ಜಿಲ್ಲೆಯಲ್ಲಿ ಗೋವಾ ಮಾದರಿ ಕಸಿನೋ (ರಿಕ್ರೆಯೇಷನ್ ಸೆಂಟರ್) ಪ್ರಾರಂಭಿಸಲು ನೆರೆಯ ತೆಲಂಗಾಣ ಮತ್ತು ಆಂಧ್ರಪ್ರದೇಶದ ಉದ್ಯಮಿಗಳು ಯತ್ನಿಸುತ್ತಿದ್ದಾರೆ, ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಪತ್ರ ಬರೆದಿರುವ ಅವರು, ʼಜಿಲ್ಲೆಯಲ್ಲಿ ನಡೆಯುತ್ತಿರುವ ನಕಲಿ ಗುಟ್ಕಾ ತಯಾರಿಕೆ, ಮಾರಾಟ ಮತ್ತು ಅಕ್ರಮ ಗಾಂಜಾ ಸಾಗಾಟ ತಡೆಯುವಂತೆ ಮನವಿ ಮಾಡಿದ ಅವರು ಈ ಬಗ್ಗೆ ನೂತನ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಇದರ ಪ್ರತಿಯನ್ನು ಲಗತ್ತಿಸಿ, ಹೆಚ್ಚಿನ ನಿಗಾ ವಹಿಸಬೇಕುʼ ಎಂದು ಕೋರಿದ್ದಾರೆ.
ʼಸುಮಾರು 10 ವರ್ಷಗಳಿಂದ ಜಿಲ್ಲೆಯ ಭಂಗೂರ ಸೇರಿದಂತೆ ಮುಂತಾದ ಸರಹದ್ದುಗಳ ಬಳಿ ಆಂಧ್ರಪ್ರದೇಶ
ಮತ್ತು ತೆಲಂಗಾಣ ಉದ್ಯಮಿಗಳು ರಿಕ್ರಿಯೇಷನ್ ಸೆಂಟರ್ (ವಿನೋದ ಕೂಟ) ಹೆಸರಿನಲ್ಲಿ (ಗೋವಾ ಮಾದರಿ ಕಸಿನೋ) ಪ್ರಾರಂಭಿಸಲು ಯತ್ನಿಸುತ್ತಿದ್ದಾರೆ. ಈ ಕುರಿತು ನನಗೆ ಸಾಕಷ್ಟು ಒತ್ತಡಗಳಿದ್ದರೂ ಸಹ ನಾನು ಈ ಕಾರ್ಯಕ್ಕೆ ತಡೆಗೋಡೆಯಾಗಿ ನಿಂತು ಯಶಸ್ವಿಯಾಗಿರುವೆʼ ಎಂದಿದ್ದಾರೆ.
ʼಕೇವಲ ಊಟೋಪಚಾರಕ್ಕೆಂದು ಅನುಮತಿ ಪಡೆದು ಅನೈತಿಕ ಅಕ್ರಮ ಚಟುವಟಿಕೆಗಳು ನಡೆಸುತ್ತಾರೆ. ನಮ್ಮ ಜಿಲ್ಲೆಯಲ್ಲಿ ಹೆಚ್ಚಾಗಿ ರೈತರ ಮಕ್ಕಳು, ಬಡವರ ಮಕ್ಕಳಿದ್ದು, ಒಂದು ಬಾರಿ ಈ ರಿಕ್ರೆಯೇಷನ್ ಸೆಂಟರ್ ಒಳಗಡೆ ಪ್ರವೇಶಿಸಿದರೆ ಅವರ ಕುಟುಂಬವೇ ಬೀದಿಗೆ ಬರುತ್ತದೆ. ಇವುಗಳಿಗೆ ತೆಲಂಗಾಣದಲ್ಲಿ ನಿಷೇಧಿಸಿದ ಕಾರಣಕ್ಕೆ ಅವರು ನಮ್ಮ ಜಿಲ್ಲೆ ಪ್ರವೇಶಿಸಲು ಯತ್ನಿಸುತ್ತಿದ್ದಾರೆʼ ಎಂದು ಮಾಹಿತಿ ನೀಡಿದರು.
ʼಸದ್ಯದ ರಾಜಕೀಯ ಪರಿಸ್ಥಿತಿಗಳು ಬದಲಾಗಿರುವುದರಿಂದ ಮತ್ತೆ ಅವರು ಈ ಪ್ರಯತ್ನ ಮುಂದುವರೆಸುವ ಸಾಧ್ಯತೆಗಳು ಹೇರಳವಾಗಿವೆ. ಜಿಲ್ಲೆಯ ಯುವಕರ, ಬಡವರ, ಮಹಿಳೆಯರ, ಮಕ್ಕಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಕಾರಣಕ್ಕೂ ರಿಕ್ರೆಯೇಷನ್ ಸೆಂಟರ್ ಪ್ರಾರಂಭಕ್ಕೆ ಅನುಮತಿ ನೀಡಬಾರದುʼ ಎಂದು ಖೂಬಾ ಒತ್ತಾಯಿಸಿದ್ದಾರೆ.
ʼಅಕ್ರಮವಾಗಿ ಬೀದರನಲ್ಲಿ ನಕಲಿ ಗುಟ್ಕಾ ತಯಾರಿಸಿ ಅಮಾಯಕ ಯುವಕರನ್ನು ಬಳಸಿಕೊಂಡು ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಾಗಿಸುತ್ತಿದ್ದಾರೆ. ಇದರಲ್ಲಿ ಜಿಲ್ಲೆಯ ಯುವಕರು ಬಲಿಯಾಗುತ್ತಿದ್ದಾರೆ. ಈ ಜಾಲದ ಹಿಂದೆ ಜಿಲ್ಲೆಯ ಬಲಾಢ್ಯರ ಕೈವಾಡವಿದೆ ಎಂದು ಜನರು ಮಾತಾಡುತ್ತಾರೆ. ಆದರೆ, ಬಲಾಢ್ಯರ ಹಣದಾಸೆಗೆ ಯುವಕರ ಭವಿಷ್ಯ ಹಾಳಾಗುತ್ತಿದೆ. ಆದ್ದರಿಂದ ಅಕ್ರಮ ಗುಟ್ಕಾ ತಯ್ಯಾರಿಕೆಯ ಮೇಲೆ ಅಧಿಕಾರಿಗಳಿಂದ ದಾಳಿ ಮಾಡಿಸಿ, ಗುಟ್ಕಾ ತಯ್ಯಾರಿಕೆ ಬಂದ್ ಮಾಡಿಸಬೇಕು ಮತ್ತು ಅಕ್ರಮ ಸಾಗಾಣಿಕೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕುʼ ಎಂದು ಒತ್ತಾಯಿಸಿದ್ದಾರೆ.
ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಮನವಿ :
ʼಸುಮಾರು ವರ್ಷಗಳಿಂದ ಔರಾದ ಮತ್ತು ಬಸವಕಲ್ಯಾಣ ತಾಲೂಕಿನ ಸರಹದ್ದುಗಳ ಮೂಲಕ ನಡೆಯುತ್ತಿರುವ ಗಾಂಜಾ ಸಾಗಾಟಕ್ಕೆ ಕಡಿವಾಣ ಹಾಕಬೇಕಾಗಿದೆ. ಕಳೆದ ಪೋಲೀಸ್ ಅಧೀಕ್ಷಕರು ಈ ನಿಟ್ಟಿನಲ್ಲಿ ಉತ್ತಮ ಕೆಲಸ ನಿರ್ವಹಿಸಿದ್ದರು. ಆದರೆ, ಇದು ನಿರಂತರ ನಡೆಯುವ ಅಕ್ರಮ ಚಟುವಟಿಕೆಯಾಗಿದೆ. ಔರಾದ ಮತ್ತು ಬಸವಕಲ್ಯಾಣ ತಾಲೂಕಗಳ ಮುಖಾಂತರ ನೆರೆ ರಾಜ್ಯಗಳಿಗೆ ಗಾಂಜಾ ಸಾಗಾಟ ನಡೆಯುತ್ತಿದೆ. ಆದ್ದರಿಂದ, ಜಿಲ್ಲೆಯ ಎಲ್ಲ ಸರಹದ್ದುಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ಗಳಲ್ಲಿ ಹೆಚ್ಚಿನ ಸಿಬ್ಬಂದಿಗಳ ನೇಮಕ, ಗಸ್ತುಗಳ ಹೆಚ್ಚಿಸುವಿಕೆ, ಮುಂತಾದ ಕ್ರಮಗಳು ತೆಗೆದುಕೊಂಡು, ಜಿಲ್ಲೆಯನ್ನು ಗಾಂಜಾ ಮುಕ್ತ ಮಾಡಲು ಶ್ರಮಿಸಬೇಕುʼ ಎಂದು ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ವರ್ಷದಿಂದ ನಡೆಯುತ್ತಲೇ ಇರುವ ಅಂಬಾನಿ ಮದುವೆಯೂ, ಪೌಷ್ಟಿಕ ಆಹಾರ ಸಿಗದ 67 ಲಕ್ಷ ಶಿಶುಗಳೂ…
ʼಕಳೆದ ಬಾರಿ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ, ಜಿಲ್ಲೆಯ ರೈತರ, ಯುವಕರ, ಮಹಿಳೆಯರ, ಮಕ್ಕಳ ಎಲ್ಲರ
ಏಳಿಗೆಗಾಗಿ, ಸಂರಕ್ಷಣೆಗಾಗಿ ಮೇಲಿನ ಈ ಎಲ್ಲ ವಿಷಯಗಳು ನಮ್ಮ ಸರ್ಕಾರದ ಗಮನಕ್ಕೆ ತಂದು ಆದಷ್ಟೂ ನಿಯಂತ್ರಿಸುವ ಕೆಲಸ ಮಾಡಿರುವೆ. ಈ ಕಾರಣಕ್ಕಾಗಿಯೇ ನನಗೆ ರಾಜಕೀಯ ವೈರಿಗಳು ಜಾಸ್ತಿಯಾದರು. ಆದರೆ, ನಾನು ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ, ತಲೆ ಕೆಡಸಿಕೊಳ್ಳೋದು ಇಲ್ಲ. ಈ ನಿಟ್ಟಿನಲ್ಲಿ ತಾವು ಕೂಡ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ಕಾಳಜಿವಹಿಸಿ, ಈ ಅಕ್ರಮ ದಂಧೆಗಳನ್ನು ತಡೆಗಟ್ಟಬೇಕುʼ ಎಂದಿದ್ದಾರೆ.