ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸಾಮಾಜಿಕ ನ್ಯಾಯದ ಪರವಾಗಿ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಡಿ ಟಿ ಶ್ರೀನಿವಾಸ್ ಅವರನ್ನು ಶೋಷಿತ, ಹಿಂದುಳಿದ, ದಲಿತ ಹಾಗೂ ಸಾಮಾಜಿಕ ನ್ಯಾಯದ ಪರವಾಗಿರುವ ಎಲ್ಲಾ ಶಿಕ್ಷಕರು ಬೆಂಬಲಿಸುವಂತೆ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆನಂತನಾಯ್ಕ್ ಮನವಿ ಮಾಡಿದರು.
ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಹಾಗೂ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
“ಶಿಕ್ಷಕರಾಗಿ, ಅಧಿಕಾರಿಯಾಗಿ, ಖಾಸಗಿ ಶಾಲೆಗಳ ಆಡಳಿತ ಮಂಡಳಿ ಸದಸ್ಯರಾಗಿ ಡಿ ಟಿ ಶ್ರೀನಿವಾಸ್ ಅಪಾರ ಅನುಭವ ಗಳಿಸಿದ್ದು, ಅವರನ್ನು ಗೆಲ್ಲಿಸುವ ಮೂಲಕ ವಿಧಾನಪರಿಷತ್ತಿನಲ್ಲಿ ಶಿಕ್ಷಕರ ಪರವಾಗಿ ದನಿ ಎತ್ತಲು ಅವಕಾಶ ಕಲ್ಪಿಸಬೇಕು” ಎಂದರು.
“ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ದಲಿತರು, ಶೋಷಿತರು, ಹಿಂದುಳಿದ ವರ್ಗಗಳ ಉನ್ನತ ಶಿಕ್ಷಣಕ್ಕೆ ಸಂಚಕಾರ ಉಂಟು ಮಾಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿ-2020ನ್ನು ಒಪ್ಪಿಕೊಳ್ಳದೆ, ಎಲ್ಲ ವರ್ಗದ ಮಕ್ಕಳ ಸಮಗ್ರ ಶೈಕ್ಷಣಿಕ ಬೆಳವಣಿಗಾಗಿ ರಾಜ್ಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಇದರ ಭಾಗವಾಗಿಯೇ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳದ ಜೊತಗೆ, ಮಹಿಳೆಯರಿಗೆ ಹೆರಿಗೆ ರಜೆ, ಎಲ್ಲರಿಗೂ ವಾರದ ರಜೆಗಳನ್ನು ಮಂಜೂರು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಹಳೆಯ ಪಿಂಚಿಣಿ ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲ ರೀತಿಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಈ ಕಾರ್ಯಗಳು ಮತ್ತಷ್ಟು ವೇಗ ಪಡೆದುಕೊಳ್ಳಬೇಕೆಂದರೆ ಡಿ ಟಿ ಶ್ರೀನಿವಾಸರಂತಹ ಅನುಭವಿ ರಾಜಕಾರಣಿ ವಿಧಾನಪರಿಷತ್ ಪ್ರವೇಶಿಸಬೇಕು. ಹಾಗಾಗಿ ಶಿಕ್ಷಕರು ಈ ಬಾರಿ ಡಿ ಟಿ ಶ್ರೀನಿವಾಸ್ ಅವರನ್ನು ಬೆಂಬಲಿಸಬೇಕೆಂಬುದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಮನವಿಯಾಗಿದೆ” ಎಂದು ಆನಂತನಾಯ್ಕ್ ತಿಳಿಸಿದರು.
“ಆಗ್ನೇಯ ಶಿಕ್ಷಕರ ಕ್ಷೇತ್ರವನ್ನು ಈವೆರೆಗೂ ಪ್ರತಿನಿಧಿಸಿರುವ ವೈ ಎ ನಾರಾಯಣಸ್ವಾಮಿ ಅವರ ಸಾಧನೆಗಳು ಹೇಳಿಕೊಳ್ಳುವಂತಿಲ್ಲ. ಕಳೆದ 18 ವರ್ಷಗಳ ಹಿಂದೆ ಇದ್ದ ಸಮಸ್ಯೆಗಳು ಹಾಗೆಯೇ ಮುಂದುವರೆದಿವೆ. ಕಾಲಮಿತಿ ಬಡ್ತಿ, ವೇತನ ತಾರತಮ್ಯ ಸೇರಿದಂತೆ ಹಲವಾರು ಜಲ್ವಂತ ಸಮಸ್ಯೆಗಳು ಹಾಗೆಯೇ ಮುಂದುವರೆದಿವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂದರೆ ಡಿ ಟಿ ಶ್ರೀನಿವಾಸ್ ಎಂಬುದು ಬಹುತೇಕ ಶಿಕ್ಷಕರ ಆಶಯವಾಗಿದೆ. ಹಾಗಾಗಿ ಶಿಕ್ಷಕರು ಶ್ರೀನಿವಾಸ್ ಅವರಿಗೆ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡಬೇಕೆಂಬುದು ನಮ್ಮ ಕೋರಿಕೆಯಾಗಿದೆ” ಎಂದರು.
ಅತಿಥಿ ಉಪನ್ಯಾಸಕ ಹಾಗೂ ದಲಿತ ಮುಖಂಡ ಕೊಟ್ಟ ಶಂಕರ್ ಮಾತನಾಡಿ, “ಸರ್ಕಾರ ಅತಿಥಿ ಉಪನ್ಯಾಸಕರಿಗೆ ಇದ್ದ ಕೆಲ ಸಮಸ್ಯೆಗಳನ್ನು ಪರಿಹರಿಸಿದೆ. ಆದರೆ ಸೇವಾ ಭದ್ರತೆಯಂತಹ ಪ್ರಮುಖ ಸಮಸ್ಯೆ ಹಾಗೆಯೇ ಇದೆ. ಹಂತಹಂತವಾಗಿ ಬಗೆಹರಿಸುವ ಪ್ರಯತ್ನ ಸರ್ಕಾರದಿಂದ ನಡೆದಿದೆ. ಪ್ರಸ್ತುತ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಡಿ ಟಿ ಶ್ರೀನಿವಾಸ್ ಮತ್ತು ವೈ ಎ ನಾರಾಯಣ ಸ್ವಾಮಿ ನಡುವೆ ಎಂಬಂತಾಗಿದೆ. ಕಳೆದ ಮೂರು ಚುನಾವಣೆಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ವೈ ಎ ನಾರಾಯಣಸ್ವಾಮಿ ಅವರು, ತಮ್ಮ ಅವಧಿಯ ಆರು ವರ್ಷಗಳಲ್ಲಿ ಐದೂವರೆ ವರ್ಷ ಇತ್ತ ತಿರುಗಿಯೂ ನೋಡುವುದಿಲ್ಲ. ಇನ್ನು ಆರು ತಿಂಗಳು ಇದೆ ಎನ್ನುವಾಗ ಬಂದು ವಿವಿಧ ಆಮಿಷಗಳ ಮೂಲಕ ಮತದಾರರನ್ನು ಒಲೈಸುತ್ತಾರೆ. ಆದರೆ ಡಿ ಟಿ ಶ್ರೀನಿವಾಸ್ ಎಲ್ಲ ವಿಷಯಗಳಲ್ಲಿಯೂ ಅನುಭವಿಗಳಿದ್ದು, ಅವರನ್ನು ಮೇಲ್ಮನೆಗೆ ಕಳುಹಿಸಬೇಕೆಂಬುದು ನಮ್ಮೆಲ್ಲರ ಬಯಕೆಯಾಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸಾಗರ-ಆನಂದಪುರ ಹೆದ್ದಾರಿಯಲ್ಲಿ ಅಪಘಾತ; ಗಾಯಳುಗಳಿಗೆ ನೆರವಾದ ಶಾಸಕ ಬೇಳೂರು ಗೋಪಾಲಕೃಷ್ಣ
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ ಎಂ ರಾಮಚಂದ್ರಪ್ಪ ಮಾತನಾಡಿ, “ವಿಧಾನ ಪರಿಷತ್ತಿಗೆ ಆಡಳಿತ ಪಕ್ಷದ ಅಭ್ಯರ್ಥಿಗಳು ಹೋದಾಗ ಸರ್ಕಾರದ ಮೇಲೆ ಹೆಚ್ಚು ಒತ್ತಡ ಹಾಕಲು ಅನುಕೂಲವಾಗುತ್ತದೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಿ ಟಿ ಶ್ರೀನಿವಾಸ್ ಅವರನ್ನು ಗೆಲ್ಲಿಸುವುದರಿಂದ ಶಿಕ್ಷಕರು ತಾವು ಅನುಭವಿಸುತ್ತಿರುವ ಸಮಸ್ಯೆಗಳಿಂದ ಹೊರಬರಲು ಸಹಾಯವಾಗುತ್ತದೆ” ಎಂದರು.
ಸುದ್ದಿಗೋಷ್ಟಿಯಲ್ಲಿ ಜಾಣಗೆರೆ ವೆಂಕಟರಾಮು, ರಾಮೃಕೃಷ್ಣ, ಯಲ್ಲಪ್ಪ, ಆದರ್ಶ, ಕೆಂಪರಾಜು ಸೇರಿದಂತೆ ಇತರರು ಇದ್ದರು.
