ಭಾರಿ ಮಳೆಯಿಂದ ಬೀದರ್ ನಗರದ ಮೈಲೂರು ಸರ್ಕಾರಿ ಶಾಲೆಯ ತರಗತಿ ಕೋಣೆಯ ಗೋಡೆ ಕುಸಿದಿದ್ದು, ಸ್ಥಳಕ್ಕೆ ಪೌರಾಡಳಿತ ಸಚಿವ ರಹೀಮ್ ಖಾನ್ ಭೇಟಿ ನೀಡಿ ಪರಿಶೀಲಿಸಿದರು.
ಶಾಲಾ ಕಟ್ಟಡದ ಫಿಟ್ನೆಸ್ ಕುರಿತು ತಕ್ಷಣವೇ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ಲವೀಶ ಓರ್ಡಿಯಾ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ‘ಎಲ್ಲ ಸರ್ಕಾರಿ ಶಾಲೆಗಳು ಅಗತ್ಯ ಅತ್ಯಾಧುನಿಕ ಮೂಲಸೌಕರ್ಯಗಳೊಂದಿಗೆ ಸುರಕ್ಷಿತವಾಗಿರಿಸುವುದಕ್ಕೆ ಸರ್ಕಾರ ಬದ್ಧವಾಗಿದೆ. ಇಲ್ಲಿಯ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ಒದಗಿಸಲಾಗುವುದು, ಮೈಲೂರು ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗುವುದುʼ ಎಂದು ತಿಳಿಸಿದರು.
‘ನಾನು ಈಗಾಗಲೇ ಹಲವು ಹೊಸ ಶಾಲಾ ಕಟ್ಟಡ, ಹಾಸ್ಟೆಲ್ಗಳನ್ನು ನಿರ್ಮಿಸಿರುವೆ, ಮಹಿಳಾ ಪದವಿ ಕಾಲೇಜಿಗೆ ಕಲ್ಯಾಣ ಕರ್ನಾಟಕ ಪ್ರದೇಶಾವೃದ್ಧಿ ಮಂಡಳಿಯಿಂದ 10 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಶೀಘ್ರದಲ್ಲೇ ಕೆಲಸ ಆರಂಭವಾಗಲಿದೆ. ಎಲ್ಲ ಶೈಕ್ಷಣಿಕ ಕೇಂದ್ರಗಳ ಬಗ್ಗೆ ಕಾಳಜಿವಹಿಸಲಾಗುತ್ತಿದೆʼ ಎಂದರು.
ಮೈಲೂರು ಬಡಾವಣೆಯಲ್ಲಿ ಶಿಕ್ಷಣ ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಹೊಸ ರಸ್ತೆ, ಚರಂಡಿ, ಬೀದಿ ದೀಪಗಳನ್ನು ಅಳವಡಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮರಾಠಿ ಮಾಧ್ಯಮ ಶಾಲೆಗಳಲ್ಲಿ ಕನ್ನಡ ವಿಭಾಗ ತೆರೆಯಲು ಕರವೇ ಆಗ್ರಹ
ಈ ಸಂದರ್ಭದಲ್ಲಿ ಡಿಯುಡಿಸಿ ಯೋಜನಾ ನಿರ್ದೇಶಕ ಮೋತಿಲಾಲ್ ಲಮಾಣಿ, ನಗರಸಭೆ ಪೌರಾಯುಕ್ತ ಶಿವರಾಜ್ ರಾಠೋಡ್, ಗ್ರೇಡ್-2 ತಹಸೀಲ್ದಾರ್ ಜಿಯಾವುಲ್ಲಾ, ಬಿಇಒ ಅಖಿಲಾಂಡೇಶ್ವರಿ, ಕಾಂಗ್ರೆಸ್ ಮುಖಂಡ ಶೌಕತ್ ಅಲಿ, ಎಸ್ಡಿಎಂಸಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸ್ಥಳೀಯ ನಿವಾಸಿಗಳು ಸೇರಿದಂತೆ ಇತರರಿದ್ದರು.