ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೈಗೊಂಡ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಕೂಡಲೇ ತನಿಖೆಗೆ ಒಳಪಡಿಸುವಂತೆ ಆಗ್ರಹಿಸಿ ಸಿಂದಗಿ ತಾಲೂಕು ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಿಂದಗಿ ದಸಂಸ ತಾಲೂಕು ಸಮಿತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಟಿಪ್ಪು ಸುಲ್ತಾನ್ ವೃತ್ತದವರೆಗೆ ಮೆರವಣಿಗೆ ನಡೆಸಿ ಜಿ.ಪಂ. ಅಧಿಕಾರಿಗಳ ಹಾಗೂ ಗುತ್ತಿಗೆದಾರರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಮುಖಂಡ ಶರಣು ಶಿಂಧೆ ಮಮಾತನಾಡಿ, ʼಗ್ರಾಮೀಣ ಪ್ರದೇಶಗಳಲ್ಲಿ ಜೆಜೆಎಂ ಕಾಮಗಾರಿ ಕಳಪೆ ಮಟ್ಟದಿಂದ ನಡೆಸಲಾಗಿದೆ, ಕೂಡಲೇ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕುʼ ಎಂದು ಆಗ್ರಹಿಸಿದರು.
ಮುಖಂಡ ಪ್ರಕಾಶ ಗುಡಿಮನಿ ಮಾತನಾಡಿ, ʼಪತಿ ಕುಟುಂಬಕ್ಕೆ ಶುದ್ಧ ಕುಡಿಯುವ ನೀರು ಕಲ್ಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿಯೇ ಸರ್ಕಾರ ಜಲ ಜೀವನ ಮಿಷನ್ ಯೋಜನೆಯಡಿ ಸಿಂದಗಿ ತಾಲೂಕಿನ ಗ್ರಾಮಗಳಾದ ಕೇರುಟಗಿ, ತಿಳಗೋಳ, ಆಲಗೂರ, ಬೆಕಿನಾಳ, ಬೂದಿಹಾಳ, ಕಲಕೇರಿ, ಗುತ್ತರಗಿ ಸೇರಿದಂತೆ ಹಲವು ತಾಂಡಾಗಳಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ, ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ನಡೆಸಿ ಸರ್ಕಾರದ ಹಣ ಪೋಲು ಮಾಡುವ ಜೊತೆಗೆ ಜನರಿಗೆ ಮೋಸ ಮಾಡಿದ್ದಾರೆʼ ಎಂದು ಆರೋಪಿಸಿದರು.
ʼಜೆಜೆಎಂ ಅನುಷ್ಠಾನ ಅಧಿಕಾರಿಗಳಾದ ಎಚ್.ಎಸ್.ಸಾರವಾಡ ಹಾಗೂ ಮಲ್ಲಿಕಾರ್ಜುನ ಕಲಶೆಟ್ಟಿ ಅವರು ನಿರ್ಲಕ್ಷ ವಹಿಸಿದ ಕಾರಣಕ್ಕೆ ಗುತ್ತಿಗೆದಾರರು ಗುಣಮಟ್ಟ ಕಾಮಗಾರಿ ನಡೆಸದೆ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡಿದ್ದಾರೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳಿಂದ ತನಿಖೆ ನಡೆಸಿ, ಅವ್ಯವಹಾರದಲ್ಲಿ ಶಾಮೀಲಾದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅಮಾನತುಗೊಳಿಸಬೇಕುʼ ಎಂದು ಒತ್ತಾಯಿಸಿದರು.
ʼಕಳಪೆ ಮಟ್ಟದಿಂದ ನಡೆದ ಜೆಜೆಎಂ ಯೋಜನೆಯ ಎಲ್ಲಾ ಕಾಮಗಾರಿ ಸಮಗ್ರವಾಗಿ ತನಿಖೆ ನಡೆಸುವವರೆಗೂ ಕಾಮಗಾರಿ ತಡೆ ಹಿಡಿಯಬೇಕುʼ ಎಂದು ದಸಂಸ ಮುಖಂಡ ಪ್ರಕಾಶ ಬಡಿಗೇರ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆ
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಅಶೋಕ ಚಲವಾದಿ, ದೇವು ಕಲ್ಲೋರು, ಮಲಕಪ್ಪ ಗಡಗನವರ, ಶಿವು ರಾಂಪುರ, ಮೋಹನ ಬರಗಲ್, ರಮೇಶ ಹೊಸಮನಿ, ವಿಕಾಸ ಕಾಳೆ, ರಾಜಕುಮಾರ ಹೊಸಮನಿ, ಸಿದ್ದಪ್ಪ ದೊಡ್ಡಮನಿ, ಪರಶುರಾಮ ಬಡೆಗೇರ, ಮಹಾದೇವ ಲಿಂಗದೇವನಹಳ್ಳಿ, ಸಾಗರ ಹೊಸಮನಿ, ಮುತ್ತು ಸುಲ್ಪಿ, ಬಸವರಾಜ ಹೊಸಮನಿ, ಉಮೇಶ ಕಮತಗಿ, ಚಂದ್ರಕಾಂತ ಕಲಕೇರಿ ಸೇರಿದಂತೆ ಅನೇಕರಿದ್ದರು.