ರೈತ ಮತ್ತು ಕಾರ್ಮಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದರಾದ ಜಗದೀಶ್ ಶೆಟ್ಟರ್ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರಿಗೆ ಸಂಯುಕ್ತ ಕರ್ನಾಟಕ ಹೋರಾಟ ಸಮಿತಿಯಿಂದ ಮನವಿ ಸಲ್ಲಿಸಲಾಯಿತು.
ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ರೈತರು ಮತ್ತು ಕೃಷಿ ಕಾರ್ಮಿಕರ ಸಾಲಮನ್ನಾ ಮಾಡಬೇಕು, ಕೃಷಿ ಉಪಕರಣಗಳು ಮೇಲೆ ಜಿ.ಎಸ್.ಟಿ ಹಾಕಬಾರದು, ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆ ಕಾಯ್ದೆ ರದ್ದು ಮಾಡಬೇಕು, ರೈತರು ಕೃಷಿ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು, FRA ಮತ್ತು PESA ಕಾಯ್ದೆಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಕಾಡು ಪ್ರಾಣಿಗಳ ಹಾವಳಿಗೆ ಶಾಶ್ವತ ಪರಿಹಾರ ನೀಡಬೇಕು, ಜನತೆಯ ಮೇಲೆ ಹೇರಿರುವ 3 ಕ್ರಿಮಿನಲ್ ಕಾಯ್ದೆಗಳನ್ನು ರದ್ದು ಪಡಿಸಬೇಕು, 736 ಹುತಾತ್ಮ ರೈತರ ಸ್ಮರಣೆಗಾಗಿ ಹಿಂಗು, ಟಿಕ್ರಿ ಗಡಿಯಲ್ಲಿ ಹುತಾತ್ಮ ಸ್ಮಾರಕ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಮತ್ತು ಕೃಷಿ ಕಾರ್ಮಿಕರ ಭೂಮಿ ಹಾಗೂ ಜಾನುವಾರು ಸಂಪನ್ಮೂಲಗಳನ್ನು ರಕ್ಷಿಸಿ, ಅವರು ತೀವ್ರ ಕೃಷಿ ಬಿಕ್ಕಟ್ಟಿನಿಂದಾಗಿ ದಿವಾಳಿಯಾಗುವುದನ್ನು ತಡೆಗಟ್ಟಬೇಕು, ಸಣ್ಣ ಉತ್ಪಾದಕರ ಹಾಗೂ ದುಡಿಮೆಗಾರರ ಉದ್ಯೋಗ ಮತ್ತು ಕನಿಷ್ಠ ಕೂಲಿಗೆ ಭದ್ರತೆ ಒದಗಿಸಿ ಅವರಿಗೆ ಘನತೆಯ ಬದುಕನ್ನು ಖಾತರಿಪಡಿಸಬೇಕು. ಅವರನ್ನು ಸಾಲದ ಸುಳಿಯಿಂದ, ಆತ್ಮಹತ್ಯೆಗಳಿಂದ ಹಾಗೂ ಸಂಕಷ್ಟ ವಲಸೆಯಿಂದ ಉಳಿಸಬೇಕು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.
ಉತ್ಪಾದಕರ ಸಹಕಾರಿಗಳು ಮತ್ತು ಸಮಸ್ಯೆಗಳನ್ನು, ಹಾಗೆಯೇ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಒಳಗೊಂಡ ಒಕ್ಕೂಟಗಳಿಗೆ ಉತ್ತೇಜನ ನೀಡಬೇಕು, ಅವುಗಳಿಗೆ ಸಾರ್ವಜನಿಕ ವಲಯದ ಸಾಲಗಳು, ಕೃಷಿ ಸಂಸ್ಕರಣೆ, ಮೌಲ್ಯ ವರ್ಧನೆ, ಮೂಲ ಸೌಕರ್ಯಗಳ ಜಾಲ, ಮಾರುಕಟ್ಟೆ ವ್ಯವಸ್ಥೆ ಹಾಗೂ ಸಂಶೋಧನೆ-ಅಭಿವೃದ್ಧಿಯ ಸೌಲಭ್ಯಗಳ ಬೆಂಬಲವನ್ನು ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಎಲ್ಲ ಹಕ್ಕೊತ್ತಾಯಗಳ ಕುರಿತು ಪ್ರಧಾನಮಂತ್ರಿ ಮತ್ತು ಕ್ಯಾಬಿನೆಟ್ ಗಮನಕ್ಕೆ ತಂದು ಒತ್ತಡ ಹೇರುವಂತೆ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯು ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಮತ್ತು ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರಿಗೆ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಭಾರತೀಯ ಕೃಷಿಕರ ಸಮಾಜದ ರಾಜ್ಯಾಧ್ಯಕ್ಷರಾದ ಸಿದಗೌಡ ಮೋದಗಿ, ರೈತ ಸಂಘಟನೆಯ ಶಿವಲಿಲಾ ಮಿಸಾಲೆ, ಶಂಕರ ಡವಳಿ, ಯಾಸೀನ್ ಮಖಾನದಾರ್, ಡಿ.ಎಸ್.ಚೌಗಲೆ ಉಪಸ್ಥಿತರಿದ್ದರು.
