ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಗುಂಪು ಹತ್ಯೆ ಪ್ರಕರಣ ನಡೆದಿದ್ದು, ಕಳ್ಳತನದ ಶಂಕೆ ಮೇಲೆ ವ್ಯಕ್ತಿಗೆ ಥಳಿಸಿ ಕೊಲೆ ಮಾಡಿರುವ ಘಟನೆ ದಕ್ಷಿಣ 24 ಪರಗಣದ ಭಂಗಾರ್ನಲ್ಲಿ ನಡೆದಿದೆ.
ಗುಂಪು ಹಿಂಸಾಚಾರ ಅಥವಾ ಗುಂಪು ಹತ್ಯೆಯ ಘಟನೆಗಳನ್ನು ನಿಗ್ರಹ ಮಾಡಲು ಕ್ರಮಕೈಗೊಳ್ಳುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪೊಲೀಸರಿಗೆ ಆದೇಶಿಸಿದ ಬೆನ್ನಲ್ಲೇ ಮತ್ತೊಂದು ಗುಂಪು ಹತ್ಯೆ ಘಟನೆ ನಡೆದಿದೆ.
ಫೂಲ್ಬರಿ ನಿವಾಸಿ ಅಜ್ಗರ್ ಮೊಲ್ಲಾ ಎಂಬಾತನ ಮೇಲೆ ಭಾನುವಾರ ಮುಂಜಾನೆ ಸ್ಥಳೀಯರ ಗುಂಪೊಂದು ಪೊಲೀಸ್ ಠಾಣೆಯ ಸಮೀಪವಿರುವ ಸ್ಥಳದಲ್ಲಿಯೇ ಹಲ್ಲೆ ನಡೆಸಿದೆ. ಬಹಳ ಹೊತ್ತಿನವರೆಗೆ ರಸ್ತೆಯಲ್ಲೇ ಬಿದ್ದಿದ್ದ ಶವವನ್ನು ಗ್ರಾಮಸ್ಥರು ಅಲ್ಲಿಂದ ತೆಗೆಯುವವರೆಗೂ ಪೊಲೀಸರು ಸ್ಥಳಕ್ಕೆ ಬಂದಿಲ್ಲ ಎಂದು ಆರೋಪಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಿವೆ ಎಂದು ಸ್ಥಳೀಯರು ಆರೋಪಿಸಿದ್ದು, ಈತನನ್ನು ಕಳ್ಳನೆಂದು ಭಾವಿಸಿ ಥಳಿಸಿದ್ದಾರೆ. ದಾಳಿಯ ವೇಳೆ ಅಜ್ಗರ್ ಮೊಲ್ಲಾ ಪ್ರಜ್ಞೆ ತಪ್ಪಿ ಬಿದ್ದಿದ್ದು ಬಳಿಕ ಸಾವನ್ನಪ್ಪಿದ್ದಾನೆ.
ಇದನ್ನು ಓದಿದ್ದೀರಾ? ಛತ್ತೀಸ್ಗಢ | ದನ ಸಾಗಿಸುತ್ತಿದ್ದ ಇಬ್ಬರ ಮೃತದೇಹ ಪತ್ತೆ; ಗುಂಪು ಹತ್ಯೆ ಆರೋಪ
“ಈ ಭಾಗದಲ್ಲಿ ಬಹಳ ದಿನಗಳಿಂದ ಕಳ್ಳತನ ನಡೆಯುತ್ತಿದ್ದು, ರಾತ್ರಿ ಕಾವಲುಗಾರ ಇದ್ದಾರೆ. ಆದರೆ ಅವರು ಹೋದ ಕೂಡಲೇ ಕಳ್ಳತನ ನಡೆಯುತ್ತದೆ. ಇಂದು ಒಬ್ಬ ಸಿಕ್ಕಿಬಿದ್ದಿದ್ದು ಸ್ಥಳೀಯರು ಆತನನ್ನು ಹಗ್ಗದಿಂದ ಕಟ್ಟಿ ಹಾಕಿ ಥಳಿಸಿದ್ದಾರೆ. ಆತ ಪ್ರಜ್ಞೆ ತಪ್ಪಿ ಬಿದ್ದಿದ್ದು ಬಳಿಕ ಸಾವನ್ನಪ್ಪಿದ್ದಾನೆ” ಎಂದು ಪ್ರದೇಶದ ನಿವಾಸಿ ಶೇಖ್ ರಫೀಕುಲ್ ಹಸನ್ ಹೇಳಿದರು.
ಘಟನೆಯ ನಂತರ ಸ್ಥಳಕ್ಕೆ ಆಗಮಿಸಿದ ಅಜ್ಗರ್ ಸಂಬಂಧಿಕರು ಘಟನೆಯ ಕಾರಣದ ಬಗ್ಗೆ ನಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಇನ್ನು ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಗುಂಪು ಹತ್ಯೆ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ. ಜೂನ್ ಕೊನೆಯ ವಾರದಲ್ಲಿ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸುಮಾರು 12 ಗುಂಪು ಹತ್ಯೆ ಪ್ರಕರಣಗಳು ದಾಖಲಾಗಿದೆ. ಆ ಪೈಕಿ ಒಂದು ಹತ್ಯೆ ಪ್ರಕರಣವು ಉತ್ತರ ದಿನಜ್ಪುರ ಜಿಲ್ಲೆಯಲ್ಲಿ ಭಾರೀ ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು.
ಇದನ್ನು ಓದಿದ್ದೀರಾ? ಕೇರಳ | ಯೂಟ್ಯೂಬರ್ ಮೇಲೆ ಗುಂಪು ಹಲ್ಲೆ, ಹತ್ಯೆ; 10 ಮಂದಿ ಬಂಧನ
ಜೂನ್ 28ರಂದು ಉತ್ತರ ದಿನಾಜ್ಪುರ ಜಿಲ್ಲೆಯಲ್ಲಿ ಶಾಸಕ ಹಮೀದುಲ್ ರಹಮಾನ್ ಅವರೊಂದಿಗೆ ನಂಟು ಹೊಂದಿದ್ದಾರೆಂದು ಆರೋಪಿಸಿ ಸ್ಥಳೀಯ ತೃಣಮೂಲ ಕಾಂಗ್ರೆಸ್ ಪ್ರಬಲ ತಜ್ಮುಲ್ ಹಕ್ ದಂಪತಿಯನ್ನು ಥಳಿಸಿದ್ದಾರೆ ಎಂದು ದೂರಲಾಗಿದೆ. ಈ ಕೃತ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಟಿಎಂಸಿ ನಾಯಕ ತಜ್ಮುಲ್ ಹಕ್ನ ಬಂಧನ ಮಾಡಲಾಗಿದೆ.