2024ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಕೋಮು ದ್ವೇಷ ಭಾಷಣಗಳನ್ನು ಮಾಡಿ, ಹಿಂದು ಮತದಾರರ ಓಲೈಕೆಗೆ ಮುಂದಾಗಿತ್ತು. ಅದರಂತೆಯೇ, ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಅರ್ಧಂಬರ್ಧ ನಿರ್ಮಾಣವಾಗಿದ್ದ ರಾಮಮಂದಿರದ ಉದ್ಘಾಟನೆಯನ್ನು ಮಾಡಿತ್ತು. ಅಲ್ಲಿರುವ ಸಾವಿರಾರು ಅಂಗಡಿ, ಮನೆಗಳನ್ನು ನೆಲಸಮಗೊಳಿಸಿ ರಾಮಪಥ ನಿರ್ಮಿಸಿದ್ದರೂ ಅವರಿಗೆ ಸೂಕ್ತ ಪರಿಹಾರ ನೀಡಿಲ್ಲ. ಬೀದಿ ಬದಿ ವ್ಯಾಪಾರಿಗಳನ್ನು ದೊಣ್ಣೆಯಿಂದ ಹೊಡೆದು ಓಡಿಸಲಾಯಿತು. ಮತದ ಕ್ರೋಢೀಕರಣಕ್ಕೆ ರಾಮನ ಹೆಸರು ಹೇಳಿಕೊಂಡು ಪ್ರಚಾರ ನಡೆಸಿದ ಬಿಜೆಪಿಗೆ ಕೊನೆಗೆ ಬಡವರು, ನಿರ್ಗತಿಕರು ಜನ ಸಾಮಾನ್ಯರು ಅಯೋಧ್ಯೆಯಲ್ಲಿ ಬಿಜೆಪಿಯನ್ನು ಸೋಲಿಸಿ ತಕ್ಕಪಾಠ ಕಲಿಸಿದ್ದಾರೆ.
ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಮಾಡಿದರು. ರಾಮಮಂದಿರ ಉದ್ಘಾಟನೆಯ ಸಂಭ್ರಮಾಚರಣೆಯ ನಂತರವೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಫೈಜಾಬಾದ್ ಸ್ಥಾನವನ್ನು ಕಳೆದುಕೊಂಡಿದೆ. ಸಮಾಜವಾದಿ ಪಕ್ಷದ ಅವದೇಶ್ ಪ್ರಸಾದ್ ಸಿಂಗ್ ಅವರು ಚುನಾವಣೆಯಲ್ಲಿ ಬಿಜೆಪಿಯ ಲಲ್ಲು ಸಿಂಗ್ ಅವರನ್ನು ಸೋಲಿಸಿದ್ದಾರೆ. ಚುನಾವಣೆಯ ಫಲಿತಾಂಶದ ನಂತರ ಅಯೋಧ್ಯೆಗೆ ಕಡಿಮೆ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
ಭವ್ಯ ರಾಮಮಂದಿರ ನಿರ್ಮಾಣ ಮಾಡಿದ ಮೇಲೆ, ಸಹಸ್ರಾರು ಜನ ನಿತ್ಯ ರಾಮನ ದರ್ಶನಕ್ಕೆ ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಅಯೋಧ್ಯೆಯತ್ತ ಜನರು ಸುಳಿಯುತ್ತಿಲ್ಲ. ಪರಿಣಾಮ ದುಡಿಮೆ ಇಲ್ಲದೆ ರಿಕ್ಷಾ ಚಾಲಕರು ಪರದಾಡುತ್ತಿದ್ದಾರೆ. ನಿತ್ಯ ₹1,000 – ₹1,200 ದುಡಿಯುತ್ತಿದ್ದ ಆಟೋ ಚಾಲಕರು ಇದೀಗ ದಿನಕ್ಕೆ ₹200 ದುಡಿಯುವ ಪರಿಸ್ಥಿತಿ ಎದುರಾಗಿದೆ.
ಅಯೋಧ್ಯೆಯ ರಿಕ್ಷಾ ಚಾಲಕರು ಸದ್ಯ ಅತೃಪ್ತರಾಗಿದ್ದಾರೆ. ರಾಮಮಂದಿರ ಉದ್ಘಾಟನೆಯಾದ ನಾಲ್ಕು ತಿಂಗಳ ನಂತರ ಅವರ ವ್ಯವಹಾರ ಸಂಪೂರ್ಣ ಕುಂಠಿತವಾಗಿದೆ.
“ಹದಗೆಟ್ಟ ರಸ್ತೆಗಳನ್ನು ರಿಪೇರಿ ಮಾಡುವಲ್ಲಿ ಹಾಗೂ ಅಯೋಧ್ಯೆಯ ಅಭಿವೃದ್ಧಿಯಲ್ಲಿ ಸರ್ಕಾರ ನಿರ್ಲಕ್ಷ ತೋರುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇತರ ಸ್ಥಳಗಳು ಇದೇ ರೀತಿಯ ಪರಿಸ್ಥಿತಿಗಳನ್ನು ಎದುರಿಸುವ ಸಾಧ್ಯತೆಯಿದೆ” ಎಂದು ರಿಕ್ಷಾ ಚಾಲಕರೊಬ್ಬರು ಹೇಳಿದ್ದಾರೆ.
“10 ವರ್ಷಗಳಿಂದ ಇಲ್ಲಿ ರಿಕ್ಷಾ ಓಡಿಸುತ್ತಿದ್ದೇವೆ. ರಾಮಮಂದಿರ ನಿರ್ಮಾಣ ಮತ್ತು ಅಯೋಧ್ಯೆಯನ್ನು ಸುಂದರವಾಗಿ ಅಭಿವೃದ್ಧಿ ಪಡಿಸುತ್ತಿರುವುದನ್ನು ನೋಡಿದ್ದೇವೆ. ಆದರೆ, ಚುನಾವಣೆ ಸಮಯದಲ್ಲಿಯೂ ಇಲ್ಲಿನ ಬಿಜೆಪಿ ಅಭ್ಯರ್ಥಿ ನಮ್ಮ ಸಮಸ್ಯೆಗಳನ್ನು ಕೇಳಲಿಲ್ಲ. ಯಾರನ್ನೂ ಭೇಟಿಯಾಗಲಿಲ್ಲ. ಸಾಮಾನ್ಯ ಜನರೊಂದಿಗೆ ಸಂವಹನ ನಡೆಸಲಿಲ್ಲ. ಬಡವರೊಂದಿಗೆ ತೋಡಗಿಸಿಕೊಳ್ಳದೇ, ರ್ಯಾಲಿಗಳನಷ್ಟೇ ನಡೆಸಿ ತೆರಳಿದ್ದರು” ಎಂದು ಮತ್ತೋಬ್ಬ ರಿಕ್ಷಾ ಚಾಲಕ ತಿಳಿಸಿದ್ದಾರೆ.
“ಇದೇ ರೀತಿ ಮುಂದುವರಿದರೆ, ಅಯೋಧ್ಯೆ ಸೇರಿದಂತೆ ಹಲವೆಡೆ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಆದಾಯ ಗಣನೀಯವಾಗಿ ಕುಸಿದಿದೆ. ದಿನಕ್ಕೆ ₹500 – ₹1,000 ಗಳಿಸುತ್ತಿದ್ದ ನಾವು ಜೂನ್ 4ನೇ ತಾರೀಖಿನಂದು ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ ಈಗ ₹250 ಗಳಿಸುವುದು ಕಷ್ಟವಾಗಿದೆ. ಪರಿಸ್ಥಿತಿ ಹದಗೆಟ್ಟಿದೆ. ಇಲ್ಲಿ ಸುಮಾರು ಜನ ಆಟೋ ಚಾಲಕರು ಜೀವನ ನಡೆಸುತ್ತಿದ್ದಾರೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಅಯೋಧ್ಯೆ | ರಾಮಮಂದಿರದಲ್ಲಿ ಗುಂಡಿನ ಸದ್ದು; ಎಸ್ಎಸ್ಎಫ್ ಯೋಧ ಸಾವು
“ರಾಮ ಮಂದಿರ ಮತ್ತು ಹನುಮಾನ್ ಗರ್ಹಿಯಂತಹ ಸ್ಥಳಗಳು ಸ್ಥಳೀಯರಿಗೆ ಹರಟೆಯ ಅಡ್ಡಗಳಾಗಿವೆ. ಯಾತ್ರಿಕರು ಬರುತ್ತಿಲ್ಲ. ಯಾತ್ರಿಕರು ಮತ್ತು ಪ್ರವಾಸಿಗರ ಸಂಖ್ಯೆ ಕ್ಷೀಣಿಸುತ್ತಿದೆ. ಪ್ರವಾಸಿಗರ ಅನುಪಸ್ಥಿತಿ ಎದ್ದುಕಾಣುತ್ತಿದೆ. ಇದು ನೇರವಾಗಿ ಆಟೋ ಚಾಲಕರ ಮೇಲೆ ಪರಿಣಾಮ ಬೀರುತ್ತಿದೆ. ಚುನಾವಣಾ ಫಲಿತಾಂಶ ಪ್ರಕಟವಾದಾಗಿನಿಂದ ಅವರ ಆದಾಯದಲ್ಲಿ ಭಾರೀ ಕುಸಿತ ಉಂಟಾಗಿದೆ. ಹಿಂದೆ ಹೆಚ್ಚಾಗಿ ಯಾತ್ರಿಕರು ಇದ್ದರು. ಈಗ, ಕಡಿಮೆಯಾಗಿದ್ದಾರೆ” ಎಂದು ಚಾಲಕರು ವಿಷಾದ ವ್ಯಕ್ತಪಡಿಸಿದ್ದಾರೆ.