ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನೀಡಿದೆ. ಸುಪ್ರೀಕೋರ್ಟ್ ನೀಡಿದ ತೀರ್ಪನ್ನು ರಾಜ್ಯ ಸರ್ಕಾರಗಳು ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಗಸ್ಟ್ 13ರಂದು ಪ್ರತಿಭಟನೆ ನಡೆಸಿದ್ದು, ಕೂಡಲೇ ಒಳಮೀಸಲಾತಿಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದೆ.
ಇದೇ ಆಗಸ್ಟ್ 1ರಂದು ಸುಪ್ರೀಂ ಕೋರ್ಟ್ನ 7 ನ್ಯಾಯಧೀಶರ ಪೀಠ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಜಾರಿಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ. ಈ ಅಧಿಕಾರ ರಾಜ್ಯ ಸರ್ಕಾರಗಳಿಗೆ ವ್ಯಾಪ್ತಿಯಾಗಿದೆ. ನ್ಯಾಯಾಲಯ ಎತ್ತಿ ಹಿಡಿದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಸಮಿತಿ ಹೇಳಿದೆ.
“30 ವರ್ಷಗಳ ಹೋರಾಟ ಹಾಗೂ ಪರಿಶಿಷ್ಟ ಜಾತಿಗಳಲ್ಲಿ ಮನೆ ಮಾಡಿದ್ದ ಅಸಮಾನತೆ ಆತಂಕಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ತೆರೆ ಎಳೆದಿದೆ. ರಾಜ್ಯ ಸರ್ಕಾರವು ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಬೇಕು. ರಾಜ್ಯ ಸರ್ಕಾರಗಳು ತಾಯ್ತತನ ಮತ್ತು ವಿವೇಕಯುತ ಮನಸ್ಸಿನಿಂದ ಕಾರ್ಯಪ್ರವೃತ್ತರಾಗಿ, ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜಾರಿಗೊಳಿಸುವ ಕ್ರಮಕ್ಕೆ ಮುಂದಾಗಬೇಕು” ಎಂದಿದೆ.
ಈ ಬಗ್ಗೆ ಈದಿನ.ಕಾಮ್ ಜತೆಗೆ ಮಾತನಾಡಿದ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಪ್ರಧಾನ ಸಂಚಾಲಕರು ಎಸ್ ಮಾರೆಪ್ಪ ವಕೀಲರು, “ಸಾಮಾಜಿಕ ನ್ಯಾಯಕ್ಕಾಗಿ ಈ ಪ್ರತಿಭಟನ ಮಾಡುತ್ತಿದ್ದೇವೆ. 7 ಜನ ನ್ಯಾಯಾಧೀಶರ ಪೀಠ ಒಳಮೀಸಲಾತಿಯನ್ನು ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು ಎಂದು ಹೇಳಿದೆ. ಆದರೆ, ರಾಜ್ಯ ಸರ್ಕಾರ ಇಲ್ಲಿಯವರೆಗೂ ಒಳಮೀಸಲಾತಿಯನ್ನು ಜಾರಿಗೆ ತರಲು ಮುಂದಾಗಿಲ್ಲ. ಸಿದ್ಧರಾಮಯ್ಯ ಅವರು ಹಿಂದುಳಿದ ನಾಯಕ. ಆದರೆ, ಇನ್ನು ಕೂಡ ಈ ಒಳಮೀಸಲಾತಿಯನ್ನು ಜಾರಿಗೆ ತರುತಿಲ್ಲ. ಜಿ.ಮಾಧುಸ್ವಾಮಿ ನೇತೃತ್ವದ ಉಪಸಮಿತಿಯ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಮಾದಿಗರು ಶೇ.6, ಹೊಲೆಯರು ಶೇ.5.5, ವಡ್ಡರು, ಲಮಾಣಿ, ಕೊರಚರು ಶೇ.4.5 ಮತ್ತು ಅಲೆಮಾರಿ ಜನಾಂಗದವರು ಶೇ.1ರಂತೆ ಕೂಡಲೇ ಜಾರಿಗೊಳಿಸಬೇಕು” ಎಂದು ಹೇಳಿದ್ದಾರೆ.
“ಅಲೆಮಾರಿ ಜನಾಂಗದವರಿಗೆ ವರ್ಷಕ್ಕೆ ಮೂರು ಸಾವಿರ ಎಸ್ಸಿಪಿ ಅನುದಾನ ಬರುತ್ತದೆ. ಇವತ್ತಿಗೂ ಅವರಿಗೆ 5 ಕೋಟಿ ಅನುದಾನ ಇಲ್ಲ. ಈಗ ಒಳಮೀಸಲಾತಿ ನೀಡಿದರೇ, ಈ ಸಮುದಾಯ ಅಭಿವೃದ್ಧಿ ಹೊಂದುತ್ತದೆ. ಈ ಸಮುದಾಯ ಅಭಿವೃದ್ಧಿ ಹೊಂದಬೇಕು ಎನ್ನುವುದು ಇದ್ದರೇ, ಜಾರಿಗೊಳಿಸಬೇಕು. ಎಲ್ಲ ನೇಮಕಾತಿಗಳನ್ನು ರದ್ದುಪಡಿಸಬೇಕು. ವರ್ಗೀಕರಣ ಆದ ಬಳಿಕ ನೇಮಕಾತಿ ಮಾಡಬೇಕು” ಎಂದು ತಿಳಿಸಿದ್ದಾರೆ.
“ಕಳೆದ 20 ವರ್ಷಗಳಿಂದ ಒಳಮೀಸಲಾತಿ ವರ್ಗೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟ ನಡೆಸುತ್ತಿದ್ದೇವೆ. ದುರಂತ ಏನೆಂದರೆ, ಹಲವಾರು ಹೋರಾಟಗಳಲ್ಲಿ ಹಸಿವಿನಿಂದ, ಬಿಪಿಯಿಂದ, ಅಪಘಾತದಿಂದ ಸಾವನ್ನಪ್ಪಿದ್ದಾರೆ. ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರು ಕೂಡ ಈ ವರ್ಗೀಕರಣವನ್ನು ಕೇಂದ್ರ ಮಾಡಬೇಕು ಎಂದು ಹೇಳುತ್ತಾರೆ. ಆದರೆ, ಈಗ ಸುಪ್ರೀಂ ಕೋರ್ಟ್ ಈ ವರ್ಗೀಕರಣವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಹೇಳಿದೆ. ಆದರೆ, ಈ ರಾಜ್ಯ ಸರ್ಕಾರಗಳು ನಾವು ಸಂಧಾನದ ಮೂಲಕ ವರ್ಗೀಕರಣ ಮಾಡುತ್ತೇವೆ ಎಂದೆನ್ನುತ್ತಾರೆ. ಆದರೆ, ನಮ್ಮ ಪ್ರಶ್ನೆ ಯಾವ ರೀತಿಯ ಸಂಧಾನ ಮಾಡುತ್ತೀರಾ” ಎಂದು ಈದಿನ.ಕಾಮ್ ಜತೆಗೆ ಮಾತನಾಡಿದ ಕರ್ನಾಟಕ ಬಹುಜನ ಚಳುವಳಿಯ ರಾಜ್ಯಾಧ್ಯಕ್ಷ ಕಣಿಕೆನಹಳ್ಳಿ ಕೃಷ್ಣಪ್ಪ ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಜಲಾಶಯ ಗೇಟ್ ದುರಸ್ತಿ ಕಾರ್ಯ ತ್ವರಿತವಾಗಿ ಮುಗಿಸಲು ಸೂಚನೆ, ರೈತರು ಹೆದರಬೇಕಿಲ್ಲ: ಸಿದ್ದರಾಮಯ್ಯ
“ಈಗ ಎಲ್ಲ ಜಾತಿ ಜನಾಂಗದಲ್ಲಿ ಸಮಾನತೆ ಇಲ್ಲ. ನಿಮ್ಮಲ್ಲಿ ದತ್ತಾಂಶಗಳಿದಾವೆ. ಅದೇ ಡೇಟಾ ಇಟ್ಟುಕೊಂಡು ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿ ಘೋಷಣೆ ಮಾಡಬಹುದು. ಇದು ಪಂಚಾಯಿತಿ ಕಟ್ಟೆಯಲ್ಲಿ ನ್ಯಾಯ ಮಾಡುವುದಲ್ಲ. ಮುಂದಿನ ದಿನಗಳಲ್ಲಿಯೂ ಕೂಡ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಅಂದರೆ, ಈ ಕೂಡಲೇ ಒಳಮೀಸಲಾತಿಯನ್ನು ಜಾರಿಗೆ ತರಬೇಕು” ಎಂದಿದ್ದಾರೆ.
“ಈ ಅಲೆಮಾರಿಗಳು ಒಳಮೀಸಲಾತಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟದಲ್ಲಿ 50 ಜಾತಿಯ ಬರುತ್ತೇವೆ. ಈ 50 ಜಾತಿಗಳಲ್ಲಿ ಅತ್ಯಂತ ನಿಷ್ಕ್ರಷ್ಟವಾಗಿ ಬದುಕುತಾ ಇರುವವರು ಅಲೆಮಾರಿಗಳು. ಸ್ವಾತಂತ್ರ್ಯ ಬಂದು 70 ವರ್ಷ ಆದರೂ ಕೂಡ ಅಲೆಮಾರಿ ಜನರಿಗೆ ಇನ್ನು ಸ್ವಾತಂತ್ರ್ಯ ಸಿಕ್ಕಿಲ್ಲ. ಅಲೆಮಾರಿಗಳು ಸ್ಮಶಾನ್ಗಳಲ್ಲಿ, ಇನ್ನೊಬ್ಬರ ಜಮೀನಿನಲ್ಲಿ, ಬಸ್ಸ್ಟ್ಯಾಂಡ್ನಲ್ಲಿ ಜೀವನ ಸಾಗಿಸುತ್ತಿದ್ದೇವೆ. ಸಣ್ಣಪುಟ್ಟ ಕೂದಲು, ಪ್ಲಾಸ್ಟಿಕ್ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಮಾಧುಸ್ವಾಮಿ ಆಯೋಗದಲ್ಲಿ 89 ಜಾತಿಗಳಿಗೆ 1% ಮೀಸಲಾತಿ ಕೊಟ್ಟಿದ್ದಾರೆ. ಆದರೆ, ಇದು ಯಾವುದಕ್ಕೂ ಸಾಕಾಗುವುದಿಲ್ಲ. ಯಾಕೆಂದರೆ, 2.5 ಲಕ್ಷ ಜನಸಂಖ್ಯೆ ಎಂದು ಇಟ್ಟುಕೊಂಡು 1% ಕೊಟ್ಟಿದ್ದಾರೆ. ಆದರೆ, ಈಗ ಜನಸಂಖ್ಯೆ 30 ರಿಂದ 40 ಲಕ್ಷ ಏರಿಕೆಯಾಗಿದೆ. ಹಿಂದುಳಿದ ಸಮುದಾಯಗಳಿಗೆ ಹೆಚ್ಚಿನ ಮೀಸಲಾತಿ ಕೊಡಬೇಕಿತ್ತು. ಆದರೆ, ಈಗ 1% ಕೊಟ್ಟಿರೋದು ನಿಜಕ್ಕೂ ಬೇಸರದ ಸಂಗತಿ” ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯಾಧ್ಯಕ್ಷ ಬಿ.ಎಲ್ ಹನುಮಂತಪ್ಪ ಈ ದಿನ.ಕಾಮ್ಗೆ ಹೇಳಿದ್ದಾರೆ.
ರಾಜ್ಯ ಸರ್ಕಾರ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಮಾಡಬೇಕು ಎಂದು ಸಮಿತಿ ಆಗ್ರಹಿಸಿದೆ.