ಇನ್ಸ್ಪೆಕ್ಟರ್ ಚಂದ್ರಾಧರ್ ಬಂಧನ
ಅನಧಿಕೃತ ಜಾಹೀರಾತುಗಳ ಕುರಿತು ದೂರು ನೀಡಲು
- ಉಪ ಆಯುಕ್ತರು(ಜಾಹೀರಾತು): 9480683939
- ಕೇಂದ್ರ ಕಛೇರಿ: 080-22221188
- ನಿಯಂತ್ರಣ ಕೊಠಡಿ ಐಪಿಪಿ: 080-22660000
- ಪೂರ್ವ ವಲಯ ನಿಯಂತ್ರಣ ಕೊಠಡಿ: 080-22975803 / 22975502
- ಪಶ್ಚಿಮ ವಲಯ ನಿಯಂತ್ರಣ ಕೊಠಡಿ: 080-23561692 / 23463366
- ದಕ್ಷಿಣ ವಲಯ ನಿಯಂತ್ರಣ ಕೊಠಡಿ: 080-26566362 / 22975703
- ರಾಜರಾಜೇಶ್ವರಿ ನಗರ ವಲಯ ನಿಯಂತ್ರಣ ಕೊಠಡಿ: 080-28601851 / 28600957
- ಬೊಮ್ಮನಹಳ್ಳಿ ವಲಯ ನಿಯಂತ್ರಣ ಕೊಠಡಿ: 080-25732447 / 25735642
- ಮಹದೇವಪುರ ವಲಯ ನಿಯಂತ್ರಣ ಕೊಠಡಿ: 080-28512300 / 28512301
- ಯಲಹಂಕ ವಲಯ ನಿಯಂತ್ರಣ ಕೊಠಡಿ: 080-23636671 / 22975936
- ದಾಸರಹಳ್ಳಿ ವಲಯ ನಿಯಂತ್ರಣ ಕೊಠಡಿ: 080-28394909 / 28393688