- ಸ್ಥಳೀಯರು ಮನೆ ಕಟ್ಟಲು, ರಸ್ತೆ ನಿರ್ಮಿಸುವುದಕ್ಕೆ ಅರಣ್ಯ ಇಲಾಖೆ ಅಡ್ಡಿ
- ʼಅರಣ್ಯ ಇಲಾಖೆಯವರೇ ದೊಡ್ಡ ಯಂತ್ರಗಳಿಂದ ರಕ್ಷಿತಾರಣ್ಯ ಅಗೆದು ನಾಶ ಮಾಡುತ್ತಿದ್ದಾರೆʼ
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮೂರುಕಣ್ಣು ಗುಡ್ಡ ರಕ್ಷಿತಾರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಜೆಸಿಬಿ ಯಂತ್ರದಿಂದ ಭೂಮಿ ಅಗೆದು ಕಾಮಗಾರಿ ನಡೆಸಿ ಪರಿಸರ ಹಾನಿ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಮಲೆನಾಡು ರಕ್ಷಣಾ ಸೇನೆ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
“ಹಾನುಬಾಳು ಹೋಬಳಿ ಅಗ್ನಿ, ಅಚ್ಚನಹಳ್ಳಿ ಜಂಬರಡಿ, ನಡಹಳ್ಳಿ, ಕಾಡುಮನೆ, ಮಂಚೇನಹಳ್ಳಿ ಎಸ್ಟೇಟ್, ಕುಮಾರಹಳ್ಳಿ, ಕಾಮನಹಳ್ಳಿ, ಸುತ್ತಮುತ್ತಲ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಹಲವು ದಶಕಗಳಿಂದ ಮನೆಗಳನ್ನು ನಿರ್ಮಿಸಿಕೊಂಡು, ಭೂಮಿ ಸಾಗುವಳಿ ಮಾಡಿ ಬದುಕುತ್ತಿದ್ದಾರೆ. ಸೆಕ್ಷನ್ 4ರ ಹೆಸರಿನಲ್ಲಿ ಅರಣ್ಯ ಇಲಾಖೆ ಎರಡು ವರ್ಷಗಳಿಂದ ಕಿರುಕುಳ ನೀಡುತ್ತಿದ್ದು, ಈ ಭಾಗದಲ್ಲಿ ಮನೆ ಕಟ್ಟುವುದಕ್ಕೆ, ರಸ್ತೆ ಮಾಡುವುದಕ್ಕೆ ಎಲ್ಲದಕ್ಕೂ ಅಡ್ಡಿ ಮಾಡಲಾಗುತ್ತಿದೆ” ಎಂದು ಮಲೆನಾಡು ರಕ್ಷಣಾ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಾಗರ್ ಜಾನೇಕೆರೆ ಆರೋಪಿಸಿದರು.
“ಅರಣ್ಯ ಇಲಾಖೆಯವರು ಇದೀಗ ದೊಡ್ಡ ಯಂತ್ರಗಳಿಂದ ರಕ್ಷಿತಾರಣ್ಯವನ್ನು ಅಗೆದು ನಾಶ ಮಾಡುತ್ತಿದ್ದಾರೆ. ಇದರಿಂದ ಮಳೆಗಾಲದಲ್ಲಿ ಗುಡ್ಡಗಳು ಕುಸಿಯುತ್ತವೆ. ಈ ಹಾಗಾಗಿ ಕಾಮಗಾರಿ ನಡೆಯದಂತೆ ತಡೆದು ನಿಲ್ಲಿಸಿದ್ದೇವೆ” ಎಂದು ಅಗನಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
“ಪ್ರತಿ ವರ್ಷ ಗುಡ್ಡದ ಮೇಲೆ ಗಿಡ ನೆಡುವ ಹೆಸರಿನಲ್ಲಿ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟ ಉಂಟು ಮಾಡಲಾಗುತ್ತಿದೆ. ಪ್ರತಿ ವರ್ಷ ನೆಟ್ಟಿರುವ ಯಾವುದೇ ಗಿಡ ಮರಗಳು ಈವರೆಗೆ ಬೆಳೆದಿಲ್ಲ” ಎಂದು ಆರೋಪಿಸಿದರು.

ಮನವಿ ಸ್ವೀಕರಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಮಾತನಾಡಿ, “ಮನವಿ ಬಗ್ಗೆ ಪರಿಶೀಲನೆ ನಡೆಸಿ, ಮೂರುಕಣ್ಣು ಗುಡ್ಡ ಹಾಗೂ ಕಾಡುಮನೆ ವ್ಯಾಪ್ತಿಯಲ್ಲಿ ಜೆಸಿಬಿ ಯಂತ್ರದ ಮೂಲಕ ನೆಡೆಸುತ್ತಿದ್ದ ಕಾಮಗಾರಿಯನ್ನು ಕೂಡಲೇ ನಿಲ್ಲಿಸಿ ಸ್ಥಳದಿಂದ ಜೆಸಿಬಿ ಯಂತ್ರವನ್ನು ತರೆವುಗೊಳಿಸಲಾಗುವುದು” ಎಂದರು.
ವಲಯ ಅರಣ್ಯ ಅಧಿಕಾರಿ ಶಿಲ್ಪಾ ಮಾತನಡಿ, “ಕಾಡ್ಗಿಚ್ಚು ತಡೆಯುವುದಕ್ಕೆ ಮೂರುಕಣ್ಣು ಗುಡ್ಡದಲ್ಲಿ ಇಲಾಖೆ ಕಾಮಗಾರಿ ಮಾಡಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಗುಡ್ಡ ಕುಸಿಯುತ್ತದೆ ಎಂಬ ಆರೋಪ ಸರಿಯಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
ಮಲೆನಾಡು ರಕ್ಷಣಾ ಸೇನೆ ರಾಜ್ಯ ಘಟಕದ ಅಧ್ಯಕ್ಷ ಸಾಗರ್ ಜಾನೇಕೆರೆ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಮೂರುಕಣ್ಣು ಗುಡ್ಡದಲ್ಲಿ ರಸ್ತೆ ನಿರ್ಮಾಣ ಮಾಡಲು ಅರಣ್ಯ ಅಧಿಕಾರಿಗಳು ಜೆಸಿಬಿ ಯಂತ್ರ ಬಳಸಿ ಕಾಮಗಾರಿ ಆರಂಭಿಸಿದ್ದರು. ಹಾಗೆ ಮಾಡುವುದರಿಂದ ಕುಸಿತ ಉಂಟಾಗುತ್ತದೆ. ಇದರಿಂದ ಅಲ್ಲಿ ವಾಸವಿರುವ ನಿವಾಸಿಗಳಿಗೆ ತೊಂದರೆ ಉಂಟಾಗುತ್ತದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರೈತರ ಹಕ್ಕೊತ್ತಾಯ ಈಡೇರಿಸುವುದಾಗಿ ಘೋಷಣೆ: ಪ್ರಮಾಣ ಪತ್ರಕ್ಕೆ ಸಹಿ ಹಾಕಿದ ಕಾಂಗ್ರೆಸ್ ಮತ್ತು ಜೆಡಿಎಸ್
“ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಮನವಿ ನೀಡಿದ ಬಳಿಕ, ಜೆಸಿಬಿಯಿಂದ ನಡೆಸುತ್ತಿದ್ದ ಕಾಮಗಾರಿಯನ್ನು ನಿಲ್ಲಿಸಿದ್ದಾರೆ. ಬಳಿಕ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ರಸ್ತೆ ನಿರ್ಮಾಣ ಮಾಡಲಾಗುವುದೆಂದು ಹೇಳಿದ್ದಾರೆ” ಎಂದರು.
ಹಾನುಬಾಳು ಹರೀಶ್, ಸುಧೀರ್, ಸುಭಾಷ್, ಶಂಭು, ಮಂಜುನಾಥ್ ಅಗನಿ ಸೇರಿದಂತೆ ಇತರರು ಇದ್ದರು.