ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಬಂಧನದಲ್ಲಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಶುಕ್ರವಾರ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.
ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಮುಂದಿನ ವಿಚಾರಣೆಯನ್ನು ಜುಲೈ 17ಕ್ಕೆ ನಿಗದಿಪಡಿಸಿದ್ದಾರೆ. ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ವಿಕ್ರಮ್ ಚೌಧರಿ ಮತ್ತು ಎನ್ ಹರಿಹರನ್ ಅವರು ಕೇಜ್ರಿವಾಲ್ ಪರವಾಗಿ ವಾದಿಸಿದ್ದಾರೆ. ವಿಶೇಷ ವಕೀಲ ಡಿಪಿ ಸಿಂಗ್ ಸಿಬಿಐ ಪರವಾಗಿ ವಾದ ಮಂಡಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ವಾದಿಸಿದ ಸಿಂಘ್ವಿ, “ಕೇಜ್ರಿವಾಲ್ ವಿರುದ್ಧದ ಪ್ರಕರಣದಲ್ಲಿ ಯಾವುದೇ ಗಂಭೀರ ಆರೋಪಗಳಿಲ್ಲ. ಅವರ ವಿರುದ್ಧದ ಆರೋಪವು ಘೋಷಿತ ಅಪರಾಧ ಅಥವಾ ಭಯೋತ್ಪಾದನೆಯಂತಹ ಗಂಭೀರವಾದುದ್ದಲ್ಲ” ಎಂದು ಒತ್ತಿ ಹೇಳಿದರು.
“ಕೇಜ್ರಿವಾಲ್ ಅವರ ಬಂಧನದ ಸಮಯದಲ್ಲಿ CrPC ಸೆಕ್ಷನ್ 41Aಯ ಯಾವುದೇ ಉಲ್ಲಂಘನೆಯನ್ನು ನ್ಯಾಯಾಲಯವು ಗಮನಿಸಿದೆ. ಹೀಗಾಗಿ, ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ಕೋರುವುದು ಅನಗತ್ಯವಾಗಿರುತ್ತದೆ” ಎಂದು ಚೌಧರಿ ಹೇಳಿದರು.
ಜೂನ್ 26ರಂದು ವಿಶೇಷ ನ್ಯಾಯಾಧೀಶರು ಅನುಮತಿ ನೀಡಿದ ನಂತರ ಸಿಬಿಐ ಕೇಜ್ರಿವಾಲ್ ಅವರನ್ನು ರೂಸ್ ಅವೆನ್ಯೂ ಕೋರ್ಟ್ ಆವರಣದಲ್ಲಿ ಬಂಧಿಸಿತು. ಇದೀಗ, ಜಾಮೀನಿಗಾಗಿ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದಾರೆ.