ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣದಲ್ಲಿ ಭೂಸ್ವಾಧೀನದ ವಿರುದ್ಧ ನಡೆಯುತ್ತಿರುವ ರೈತರ ಅನಿರ್ಧಿಷ್ಟಾವಧಿ ಹೋರಾಟ ಬರೋಬ್ಬರಿ 845 ದಿನಗಳನ್ನು (ಸುಮಾರು 2 ವರ್ಷ) ಪೂರೈಸಿದೆ. ಈ ನಡುವೆ, ಎರಡು ಸರ್ಕಾರಗಳು ಬದಲಾಗಿವೆ. ಅದರೂ, ರೈತರ ಬೇಡಿಕೆಗಳಿಗೆ ಯಾವುದೇ ಸರ್ಕಾರ ಸ್ಪಂದಿಸಿಲ್ಲ. ರೈತರನ್ನು ಕಡೆಗಣಿಸುತ್ತಿರುವ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಧರಣಿನಿರತ ರೈತರು ಜುಲೈ 23ರಂದು ಮುಖ್ಯಮಂತ್ರಿ ಮನೆಗೆ ಜಾಥಾ ಹಮ್ಮಿಕೊಂಡಿದ್ದಾರೆ.
ಚನ್ನರಾಯಪಟ್ಟಣ ಸುತ್ತಲಿನ 13 ಗ್ರಾಮಗಳ 1,777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಕೆಐಎಡಿಬಿ ಕ್ರಮವನ್ನು ವಿರೋಧಿಸಿ ರೈತರು ಧರಣಿ ನಡೆಸುತ್ತಿದ್ದು, ಭೂಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ. ರೈತ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಂತ್ರಿಗಳು-ಶಾಸಕರು ರೈತರಿಗೆ ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
“ಹೋರಾಟದ ಕೊನೆಯ ಪ್ರಯತ್ನವಾಗಿ ಜುಲೈ 23ರಂದು ಮುಂತ್ರಿಮಂತ್ರಿ ಮನೆಗೆ ಜಾಥಾ ಹೊರಟಿದ್ದೇವೆ. ನಮ್ಮ ಸಮಸ್ಯೆಗೆ ಪರಿಹಾರ ಸಿಗುವವರೆಗೂ ನಾವು ಹಿಂದಿರುಗುವುದಿಲ್ಲ. ರೈತ ಹೋರಾ ಸಮಿತಿಯ ನಿಯೋಗುವು ಕೈಗಾರಿಕಾ ಮಂತ್ರಿ ಎಂ.ಬಿ ಪಾಟೀಲರನ್ನು ಭೇಟಿ ಮಾಡಿದಾಗ, ‘ನೀವು ಹೇಳಿದಹಾಗೆಲ್ಲ ಕೇಳೋಕಾಗಲ್ರೀ…!’ ಎಂದು ಉದ್ಧಟತನದ ಮಾತಾಡಿದ್ದಾರೆ. ರೈತರನ್ನು ಅಪಮಾನಿಸಿದ್ದಾರೆ. ಅವರನ್ನು ಮಂತ್ರಿ ಮಂಡಲದಿಂದ ವಾಜಾ ಮಾಡಬೇಕು” ಎಂದು ರೈತರು ಒತ್ತಾಯಿಸಿದ್ದಾರೆ.
“ಈಗಾಗಲೇ ಹಲವಾರು ಕಾರಣಗಳಿಗಾಗಿ ಚನ್ನರಾಯಪಟ್ಟಣ ಹೋಬಳಿಯ ಸಾವಿರಾರು ಎಕರೆ ಭೂಮಿಯನ್ನು ಕೆಐಎಡಿಬಿ ವಶಪಡಿಸಿಕೊಂಡಿದೆ. ಇದೀಗ, ಕೈಗಾರಿಕೆಗಾಗಿ ಚನ್ನರಾಯಪಟ್ಟಣ ಮತ್ತು ಕುಂದಾಣದ ಸುತ್ತಲಿನ ಹಳ್ಳಿಗಳು 2,030 ಎಕರೆ ಭೂಮಿಯನ್ನು ಐಎಡಿಬಿ ಮೊದಲನೇ ಹಂತದಲ್ಲಿ ಸ್ವಾಧೀನಪಡಿಸಿಕೊಂಡಿದೆ. ಈಗ ಮತ್ತೆ ಚನ್ನರಾಯಪಟ್ಣ ಹೋಬಳಿಯಲ್ಲಿ 1,777 ಎಕರೆ ಭೂಮಿಯನ್ನು ವಶಪಡಿಸಕೊಳ್ಳಲು ಮುಂದಾಗಿದೆ. ಆದರೆ, 80%ಗೂ ಅಧಿಕ ರೈತರು ಭೂಮಿಯನ್ನು ಕೊಡಲು ನಿರಾಕರಿಸಿದ್ದಾರೆ. ಕೆಐಎಡಿಬಿ ತನ್ನ ಕ್ರಮವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ʼಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿʼ ರಚಿಸಿಕೊಂಡು ಹೋರಾಟ ನಡೆಸುತ್ತಿದ್ದೇವೆ. ಹಿಂದೆ ವಿಪಕ್ಷ ನಾಯಕರಾಗಿದ್ದ ಸಿದ್ಧರಾಮಯ್ಯಮ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ, ನಮ್ಮ ಜಮೀನು ಸ್ವಾಧೀನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ, ಈಗ ಉಲ್ಟಾ ಹೊಡೆಯುತ್ತಿದ್ದಾರೆ” ಎಂದು ಹೋರಾಟನಿರತ ರೈತರು ಆರೋಪಿಸಿದ್ದಾರೆ.