ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆದ ನೊಬೆಲ್ ಪ್ರಶಸ್ತಿ ಪುರಸ್ಕೃತ, ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್, “ಲೋಕಸಭೆ ಚುನಾವಣೆ ಫಲಿತಾಂಶವು ಭಾರತ ಹಿಂದೂ ರಾಷ್ಟ್ರವಲ್ಲ ಎಂಬುವುದನ್ನು ಸ್ಪಷ್ಟಪಡಿಸಿದೆ” ಎಂದು ಹೇಳಿದ್ದಾರೆ.
ಯುಎಸ್ನಿಂದ ಹಿಂದಿರುಗಿದ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅಮರ್ತ್ಯ ಸೇನ್, “ವಿಶೇಷವಾಗಿ ಭಾರತವು ಜಾತ್ಯತೀತ ಸಂವಿಧಾನವನ್ನು ಹೊಂದಿರುವ ಜಾತ್ಯತೀತ ರಾಷ್ಟ್ರವಾಗಿರುವಾಗ ರಾಜಕೀಯವಾಗಿ ಮುಕ್ತ ಮನಸ್ಸಿನ ಅವಶ್ಯಕತೆಯಿದೆ” ಎಂದು ಅಭಿಪ್ರಾಯಿಸಿದ್ದಾರೆ.
“ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿ ಪರಿವರ್ತಿಸುವ ಕಲ್ಪನೆಯು ಸೂಕ್ತವಲ್ಲ ಎಂದು ನಾನು ಭಾವಿಸುತ್ತೇನೆ. ಭಾರತವು ‘ಹಿಂದೂ ರಾಷ್ಟ್ರ’ ಅಲ್ಲ ಎಂಬುವುದನ್ನು ಚುನಾವಣಾ ಫಲಿತಾಂಶಗಳಲ್ಲಿ ನಾವು ಕಾಣಬಹುದು” ಎಂದು ಸೇನ್ ಮಾಧ್ಯಮಗಳಿಗೆ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಇನ್ನು 90 ವರ್ಷ ವಯಸ್ಸಿನ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಹಲವು ನಾಯಕರುಗಳ ಬಂಧನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. “ಪ್ರತಿ ಚುನಾವಣೆಯ ನಂತರವೂ ಬದಲಾವಣೆಯನ್ನು ಕಾಣುತ್ತೇವೆ ಎಂದು ನಾವು ಯಾವಾಗಲೂ ಆಶಿಸುತ್ತೇವೆ. ಹಿಂದೆ ಏನಾಯಿತು (ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ) ವಿಚಾರಣೆಯಿಲ್ಲದೆ ಜನರನ್ನು ಜೈಲಿಗೆ ತಳ್ಳಲಾಗಿದೆ. ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಹೆಚ್ಚಿಸುವುದು ಮುಂದುವರಿದಿದೆ. ಅದು ನಿಲ್ಲಬೇಕು” ಎಂದು ಹೇಳಿದರು.
ಇದನ್ನು ಓದಿದ್ದೀರಾ? ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ಗೆ ಜಮೀನು ಒತ್ತುವರಿ ತೆರವು ಮಾಡುವಂತೆ ನೋಟಿಸ್ ಜಾರಿ
ಭಾರತವು ಬ್ರಿಟಿಷ್ ಆಳ್ವಿಕೆಯಲ್ಲಿದ್ದಾಗ ಯಾವುದೇ ವಿಚಾರಣೆ ನಡೆಸದೆಯೇ ಜನರನ್ನು ಜೈಲಿನಲ್ಲಿ ಇರಿಸಲಾಗುತ್ತಿತ್ತು ಎಂಬುವುದನ್ನು ಸೇನ್ ಪ್ರಸ್ತಾಪಿಸಿದ್ದಾರೆ. “ನಾನು ಚಿಕ್ಕವನಿದ್ದಾಗ ನನ್ನ ಅನೇಕ ಸಂಬಂಧಿಕರನ್ನು ವಿಚಾರಣೆಯಿಲ್ಲದೆ ಜೈಲಿಗೆ ಹಾಕಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಂದ ಬಳಿಕವೂ ಅದು ನಿಲ್ಲಲಿಲ್ಲ. ಪ್ರಸ್ತುತ ಸರ್ಕಾರದ ಅಡಿಯಲ್ಲಿ ಹೆಚ್ಚಾಗಿ ಜನರನ್ನು ವಿಚಾರಣೆ ಇಲ್ಲದೆಯೇ ಜೈಲಿಗೆ ಹಾಕಲಾಗುತ್ತಿದೆ” ಎಂದು ಆರೋಪಿಸಿದರು.
ಇನ್ನು ರಾಮ ಮಂದಿರ ಇರುವ ಫೈಜಾಬಾದ್ನ ಅಯೋಧ್ಯೆ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಬಗ್ಗೆಯೂ ಅಮರ್ತ್ಯ ಸೇನ್ ಪ್ರಸ್ತಾಪಿಸಿದರು. “ದೇಶದ ನಿಜವಾದ ಗುರುತನ್ನು ಮರೆಮಾಚುವ ಪ್ರಯತ್ನ ಮಾಡಿದ ಕಾರಣ ರಾಮಮಂದಿರ ನಿರ್ಮಾಣ ಮಾಡಿದರೂ ಫೈಜಾಬಾದ್ನಲ್ಲಿ ಬಿಜೆಪಿ ಅಯೋಧ್ಯೆ ಸ್ಥಾನವನ್ನು ಕಳೆದುಕೊಂಡಿದೆ” ಎಂದು ನೊಬೆಲ್ ಪ್ರಶಸ್ತಿ ವಿಜೇತ ಹೇಳಿದ್ದಾರೆ.
ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ. ಆದರೆ 543 ಬಲದ ಲೋಕಸಭೆಯಲ್ಲಿ 272 ಬಹುಮತ ಪಡೆಯಲು ಬಿಜೆಪಿಗೆ ಸಾಧ್ಯವಾಗಿಲ್ಲ. ಕೊನೆಗೆ ಬಿಜೆಪಿ ತನ್ನ ಮಿತ್ರ ಪಕ್ಷಗಳಾದ ಟಿಡಿಪಿ, ಜೆಡಿಯು ಮೇಲೆ ಅವಲಂಬಿತವಾಗಿ ಈಗ ಎನ್ಡಿಎ ಸರ್ಕಾರ ರಚಿಸಿದೆ. ಆದರೆ ಕಾಂಗ್ರೆಸ್ 99 ಸ್ಥಾನಗಳನ್ನು ಗಳಿಸಿದರೆ ಒಟ್ಟಾರೆ ಇಂಡಿಯಾ ಒಕ್ಕೂಟ 234 ಸ್ಥಾನಗಳನ್ನು ಗೆದ್ದಿದೆ.