ದುಷ್ಕರ್ಮಿಯೊಬ್ಬ ಮಹಿಳೆಯೊಬ್ಬರನ್ನು ವಿವಾಹವಾಗುವುದಾಗಿ ನಂಬಿಸಿ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಕರೆಸಿ ಆಕೆಗೆ ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನಡೆದಿದೆ. ಅಲ್ಲದೆ, ಆರೋಪಿಯೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೇಮಾವತಿ ಕೊಲೆಯಾದ ಮಹಿಳೆ. ಆರೋಪಿ ವೇಣು ಆತ್ಮಹತ್ಯೆಗೆ ಯತ್ನಿಸಿದ ಆರೋಪಿ. ಕೊಲೆಯಾದ ಮಹಿಳೆ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಹೊಸಕೋಟೆಯ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಬಾಡಿಗೆ ಮನೆ ಪಡೆದು ವಾಸವಾಗಿದ್ದರು.
ಹೇಮಾವತಿ ಹಾಗೂ ವೇಣು ಇಬ್ಬರು ವಿವಾಹೇತರ ಸಂಬಂಧ ಹೊಂದಿದ್ದರು. ಆದರೆ, ಆರೋಪಿ ವೇಣು ಹೇಮಾವತಿ ಮನೆಗೆ ಬಂದು ಹೋಗುವುದನ್ನು ಕಂಡು ಸ್ಥಳೀಯರು ಇವರನ್ನು ದಂಪತಿ ಎಂದು ಭಾವಿಸಿದ್ದರು.
ಎಂದಿನಂತೆ ಆರೋಪಿ ವೇಣು ಜೂ.24ರ ರಾತ್ರಿ ಹೇಮಾವತಿ ಮನೆಗೆ ಬಂದಿದ್ದಾನೆ. ಜೂ.25ರ ನಸುಕಿನ ಜಾವ 3 ಗಂಟೆವರೆಗೆ ಇದ್ದು ಬಳಿಕ ಚಿಂತಾಮಣಿಯಲ್ಲಿರುವ ತನ್ನ ಪತ್ನಿಯ ಮನೆಗೆ ಹೋಗಿದ್ದಾನೆ. ಮನೆಗೆ ತೆರಳಿದ ಕೂಡಲೇ ತನ್ನ ಮಾವನಿಗೆ ಕರೆ ಮಾಡಿ ‘ನಾನು ವಿಷ ಸೇವಿಸಿದ್ದೇನೆ. ಹೊಸಕೋಟೆಯಲ್ಲಿ ಓರ್ವ ಮಹಿಳೆ ಚಾಕುವಿನಿಂದ ಇರಿದುಕೊಂಡಿದ್ದಾಳೆ’ ಎಂದು ಹೇಳಿದ್ದಾನೆ.
ವಿಚಾರ ತಿಳಿದ ವೇಣು ಮಾವ ಬೆಂಗಳೂರು ಪೊಲೀಸರಿಗೆ ಕರೆ ಮಾಡಿ ಹೊಸಕೋಟೆಯಲ್ಲಿ ಮಹಿಳೆ ಚಾಕುವಿನಿಂದ ಇರಿದುಕೊಂಡ ಬಗ್ಗೆ ತಿಳಿಸಿದ್ದಾನೆ. ಕೂಡಲೇ ಪೊಲೀಸರು ತಂಡಗಳಾಗಿ ಹುಡುಕಾಡಿದ್ದಾರೆ. ಸತತ ನಾಲ್ಕು ಗಂಟೆಗಳ ಶೋಧದ ನಂತರ ಕೊಲೆಯಾದ ಮಹಿಳೆಯ ಮನೆ ಸಿಕ್ಕಿದೆ. ಈ ವೇಳೆ, ಪೊಲೀಸರು ಮನೆ ಒಳಗೆ ತೆರಳಿ ನೋಡಿದಾಗ ಮಹಿಳೆಯ ಗುಪ್ತಾಂಗ ಸೇರಿದಂತೆ ಮೂರು ಕಡೆ ಚಾಕುವನಿಂದ ಇರಿದು ಆಕೆಯನ್ನು ಕೊಲೆ ಮಾಡಲಾಗಿದೆ ಎಂಬುದು ಗೊತ್ತಾಗಿದೆ.
ಮೃತದೇಹವಿದ್ದ ಮನೆಯಲ್ಲಿ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನ ಕಲೆ ಹಾಕಿದ ಪೊಲೀಸರು ನಂತರ ಮಹಿಳೆಯ ಮೃತದೇಹವನ್ನ ಹೊಸಕೋಟೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಆಟೋ ಪ್ರಯಾಣ ದರ ಏರಿಕೆಗೆ ಚಾಲಕರ ಸಂಘಟನೆಗಳ ಒತ್ತಾಯ
ಇತ್ತ ಆತ್ಮಹತ್ಯಗೆ ಯತ್ನಿಸಿದ ಆರೋಪಿ ವೇಣು ಅನ್ನು ಚಿಕ್ಕಬಳ್ಳಾಪುರ ಆಸ್ವತ್ರೆಗೆ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಯಲಾಗಿದ್ದು, ಜೂ.24ರ ರಾತ್ರಿ ಹೇಮಾವತಿ ಮನೆಗೆ ಬಂದ ವೇಣು ಆಕೆಯನ್ನು ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ವೇಣು ಅನ್ನು ಚಿಕ್ಕಬಳ್ಳಾಪುರ ಆಸ್ವತ್ರೆಯಲ್ಲಿ ಬಂಧಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹೊಸಕೋಟೆ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ಬಳಿಕ ಕೊಲೆ ಹಿಂದಿನ ರಹಸ್ಯ ಬೆಳಕಿಗೆ ಬರಲಿದೆ.