ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ದರ ಏರಿಕೆಯಾಗುತ್ತಿದೆ. ಸದ್ಯ ₹50ರ ಗಡಿಯಲ್ಲಿದ್ದ ತರಕಾರಿಗಳ ದರ ಇದೀಗ ₹100ರ ಗಡಿ ದಾಟಿದೆ. ಟೊಮೆಟೊ ಬೆಲೆ ₹50 ಏರಿಕೆಯಾಗಿದ್ದು, ತೊಗರಿಬೇಳೆ ₹200ರ ಗಡಿ ಮುಟ್ಟಿದೆ.
ಈ ಹಿಂದೆ ₹50 ರ ಅಸುಪಾಸಿನಲ್ಲಿ ಸಿಗುತ್ತಿದ್ದ ತರಕಾರಿಗಳು ಇದೀಗ ₹100 ರ ಗಡಿ ದಾಟಿವೆ. ನಗರದಲ್ಲಿ ಹೆಚ್ಚು ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಬಂದ ಬೆಳೆಯೂ ಹಾಳಾಗುತ್ತಿದೆ. ಜತೆಗೆ ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ತರಕಾರಿಗಳು ಸಿಗದ ಪರಿಣಾಮ ತರಕಾರಿ ಬೆಲೆ ಏರಿಕೆಯಾಗಿದೆ. ದರ ಏರಿಕೆಯಾಗುತ್ತಲೇ ಇದ್ದು, ಗ್ರಾಹಕರಿಗೆ ಬಹುದೊಡ್ಡ ಹೊರೆಯಾಗಿ ಪರಿಣಮಿಸಿದೆ.
ಬೀನ್ಸ್ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಹೋಲ್ ಸೇಲ್ ದರವೇ ಡಬಲ್ ಸೆಂಚುರಿ ದಾಟಿ ಗ್ರಾಹಕರನ್ನು ಹುಬ್ಬೇರುವಂತೆ ಮಾಡಿದೆ. ರೀಟೇಲ್ನಲ್ಲಿ ಪ್ರತಿ ಕೆಜಿ ಗೆ ₹200ಕ್ಕೂ ಹೆಚ್ಚು ದರ ನಿಗದಿಯಾಗುತ್ತಿದೆ. ತರಕಾರಿ ಬೆಲೆಯ ಜತೆಗೆ ದಿನಸಿ ಪದಾರ್ಥಗಳ ಬೆಲೆ ಕೂಡ ಏರಿಕೆಯಾಗಿದೆ. ಕೆಜಿ ತೊಗರಿ ಬೇಳೆಗೆ ಹೋಲ್ ಸೇಲ್ನಲ್ಲಿ ₹195 ಇದ್ದರೆ, ಚಿಲ್ಲರೆ ಅಂಗಡಿಗಳಲ್ಲಿ ₹220 ಇದೆ. ಕಡ್ಲೆ ಬೇಳೆ ಕೆಜಿ ₹72 ಇತ್ತು. ಇದೀಗ ₹110 ಆಗಿದೆ. ಅಲ್ಲದೇ, ಸ್ಟೀಮ್ ಅಕ್ಕಿ ₹48 ಇದ್ದು, ಈಗ ₹58 ಆಗಿದೆ. ಹೊಸ ಸ್ಟಾಕ್ ಇಲ್ಲದ ಕಾರಣ ಬೇಳೆ, ಅಕ್ಕಿ ಬೆಲೆ ಜಾಸ್ತಿಯಾಗಿದೆ ಎಂದು ತಿಳಿದುಬಂದಿದೆ.
ಈ ಹಿಂದೆ ಮಳೆಯಿಲ್ಲದೇ ತರಕಾರಿ ಬೆಳೆದಿಲ್ಲ. ಸಕಾಲಕ್ಕೆ ಮಳೆಯಾಗದ ಕಾರಣ ಹಲವು ತರಕಾರಿಗಳು ಒಣಗಿವೆ. ಜತೆಗೆ, ತಾಪಮಾನ ಹೆಚ್ಚಳವಾಗಿದ್ದಕ್ಕೆ ತರಕಾರಿ ಬೆಲೆ ಜಾಸ್ತಿಯಾಗಿತ್ತು ಎಂಬ ಕಾರಣವಿತ್ತು. ಇದೀಗ, ಮಳೆಯಾಗುತ್ತಿರುವುದರಿಂದ ತರಕಾರಿ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ನೀಟ್ ಅಕ್ರಮ | ಹಣಕ್ಕಾಗಿ ಬದ್ಧತೆ ಮರೆತವಾ ಮಾಧ್ಯಮಗಳು?
ಅಲ್ಲದೇ, ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ಬೇಡಿಕೆಗೆ ತಕ್ಕಷ್ಟು ತರಕಾರಿ ಪೂರೈಕೆಯಾಗುತ್ತಿಲ್ಲ. ಸದ್ಯ ಕೇವಲ ಕರ್ನಾಟಕದ ಜಿಲ್ಲೆಗಳಿಂದ ಮಾತ್ರ ತರಕಾರಿ ಪೂರೈಕೆಯಾಗುತ್ತಿದೆ. ಜತೆಗೆ, ಮಳೆಗೆ ಟೊಮೆಟೊ ಹಾಗೂ ಈರುಳ್ಳಿ ಸರಿಯಾಗಿ ಫಸಲು ಬರುತ್ತಿಲ್ಲ. ಈ ಕಾರಣದಿಂದಾಗಿ ತರಕಾರಿಗಳ ಬೆಲೆ ಜಾಸ್ತಿಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪರಸ್ಥರು ಅಭಿಪ್ರಾಯಪಟ್ಟಿದ್ದಾರೆ.
₹80 ಇದ್ದ ಕ್ಯಾರೆಟ್ ಬೆಲೆ ಇದೀಗ ₹82 ಆಗಿದೆ. ನವಿಲುಕೋಸು ₹102, ಬದನೆಕಾಯಿ ₹30, ದಪ್ಪಮೆನಸಿನಕಾಯಿ ₹65, ಬಟಾಣಿ ₹120, ಬೆಂಡೆಕಾಯಿ ₹30, ಆಲೂಗಡ್ಡೆ ₹40, ಬೆಳ್ಳುಳ್ಳಿ ₹180 ಆಗಿದೆ.