2024ರ ಜೂನ್ನಿಂದ ಆಗಸ್ಟ್ವರೆಗೆ ಬೆಂಗಳೂರಿನಲ್ಲಿ ಕುದುರೆ ರೇಸ್ ನಡೆಸಲು ಪರವಾನಗಿಗಾಗಿ ಅನುಮತಿ ಕೋರಿ ಬೆಂಗಳೂರು ಟರ್ಫ್ ಕ್ಲಬ್(ಬಿಟಿಸಿ) ಸಲ್ಲಿಸಿದ್ದ ಮನವಿಯನ್ನು ಸರ್ಕಾರ ತಿರಸ್ಕರಿಸಿದೆ. ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಟರ್ಫ್ ಕ್ಲಬ್ ಹೈಕೋರ್ಟ್ ಮೆಟ್ಟಿಲೇರಿದೆ.
ಬಿಟಿಸಿಎಲ್, ಕರ್ನಾಟಕ ರೇಸ್ ಹಾರ್ಸ್ ಮಾಲೀಕರ ಸಂಘ ಮತ್ತು ಕರ್ನಾಟಕ ತರಬೇತುದಾರರ ಸಂಘ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿವೆ. ಅರ್ಜಿಗಳನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠವು ವಿಚಾರಣೆ ನಡೆಸಿದೆ. ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ. ಅರ್ಜಿ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿದೆ.
“ಬೆಂಗಳೂರು ಟರ್ಫ್ ಕ್ಲಬ್ನಲ್ಲಿ ಈ ಮೊದಲು ಕುದುರೆ ರೇಸ್ ನಡೆಸಲು ಷರತ್ತುಬದ್ಧ ಅನುಮತಿ ನೀಡುವ ಸಲುವಾಗಿ ಜೂನ್ 6ರೊಳಗೆ ನಿರ್ಧಾರ ಕೈಗೊಳ್ಳುವಂತ ಸರ್ಕಾರಕ್ಕೆ ಹೈಕೋರ್ಟ್ ಮೇ 23ರಂದು ನಿರ್ದೇಶನ ನೀಡಿತ್ತು. ಇದೀಗ, ಬಿಟಿಸಿ ಸಲ್ಲಿಸಿದ್ದ ಅರ್ಜಿಯನ್ನು ಸಕ್ಷಮ ಪ್ರಾಧಿಕಾರ ತಿರಸ್ಕಾರಿಸಿದೆ” ಎಂದು ಅರ್ಜಿದಾರರ ಪರ ವಕೀಲರು ಹೇಳಿದರು.
“ಬಿಟಿಸಿ ಆವರಣದಲ್ಲಿ ಅಕ್ರಮ ಬೆಟ್ಟಿಂಗ್ ಸೇರಿದಂತೆ ಇನ್ನಿತರೆ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. ಹಿಂದಿನ ಪರವಾನಗಿಯಲ್ಲಿ ವಿಧಿಸಿದ್ದ ಷರತ್ತುಗಳ ಪಾಲನೆಯಾಗುತ್ತಿಲ್ಲವೆಂದು ಸಕ್ಷಮ ಪ್ರಾಧಿಕಾರ ಬಿಟಿಸಿ ಅರ್ಜಿಯನ್ನು ತಿರಸ್ಕಾರ ಮಾಡಿದೆ. ಇದರಿಂದ ಕ್ಲಬ್ಗೆ ಭಾರೀ ತೊಂದರೆ ಆಗಲಿದೆ. ರೇಸ್ ಚಟುವಟಿಕೆಗಳು ನಡೆಯದೇ ಹೋದರೆ ಲಕ್ಷಾಂತರ ಮಂದಿಯ ಜೀವನೋಪಾಯಕ್ಕೆ ತೊಂದರೆ ಆಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಸಾರ್ವಜನಿಕರ ಗಮನಕ್ಕೆ | ಅನಧಿಕೃತ ಬಡಾವಣೆಗಳ ನಿರ್ಮಾಣ ಮಾಡುವವರಿಗೆ ಪ್ರಾಧಿಕಾರದಿಂದ ಎಚ್ಚರಿಕೆ
“ಕ್ಲಬ್ ಹಾಗೂ ಅಕ್ರಮ ಬುಕ್ಕಿಗಳ ಅಕ್ರಮಗಳ ಬಗ್ಗೆ ಸಿಸಿಬಿ ತನಿಖೆ ಇನ್ನು ಬಾಕಿ ಇದೆ ಎಂದು ಸಹ ಹೇಳಿದೆ. ಆದರೆ, ಸಕ್ಷಮ ಪ್ರಾಧಿಕಾರ ಅರ್ಜಿ ತಿರಸ್ಕಾರ ಮಾಡಿರುವುದಕ್ಕೆ ನೀಡಿರುವ ಕಾರಣ ಸರಿ ಇಲ್ಲ. ಇದು ರೇಸ್ಗೂ ಸಂಬಂಧವಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಕುದುರೆ ರೇಸ್ ನಡೆಸಲು ಅನುಮತಿ ನೀಡಬೇಕು” ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಮೊದಲ ಸುತ್ತಿನ ಕಾನೂನು ಹೋರಾಟದಲ್ಲಿ ಕರ್ನಾಟಕ ರೇಸ್ ಕುದುರೆ ಮಾಲೀಕರ ಒಕ್ಕೂಟ ಮತ್ತು ಕರ್ನಾಟಕ ಟ್ರೈನರ್ಸ್ ಅಸೋಸಿಯೇಷನ್ ಬೆಂಗಳೂರು ಟರ್ಫ್ ಕ್ಲಬ್ ಪರವಾನಗಿ ನವೀಕರಣ ಮಾಡಲು ಕೋರಿರುವ ಮನವಿ ಪರಿಗಣಿಸಲು ನಿರ್ದೇಶಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದವು. ಆಗ ನ್ಯಾಯಪೀಠ ಈಗಾಗಲೇ ರೇಸ್ಗೆ ವೇಳಾಪಟ್ಟಿ ಪ್ರಕಟಿಸಲಾಗಿದೆ. ಸಾಕಷ್ಟು ಜನರ ಜೀವನೋಪಾಯ ರೇಸಿಂಗ್ ಚಟುವಟಿಕೆಯನ್ನು ಅವಲಂಬಿಸಿದೆ. ಹಾಗಾಗಿ, ರೇಸಿಂಗ್ ಚಟುವಟಿಕೆಗೆ ಷರತ್ತುಬದ್ಧ ಅನುಮತಿ ನೀಡುವ ಸಂಬಂಧದ ಮನವಿಯನ್ನು ಸರ್ಕಾರ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿತ್ತು.