ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ಟೀಕಿಸಿರುವ ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರ ಹೇಳಿಕೆಗೆ ಉಪರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ಜಗದೀಪ್ ಧನಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿದಂಬರಂ ಅವರು ‘ಹೊಸ ಕಾನೂನುಗಳನ್ನು ವೃತ್ತಿಪರರು ರಚಿಸಿಲ್ಲ. ಅರೆಕಾಲಿಕ ವ್ಯಕ್ತಿಗಳು ರಚಿಸಿದ್ದಾರೆ’ ಎಂದು ಹೇಳಿದ್ದು, ಇದು ‘ಅವಹೇಳನಕಾರಿ, ಮಾನಹಾನಿಕರ,ಅವಮಾನಕರ ಹಾಗೂ ಅಕ್ಷ್ಯಮ್ಯ’ ಎಂದು ಧನಕರ್ ಹೇಳಿದ್ದಾರೆ. ನಾವು ಅರೆಕಾಲಿಕವೇ ಎಂದು ಪ್ರಶ್ನಿಸಿದ್ದಾರೆ.
ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಚಿದಂಬರಂ, “ವೃತ್ತಿಪರರಲ್ಲದವರು ಹೊಸ ಕಾನೂನುಗಳನ್ನು ರಚಿಸಿರುವುದೇ ಎದುರಾಗಿರುವ ವಿರೋಧ, ಸಮಸ್ಯೆಗಳಿಗೆ ಕಾರಣ. ಅವರು ಸಮಿತಿಯ ಅರೆಕಾಲಿಕ ಸದಸ್ಯರಾಗಿದ್ದರು. ಇದಕ್ಕೆ ಕಾನೂನು ಆಯೋಗವು ಜರಡಿ ಹಿಡಿಯಬೇಕಿತ್ತು. ಈ ದೇಶದಲ್ಲಿ ಯಾವ ಪ್ರಮುಖ ಕಾನೂನನ್ನು ಕಾನೂನು ಆಯೋಗದ ಪರಾಮರ್ಶೆ ಇಲ್ಲದೆ, ಅಂಗೀಕರಿಸಲಾಗಿದೆ” ಎಂದು ಪ್ರಶ್ನಿಸಿದ್ದರು.
ತಿರುವನಂತಪುರಂನಲ್ಲಿ ನಡೆದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಅಂಡ್ ಟೆಕ್ನಾಲಜಿಯ 12ನೇ ಘಟಿಕೋತ್ಸವದಲ್ಲಿ ಮಾತನಾಡಿದ ಧನಕರ್, ಚಿದಂಬರಂ ಅವರ ಹೆಸರನ್ನು ಉಲ್ಲೇಖಿಸದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಈ ವೇದಿಕೆಯಿಂದ ನಾನು ಅವರಿಗೆ ಮನವಿ ಮಾಡುತ್ತೇನೆ. ದಯವಿಟ್ಟು ಈ ಅವಹೇಳನಕಾರಿ, ಮಾನಹಾನಿಕರ ಮತ್ತು ಅತ್ಯಂತ ಅವಮಾನಕರ ಹೇಳಿಕೆಗಳನ್ನು ಹಿಂತೆಗೆದುಕೊಳ್ಳಿ” ಎಂದರು.
“ಇಂದು ಬೆಳಿಗ್ಗೆ ನಾನು ಪತ್ರಿಕೆಯನ್ನು ಓದಿದಾಗ, ಈ ದೇಶದ ಹಣಕಾಸು ಸಚಿವ, ದೀರ್ಘಕಾಲ ಸಂಸದ ಮತ್ತು ಪ್ರಸ್ತುತ ರಾಜ್ಯಸಭೆಯ ಸದಸ್ಯರಾಗಿದ್ದು ತಿಳುವಳಿಕೆಯುಳ್ಳ ವ್ಯಕ್ತಿಯ ಹೇಳಿಕೆ ನನ್ನನ್ನು ದಿಗ್ಭ್ರಮೆಗೊಳಿಸಿತು. ಈ ಸಂಸತ್ತು ಮಹತ್ತರವಾದ ಕೆಲಸವನ್ನು ಮಾಡಿದೆ ಎಂದು ನಾನು ತುಂಬಾ ಹೆಮ್ಮೆಪಡುತ್ತೇನೆ. ಯುಗಕಾಲದ ಆಯಾಮದ ಮೂರು ಕಾನೂನುಗಳನ್ನು ಜಾರಿಗೆ ತರುವ ಮೂಲಕ ಹೊಸ ಸರ್ಕಾರವು ನಮ್ಮನ್ನು ವಸಾಹತುಶಾಹಿ ಪರಂಪರೆಯಿಂದ ಹೊರತಂದಿದೆ” ಎಂದು ಅವರು ಹೇಳಿದರು.
“ಈ ಗೌರವಾನ್ವಿತ ಸಂಭಾವಿತ ವ್ಯಕ್ತಿ… ‘ಹೊಸ ಕಾನೂನುಗಳನ್ನು ಅರೆಕಾಲಿಕ ವ್ಯಕ್ತಿಗಳು ರಚಿಸಿದ್ದಾರೆ’ ಎಂದು ಹೇಳಿದ್ದಾರೆ. ನಾವು ಸಂಸತ್ತಿನಲ್ಲಿ ಅರೆಕಾಲಿಕವೇ? ಸಂಸತ್ತಿನ ಬುದ್ಧಿವಂತಿಕೆಗೆ ಅಕ್ಷಮ್ಯ ಅವಮಾನ,” ಎಂದರು.
ಸಂಸತ್ತಿನ ಸದಸ್ಯರಾಗಿರುವ ಇತರ ಹಿರಿಯ ವಕೀಲರು ತಮ್ಮ ಅಭಿಪ್ರಾಯವನ್ನು ಮಂಡಿಸಲು ಅವಕಾಶವಿದ್ದಾಗ ಮಸೂದೆಗಳ ಮೇಲಿನ ಚರ್ಚೆಯ ಸಂದರ್ಭದಲ್ಲಿ ಅವರು ಮಾತನಾಡಲಿಲ್ಲ. ತನ್ನ ಸಾಂವಿಧಾನಿಕ ಕರ್ತವ್ಯ ಮತ್ತು ಬಾಧ್ಯತೆಯನ್ನು ನಿರ್ವಹಿಸುವಲ್ಲಿ ಅವರು ವಿಫಲರಾಗಿದ್ದಾರೆ. ಈಗ ಈ ರೀತಿಯ ಹೇಳಿಕೆ ನೀಡಿದ್ದಾರೆ. ಅವರ ಮಾತುಗಳಿಂದ ನಾನು ವಿವರಿಸಲಾಗದಷ್ಟು ಆಘಾತಕ್ಕೊಳಗಾಗಿದ್ದೇನೆ” ಎಂದಿದ್ದಾರೆ.
ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಗಳ ಬದಲಾಗಿ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಅಧಿನಿಯಮಗಳನ್ನು ಜುಲೈ 1ರಿಂದ ಜಾರಿಗೆ ತರಲಾಗಿದೆ. ಈ ಹೊಸ ಕಾನೂನುಗಳಿಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದ್ದು, ಹಲವು ರಾಜ್ಯ ಸರ್ಕಾರಗಳು ಈ ಕಾನೂನುಗಳಿಗೆ ತಮ್ಮದೇ ಆದ ತಿದ್ದುಪಡಿ ತರಲು ಮುಂದಾಗಿವೆ.