ಜೆಡಿಎಸ್ ರಾಷ್ಟ್ರೀಯ ನಾಯಕ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿಯೊಂದಿಗೆ ಕೈಜೋಡಿಸಿದ ನಂತರ ಇಕ್ಕಟ್ಟಿನಲ್ಲಿ ಸಿಲುಕಿರುವ ಕೇರಳ ಜೆಡಿಎಸ್ ಹೊಸ ಪಕ್ಷವನ್ನು ರಚಿಸಲು ನಿರ್ಧರಿಸಿದೆ. ರಾಷ್ಟ್ರೀಯ ನಾಯಕತ್ವದ ನಿರ್ಧಾರವನ್ನು ವಿರೋಧಿಸಿ ಪಕ್ಷದಿಂದಲೇ ಹೊರಬರಲು ಕೇರಳದ ಜನತಾ ದಳ (ಎಸ್) ತೀರ್ಮಾನಿಸಿದೆ.
ತಿರುವನಂತಪುರಂನಲ್ಲಿರುವ ರಾಜ್ಯ ಸಮಿತಿ ಕಚೇರಿಯಲ್ಲಿ ಮಂಗಳವಾರ ಕೇರಳ ಜೆಡಿಎಸ್ ನಾಯಕರು ಸಭೆ ಸೇರಿದ್ದು, ಹೊಸ ಹೆಸರು, ಧ್ವಜ ಮತ್ತು ಚಿಹ್ನೆಯನ್ನು ಹೊಂದಿರುವ ಪಕ್ಷವನ್ನು ರಚಿಸಲು ನಿರ್ಧರಿಸಿದ್ದಾರೆ.
ಜೆಡಿಎಸ್ ರಾಷ್ಟ್ರೀಯ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ನರೇಂದ್ರ ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡ ನಂತರ ಕೇರಳದಲ್ಲಿ ಎಡರಂಗದ ಭಾಗವಾಗಿರುವ ಜೆಡಿಎಸ್ ಇಕ್ಕಟ್ಟಿನಲ್ಲಿ ಸಿಲುಕಿತ್ತು. ಈ ವಿಚಾರದಲ್ಲಿ ಕಾಂಗ್ರೆಸ್ ನಿರಂತರವಾಗಿ ಎಡರಂಗವನ್ನು ತರಾಟೆಗೆ ತೆಗೆದುಕೊಂಡಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರದ ಮೈತ್ರಿಗೆ ಮೌನ ಸಮ್ಮತಿ ನೀಡಿದ್ದಾರೆ ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಭ್ರಷ್ಟ ಬಿಜೆಪಿ ಮತ್ತು ಸ್ವಾರ್ಥಿ ಜೆಡಿಎಸ್ ಸೋಲಿಸಿ ಹಾಸನದ ಘನತೆ ಉಳಿಸಿದ ಮತದಾರರಿಗೆ ಧನ್ಯವಾದ: ಜನಪರ ಚಳವಳಿಗಳ ಒಕ್ಕೂಟ
ಈ ಬೆನ್ನಲ್ಲೇ ಕೇರಳ ಜೆಡಿಎಸ್ ಎಲ್ಡಿಎಫ್ ಮೈತ್ರಿಕೂಟದಲ್ಲಿ ಮುಂದುವರಿಯುವ ನಿರ್ಧಾರವನ್ನು ತಕ್ಷಣವೇ ಪ್ರಕಟಿಸಿದೆ. ಆದರೆ ಕೇರಳದಲ್ಲಿ ಜೆಡಿಎಸ್ ಎಡರಂಗದ ಜೊತೆ ಮತ್ತು ಕೇಂದ್ರದಲ್ಲಿ ಮೋದಿ ಸರ್ಕಾರದ ಜೊತೆ ಕೈಜೋಡಿಸಿರುವುದರ ವಿಚಾರದಲ್ಲಿ ಯುಡಿಎಫ್ ಮತ್ತು ಬಿಜೆಪಿ ಎರಡೂ ಎಡಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ಎಡ ಸಂಪುಟದಿಂದ ಪಕ್ಷದ ಸಚಿವರಾದ ಕೆ ಕೃಷ್ಣನ್ಕುಟ್ಟಿ ಅವರ ರಾಜೀನಾಮೆಯನ್ನು ಸಿಎಂ ಕೇಳಬೇಕು ಎಂದು ಯುಡಿಎಫ್ ಒತ್ತಾಯಿಸುತ್ತಿದೆ.
ಈ ಬೆನ್ನಲ್ಲೇ ಹೊಸ ಪಕ್ಷವನ್ನು ರಚಿಸುವ ನಿರ್ಧಾರವನ್ನು ಪ್ರಕಟಿಸಿದ ಜೆಡಿಎಸ್ ರಾಜ್ಯ ಮುಖ್ಯಸ್ಥ ಮ್ಯಾಥ್ಯೂ ಟಿ ಥಾಮಸ್ ಮಾತನಾಡಿ, “ಹೊಸ ಪಕ್ಷವು ಸಮಾಜವಾದಿ ತತ್ವಗಳಿಗೆ ಬದ್ಧವಾಗಿದೆ. ಜಯಪ್ರಕಾಶ್ ನಾರಾಯಣನ್ ಮತ್ತು ರಾಮ್ ಮನೋಹರ್ ಲೋಹಿಯಾ ಅವರ ಹಾದಿಯಲ್ಲಿ ಸಾಗಲಿದೆ. ಇದು ಎಡರಂಗದ ಭಾಗವಾಗಿರುತ್ತದೆ. ಅದೇ ಸಮಯದಲ್ಲಿ ಸ್ವತಂತ್ರ ರಾಜಕೀಯ ಘಟಕವಾಗಿ ಉಳಿಯುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ನಿರ್ಮಲಾ ಸೀತಾರಾಮನ್, ಕುಮಾರಸ್ವಾಮಿ ಸೇರಿ ಕರ್ನಾಟಕದಿಂದ ಕೇಂದ್ರ ಸಚಿವರಾಗಿ ಐವರು
“ಹೊಸ ಹೆಸರನ್ನು ಶೀಘ್ರದಲ್ಲೇ ನೋಂದಾಯಿಸಲಾಗುವುದು. ಈ ನಿಟ್ಟಿನಲ್ಲಿ ಕಾನೂನು ಅಂಶಗಳನ್ನೂ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ರಾಷ್ಟ್ರೀಯ ನಾಯಕತ್ವವು ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿತಗೊಳಿಸಲು ನಿರ್ಧರಿಸಿದರೆ, ಕೇರಳ ಘಟಕವು ಪಕ್ಷಕ್ಕೆ ಹಿಂತಿರುಗುತ್ತದೆ” ಎಂದು ಮ್ಯಾಥ್ಯೂ ಥಾಮಸ್ ಹೇಳಿದರು.
ಸದ್ಯಕ್ಕೆ ಆರ್ಜೆಡಿ ಸೇರಿದಂತೆ ಯಾವುದೇ ಪಕ್ಷದೊಂದಿಗೆ ವಿಲೀನಗೊಳ್ಳದಿರಲು ಜೆಡಿಎಸ್ ನಿರ್ಧರಿಸಿದೆ. ಸಮಾಜವಾದಿ ಪಕ್ಷದೊಂದಿಗೆ ವಿಲೀನದ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವರದಿಯಾಗಿದೆ.
ಕೇರಳ ಜೆಡಿಎಸ್ ರಾಷ್ಟ್ರೀಯ ನಾಯಕತ್ವದೊಂದಿಗಿನ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಘೋಷಿಸಿದ್ದರೂ ತಾಂತ್ರಿಕವಾಗಿ ಅದು ದೇವೇಗೌಡರ ನೇತೃತ್ವದ ಜೆಡಿ(ಎಸ್)ನ ಕೇರಳ ಘಟಕವಾಗಿಯೇ ಉಳಿದಿದೆ. ಸಿ ಕೆ ನಾಣು ಮತ್ತು ನೀಲಲೋಹಿತದಾಸ್ ಅವರಂತಹ ಕೆಲವು ಹಿರಿಯ ನಾಯಕರು ಕೇರಳ ಘಟಕದ ನಿರ್ಧಾರದಿಂದ ಅತೃಪ್ತರಾಗಿದ್ದರು.
ಅಧಿಕೃತ ಬಣದಿಂದ ದೂರ ಸರಿದಿರುವ ಇಬ್ಬರು ಜೆಡಿಎಸ್ ಶಾಸಕರಾದ ಮ್ಯಾಥ್ಯೂ ಥಾಮಸ್ ಮತ್ತು ಕೆ ಕೃಷ್ಣನ್ಕುಟ್ಟಿ ಅವರನ್ನು ಅನರ್ಹಗೊಳಿಸಬಹುದು. ಈ ಹಿನ್ನೆಲೆಯಲ್ಲಿ ಮ್ಯಾಥ್ಯೂ ಥಾಮಸ್ ಅವರು ಹೊಸ ಪಕ್ಷ ಕಟ್ಟುವ ನಿರ್ಧಾರ ಪ್ರಕಟಿಸಿದ್ದಾರೆ.