ಕಳೆದ ವರ್ಷದ ಮೇ ತಿಂಗಳಿನಲ್ಲಿ ಜನಾಂಗೀಯ ಸಂಘರ್ಷ ಉಂಟಾದ ನಂತರದಿಂದ ಮಣಿಪುರಕ್ಕೆ ರಾಹುಲ್ ಗಾಂಧಿ ಮೂರು ಬಾರಿ ಭೇಟಿ ನೀಡಿದ್ದಾರೆ. ಆದರೆ ಪ್ರಧಾನಿ ಮಣಿಪುರಕ್ಕೆ ತೆರಳಲು ಕೆಲವು ಗಂಟೆಗಳ ಕಾಲ ಸಮಯವೂ ಮಾಡಿಕೊಳ್ಳುತ್ತಿಲ್ಲ, ಅಲ್ಲಿಗೆ ಹೋಗುವ ಆಸಕ್ತಿಯನ್ನು ಹೊಂದಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಇಂದು ಲೋಕಸಭೆಯ ವಿಪಕ್ಷ ನಾಯಕರು ಅಸ್ಸಾಂ ಹಾಗೂ ಮಣಿಪುರಕ್ಕೆ ತೆರಳಿದರೆ, ಜೈವಿಕವಾಗಿ ಜನಿಸಿಲ್ಲ ಎಂದು ಹೇಳಿಕೊಳ್ಳುವ ಪ್ರಧಾನಿ ಮಾಸ್ಕೋಗೆ ತೆರಳುತ್ತಾರೆ. ಜೈವಿಕವಲ್ಲದ ಪ್ರಧಾನಿಯ ಹೊಗಳುಭಟ್ಟರು ಕೆಲವು ಕಾಲ ರಷ್ಯಾ- ಉಕ್ರೇನ್ ಯುದ್ಧವನ್ನು ನಿಲ್ಲಿಸಿದರೆಂದು ಸಮರ್ಥಿಸಿಕೊಳ್ಳುತ್ತಾರೆ. ಬಹುಶಃ ಈ ಮಾಸ್ಕೋ ಪ್ರವಾಸ ಇನ್ನಷ್ಟು ವಿಲಕ್ಷಣವಾದ ಘಟನೆಗಳಿಗೆ ಕಾರಣವಾಗಬಹುದು ಎಂದು ಪ್ರಧಾನಿಯನ್ನು ಕುಟುಕಿದ್ದಾರೆ.
ಮಣಿಪುರ ಹೊತ್ತಿ ಉರಿದ 14 ತಿಂಗಳುಗಳಲ್ಲಿ ರಾಹುಲ್ ಗಾಂಧಿ ಮೂರು ಬಾರಿ ಭೇಟಿ ನೀಡಿದ್ದಾರೆ.ತಾವು ಜೈವಿಕವಾಗಿ ಜನಿಸಿಲ್ಲ ಎಂದು ಹೇಳಿಕೊಳ್ಳುವ ಪ್ರಧಾನಿ ಗಲಭೆ ಶುರುವಾದ 2023, ಮೇ 3 ರಿಂದ ಮಣಿಪುರಕ್ಕೆ ತೆರಳಲು ಕೆಲವು ಗಂಟೆಗಳ ಕಾಲ ಸಮಯವೂ ಮಾಡಿಕೊಳ್ಳುತ್ತಿಲ್ಲ, ಅಲ್ಲಿಗೆ ಹೋಗುವ ಆಸಕ್ತಿಯನ್ನು ಹೊಂದಿಲ್ಲ. ಅಲ್ಲಿ ಇರುವ ತಮ್ಮ ಸ್ವಂತ ಪಕ್ಷದ ಮುಖ್ಯಮಂತ್ರಿಯನ್ನೇ ಅವರು ಭೇಟಿ ಮಾಡಿಲ್ಲ. ಹಾಗೆಯೇ ಇತರ ಪಕ್ಷದ ಶಾಸಕರು, ಸಂಸದರನ್ನು ಕೂಡ ಭೇಟಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರಣಿ ಅವಘಡಗಳಿಂದ ಬಯಲಾದ ಮೋದಿಯವರ ‘ಅಭಿವೃದ್ಧಿ ಮತ್ತು ಆಡಳಿತ’
ಪ್ರವಾಹ ಪರಿಸ್ಥಿತಿ ಉಂಟಾಗಿರುವ ಅಸ್ಸಾಂ ಹಾಗೂ ಮಣಿಪುರ ರಾಜ್ಯಗಳಿಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಭೇಟಿ ನೀಡಿದ್ದಾರೆ. ಅಸ್ಸಾಂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಮಣಿಪುರದ ನಿರಾಶ್ರಿತ ಪ್ರದೇಶಗಳ ಜನರನ್ನು ಭೇಟಿ ನೀಡಿಲಿದ್ದಾರೆ. ಸಂಜೆ ಮಣಿಪುರದ ರಾಜ್ಯಪಾಲರಾದ ಅನುಸೂಯ ಊಯ್ಕೆ ಅವರನ್ನು ಭೇಟಿ ಮಾಡಲಿದ್ದಾರೆ. ರಾಹುಲ್ ಅವರು ಉತ್ತರ ಪ್ರದೇಶ ರಾಯ್ಬರೇಲಿಯಿಂದ ಸಂಸದರಾಗಿ ಆಯ್ಕೆಯಾದ ನಂತರ ಮಣಿಪುರ ಮೊದಲ ಭೇಟಿ ಇದಾಗಿದೆ.
ಅಸ್ಸಾಂನಲ್ಲಿ ಪ್ರವಾಹ ಉಂಟಾಗಿ 28 ಜಿಲ್ಲೆಯ 22 ಲಕ್ಷಕ್ಕೂ ಹೆಚ್ಚು ಮಂದಿ ತೊಂದರೆಗೀಡಾಗಿದ್ದಾರೆ. ಈ ವರ್ಷದ ನೆರೆ ಪ್ರವಾಹದಿಂದ 78 ಮಂದಿ ಮೃತಪಟ್ಟಿದ್ದಾರೆ.