ಹಿಂದೂ-ಮುಸಲ್ಮಾನರು ಕೂಡಿಕೊಂಡು ಭಾವೈಕ್ಯತೆಯ ಸಂಕೇತವಾಗಿ ಆಚರಿಸುವ ಮೊಹರಂ ಮೆರವಣಿಗೆ ಚಿತ್ರದುರ್ಗ ನಗರದಲ್ಲಿ ಬುಧವಾರ ಜರುಗಿತು.
ದುಃಖ, ಬಲಿದಾನ, ಶೋಕದ ದಿನವನ್ನಾಗಿ ಆಚರಿಸುವ ಮೊಹರಂ ಹಬ್ಬದಲ್ಲಿ ದೇಹಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಂಪ್ರದಾಯ ಕೆಲವೆಡೆ ಈಗಲೂ ಇದೆ. ಅದಕ್ಕಾಗಿಯೇ ಮೊಹರಂ ಹಬ್ಬಕ್ಕೆ ತನ್ನದೇ ಆದ ಮಹತ್ವವಿದೆ. ಒಂಬತ್ತು ದಿನಗಳ ಕಾಲ ಆಚರಿಸುವ ಮೊಹರಂ ಹಬ್ಬದ ಕೊನೆ ಹತ್ತನೆಯ ದಿನವೇ ಪಂಜ ಮೆರವಣಿಗೆ ಹೊರಡುತ್ತದೆ. ಪೀರ್, ಅಲಿ ದೇವರು ಸೇರಿದಂತೆ ಇನ್ನಿತರ ದೇವರುಗಳನ್ನು ವಿಶೇಷವಾಗಿ ಅಲಂಕರಿಸಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಹಬ್ಬದ ವಿಶೇಷವಾಗಿ ಸಾರ್ವಜನಿಕರಿಗೆ ತಿನಿಸು ಮತ್ತು ಪಾನೀಯಗಳನ್ನು ವಿತರಿಸಲಾಗುತ್ತದೆ.
ಉಪವಾಸ ಆಚರಿಸುವ ಸಂಕಲ್ಪ ಮಾಡುವುದು ಹಬ್ಬದ ವಿಶೇಷ. ಚೇಳುಗುಡ್ಡ, ಬುರುಜನಹಟ್ಟಿ, ಮಠದ ಕುರುಬರಹಟ್ಟಿಯಿಂದ ಮೆರವಣಿಗೆ ಮೂಲಕ ಬಂದ ಪಂಜಗಳು ಸೈಯದ್ ನಾ ಹಜರತ್ ಇಮಾಂ ಹಸನ್ ಸೈಯದಾನಾ, ಹಜರತ್ ಇಮಾಂ ಹುಸೇನ್ ಅಶೋರಖಾನ್ ಇವರುಗಳ ದರ್ಗಾ ಬಳಿ ತೆರಳಿ ಪೂಜೆ ಸಲ್ಲಿಸಿದವು. ಗಾಂಧಿವೃತ್ತದಿಂದ ಹಿಡಿದು ದೊಡ್ಡಪೇಟೆಯವರೆಗೆ ರಸ್ತೆಯ ಎರಡೂ ಬದಿಯಲ್ಲಿ ಹಿಂದೂ-ಮುಸಲ್ಮಾನರು ಜಮಾಯಿಸಿ ಮೆರವಣಿಗೆ ವೀಕ್ಷಿಸಿದರು.
ಮೆರವಣಿಗೆಯುದ್ದಕ್ಕೂ ಅಲ್ಲಲ್ಲಿ ಗುಂಪು ಗುಂಪಾಗಿ ಜಮಾಯಿಸಿದ್ದ ಯುವಕರು ಡೊಳ್ಳು, ತಮಟೆಗಳನ್ನು ಬಾರಿಸಿ ಕುಣಿದು ಕುಪ್ಪಳಿಸಿ ಮೊಹರಂ ಆಚರಿಸಿದರು.
ಬೃಹತ್ ಹಾರಗಳು, ಹೂವು ಮತ್ತು ಸುನೇರಿಗಳಿಂದ ಅಲಂಕರಿಸಿದ್ದ ಪಂಜಗಳ ಮೇಲೆ ಜನ ಮಂಡಕ್ಕಿ ತೂರಿ ಭಕ್ತಿ ಸಮರ್ಪಿಸುತ್ತಿದ್ದರೆ, ಇನ್ನು ಕೆಲವರು ಕೆಳಗೆ ಬಿದ್ದ ಮಂಡಕ್ಕಿಗಳನ್ನು ಆಯ್ದುಕೊಳ್ಳುತ್ತಿದ್ದಿದ್ದು ಮೊಹರಂ ಹಬ್ಬದ ವಿಶೇಷವಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ನಮ್ಮ ಧರ್ಮ ನಮ್ಮೊಂದಿಗೆ, ನಮ್ಮ ಪ್ರೀತಿ ಎಲ್ಲರೊಂದಿಗೆ: ಮುಹಮ್ಮದ್ ಕುಂಞಿ
ಚಿತ್ರದುರ್ಗ ನಗರದ ಮುಸ್ಲಿಂ ಹಿರಿಯರೊಬ್ಬರು ಈ ದಿನ.ಕಾಮ್ನೊಂದಿಗೆ ಮಾತನಾಡಿ, ಕೆಲವು ವರ್ಷಗಳ ಹಿಂದೆ ಇದೇ ರೀತಿಯಾಗಿ ಎಲ್ಲರೂ ಒಟ್ಟಾಗಿ ಸೇರಿ ಮೊಹರಂ ಆಚರಿಸುತ್ತಿದ್ದೆವು. ಇತ್ತೀಚೆಗೆ ಅದಕ್ಕೆ ಸ್ವಲ್ಪ ಅಡೆತಡೆ ಉಂಟಾಗಿತ್ತು. ಈಗ ಮತ್ತೆ ಎಲ್ಲ ಬಾಂಧವರು ಸೇರಿ ಮೊಹರಂ ಆಚರಿಸುತ್ತಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ” ಎಂದು ಪ್ರತಿಕ್ರಿಯಿಸಿದರು.
ಮೊಹರಂ ಹಬ್ಬದ ಪ್ರಯುಕ್ತ ದೊಡ್ಡಪೇಟೆ ಹಾಗೂ ಗಾಂಧಿ ವೃತ್ತದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಿದ್ದರು.