ಶಹಾಬಾದ್ ನಗರದ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಖಾಯಂ ಉಪನ್ಯಾಸಕರ ನೇಮಕ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗ್ರಹಿಸಿ ಎಐಡಿಎಸ್ಒ ನೇತ್ರತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಶಹಾಬಾದ್ ಉಪ-ತಹಸೀಲ್ದಾರ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಎಐಡಿಎಸ್ಓ ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್.ಕೆ. ಮಾತನಾಡಿ, ‘ಶಹಾಬಾದ ಸರಕಾರಿ ಪದವಿ ಪೂರ್ವ ಕಾಲೇಜಿನ ಸುತ್ತಲಿನ ವಿವಿಧ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಕಲಿಯಲು ಬರುತ್ತಾರೆ. ಆದರೆ, ಕಾಲೇಜಿನ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ವಿವಿಧ ವಿಷಯಗಳ ಖಾಯಂ ಉಪನ್ಯಾಸಕರು ಇರದ ಕಾರಣ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗುತ್ತಿದೆʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಇದೇ ಕಾಲೇಜಿನಲ್ಲಿ ಓದಿರುವ ವಿದ್ಯಾರ್ಥಿಗಳು ಈ ಬಾರಿ ಪಿಯು ಫಲಿತಾಂಶದಲ್ಲಿ ತಾಲೂಕಿನಲ್ಲೇ ಪ್ರಥಮ ಸ್ಥಾನ ಹಾಗೂ 8 ಜನ ಅಗ್ರ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಕಾಲೇಜಿನಲ್ಲಿ 205ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ವಿಜ್ಞಾನ ವಿಭಾಗಕ್ಕೆ ಒಬ್ಬರೂ ಖಾಯಂ ಉಪನ್ಯಾಸಕರಿಲ್ಲದ ಕಾರಣ ನಿಯೋಜಿತ ಉಪನ್ಯಾಸಕರೇ ಗತಿ ಎನ್ನುವಂತಾಗಿದೆ. ವಿದ್ಯಾರ್ಥಿಗಳಿಗೆ ಶುದ್ಧಕುಡಿಯುವ ನೀರು, ಪ್ರಯೋಗಾಲಯ ವ್ಯವಸ್ಥೆ ಇಲ್ಲ. ಗ್ರಂಥಾಲಯದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಪುಸ್ತಕಗಳಿಲ್ಲದ ಕಾರಣ ಸಮಗ್ರ ಜ್ಞಾನಕ್ಕೆ ಅಡ್ಡಿಯುಂಟಾಗಿದೆ’ ಎಂದು ದೂರಿದರು.
‘ತರಗತಿಗಳು ಮುಗಿದ ಬಳಿಕ ಸಂಜೆ ಕಾಲೇಜಿನ ಆವರಣ ಅನೈತಿಕ ಚಟುವಟಿಕೆ ತಾಣವನ್ನಾಗಿ ಮಾರ್ಪಡುತ್ತಿದೆ. ಕಿಡಿಗೇಡಿಗಳು ಮದ್ಯಪಾನ ಸೇವಿಸಿ ಬಾಟಲಿ ಒಡೆಯುವುದು ಮಾಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಸೇರಿದಂತೆ ಮೂಲಸೌಕರ್ಯ ಒದಗಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರೈತರಿಗೆ ಕನ್ಯಾ ಕೊಡ್ತಿಲ್ಲ ; ರೈತ ಮಕ್ಕಳಿಗೆ ಮದುವೆಯಾಗುವ ಹೆಣ್ಮಕ್ಕಳಿಗೆ 5 ಲಕ್ಷ ಪ್ರೋತ್ಸಾಹ ಧನ ನೀಡಿ
ಪ್ರತಿಭಟನೆಯಲ್ಲಿ ಎಐಡಿಎಸ್ಓ ಉಪಾಧ್ಯಕ್ಷ ದೇವರಾಜ ಹೊನಗುಂಟ, ಕಾರ್ಯದರ್ಶಿ ಅಜಯ್ ಗುರಜಲ್ಕರ್, ಜಿಲ್ಲಾ ಸಮಿತಿ ಸದಸ್ಯರಾದ ಸ್ಪೂರ್ತಿ ಗುರಜಲ್ಕರ್, ಬಾಬೂ ಪವರ್, ರಂಗನಾಥ ಮಾನೆ, ಸೃಷ್ಠಿ ಗುರಜಲ್ಕರ್ ಸೇರಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.