ಪತ್ರಕರ್ತರು ಯಾವುದೇ ಪಕ್ಷದ ಪರ ಒಲವು ತೋರದೇ ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕ ವರದಿಗಾರಿಕೆಗೆ ಮುಂದಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.
ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಸವಾಯಿ ಗಂಧರ್ವ ಸಭಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ʼಹೊಸದಾಗಿ ಸಾವಿರಾರು ಪತ್ರಿಕಾ ಮತ್ತು ದೃಶ್ಯ ಮಾದ್ಯಮಗಳು ಉದಯವಾಗಿರುವುದು ಸಂತಸದ ಸಂಗತಿ. ಆದರೆ ಸತ್ಯಶೋಧನೆಯ ಸುದ್ದಿಗಳ ಕಡೆಗೆ ಪತ್ರಕರ್ತರ ಗಮನವಿರಬೇಕು. ಒಂದೇ ಪಕ್ಷವನ್ನು ಗುರಿಯಾಗಿಸಿ ಸುದ್ದಿ ಪ್ರಸಾರ ಮಾಡುವುದು ಪತ್ರಿಕೋದ್ಯಮಕ್ಕೆ ಮಾಡುವ ದ್ರೋಹ. ಪತ್ರಕರ್ತರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯ, ಯೋಜನೆಗಳ ಕುರಿತು ಚರ್ಚಿಸಲಾಗುವುದುʼ ಎಂದು ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಶಾ ಖಾನ್ ಮಾತನಾಡಿ, ʼಇವತ್ತು ಮಾಧ್ಯಮದ ಹಬ್ಬವನ್ನಾಗಿ ಆಚರಿಸುತ್ತಿರುವುದು ಬಹಳ ಖುಷಿ ತಂದಿದೆ. ನಾನು ಹುಬ್ಬಳ್ಳಿ ಬಿಟ್ಟರೂ ಇಲ್ಲಿನ ಮಣ್ಣಿನೊಂದಿಗೆ ನನ್ನ ಬಾಂಧವ್ಯವಿದೆ. 40 ವರ್ಷಗಳ ಇತಿಹಾಸ ಹೊಂದಿರುವ ಕರ್ನಾಟಕ ಮಾಧ್ಯಮ ಅಕಾಡೆಮಿ ಇನ್ನಷ್ಟು ಬೆಳೆಸಲು ನಾವೆಲ್ಲರೂ ದುಡಿಯೋಣʼ ಎಂದರು.
ʼಪತ್ರಿಕೋದ್ಯಮ ಎಲ್ಲರನ್ನೂ ಕೂಡಿಸಲು ಪ್ರಯತ್ನಿಸಬೇಕು. ಇಂದಿನ ಬಹುತೇಕ ಪತ್ರಿಕೋದ್ಯಮ ಅಧ್ಯಯನ ಕೇಂದ್ರಗಳು ಮುಚ್ಚುತ್ತಿರುವುದು ದುರಂತದ ಸಂಗತಿ. ಪತ್ರಿಕೋದ್ಯಮ ಎಂದರೆ ಕೇವಲ ವಿಧಾನ ಸೌಧದಲ್ಲಿ ನಡೆಯುವ ಸುದ್ದಿಗಳನ್ನಷ್ಟೇ ಪ್ರಕಟಿಸುವುದಲ್ಲ. ಬದಲಾಗಿ ಗ್ರಾಮೀಣ ಭಾಗದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ದನಿಯಾಗಬೇಕುʼ ಎಂದು ಕಿವಿಮಾತು ಹೇಳಿದರು.
ಪತ್ರಕರ್ತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮಾತನಾಡಿ, ʼಹತ್ತು ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಹಿರಿಮೆ ಕಾರ್ಯನಿರತ ಪತ್ರಕರ್ತ ಸಂಘಕ್ಕೆ ಸಲ್ಲುತ್ತದೆʼ ಎಂದರು.
ಇದೇ ಸಂದರ್ಭದಲ್ಲಿ ಉತ್ತಮ ವರದಿಗಾರರಿಗೆ ವಾರ್ಷಿಕ ಪ್ರಶಸ್ತಿ ನೀಡಿ ಗೌರವಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ ರೈತರ ಹೋರಾಟಕ್ಕೆ ಜಯ; ಕೆಐಎಡಿಬಿ ಸ್ವಾಧೀನತೆಯಿಂದ ಕೃಷಿ ಭೂಮಿ ಕೈಬಿಟ್ಟ ಸರ್ಕಾರ
ಕಾರ್ಯಕ್ರಮದಲ್ಲಿ ಪ್ರಮುಖರಾದ ಸುಶಿಲೇಂದ್ರ ಕುಂದರಗಿ, ಲೋಚನೇಶ್ ಹೂಗಾರ್, ಪುಂಡಲಿಕ್ ಬಾಳೋಜಿ, ಗಣಪತಿ ಗಂಗೊಳ್ಳಿ, ಹನುಮಂತರಾವ್ ಬೆಳಗಾಂವಕರ್, ವಾರ್ತಾ ಭಾರತಿ ವರದಿಗಾರ ಹಜರತಸಾಬ್ ನದಾಫ್ ಸೇರಿದಂತೆ ಜಿಲ್ಲೆಯ ಮುದ್ರಣ ಹಾಗೂ ದೃಶ್ಯ ಮಾಧ್ಯಮ ವರದಿಗಾರರು ಉಪಸ್ಥಿತರಿದ್ದರು.