ಬಗರ್ ಹುಕುಂ ಸಾಗುವಳಿಗೆ ಅರ್ಜಿ ಸಲ್ಲಿಸಿರುವ ಭೂರಹಿತರೆಲ್ಲರಿಗೂ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಎಂದು ಭೂಮಿ ಮತ್ತು ವಸತಿ ಹಕ್ಕುವಂಚಿತರ ಹೋರಾಟ ಘಟಕದಿಂದ ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ ಹಳೆ ತರಕಾರಿ ಮಾರುಕಟ್ಟೆಯಿಂದ ಪ್ರಾರಂಭವಾಗಿ ಬಸ್ ನಿಲ್ದಾಣ ಹಾಗೂ ಮುಖ್ಯ ರಸ್ತೆಗಳ ಮೂಲಕ ಶಾಸಕರ ಕಚೇರಿವರೆಗೆ ಪಂಜಿನ ಮೆರವಣಿಗೆ ನಡೆಸಿದರು.
ಭೂಮಿ ವಸತಿ ಹೋರಾಟಗಾರ ಕರಿಯಪ್ಪ ಗುಡಿಮನಿ ಮಾತನಾಡಿ, “ಭೂಮಿ, ವಸತಿ ಇಲ್ಲದೆ ಬೀದಿಗಳಲ್ಲಿ ಜೀವನ ಸಾಗುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಶಾಸಕರನ್ನು ಭೇಟಿ ಮಾಡಿದಾಗ, ʼಈ ಬಾರಿ ನಮ್ಮನ್ನು ವಿಧಾನಸಭೆಗೆ ಕಳುಹಿಸಿದರೆ ಭೂಮಿ ವಸತಿ ಹಕ್ಕು ವಂಚಿತರಿಗೆ ಹಕ್ಕುಪತ್ರ ನೀಡಲಾಗುವುದುʼ ಎಂದು ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ರೀತಿಯ ಸಮಸ್ಯೆ ಬಗೆಹರಿಸಿಲ್ಲ. ನಮಗೆ ನ್ಯಾಯ ದೊಕಿಸುವಲ್ಲಿ ವಿಫಲರಾಗಿದ್ದಾರೆ” ಎಂದು ಆಗ್ರಹಿಸಿದರು.
“ಕೋಮುವಾದಿ ಪಕ್ಷ ಬಿಜೆಪಿಯಿಂದ ಮನನೊಂದ ಕಾರಣ ಆ ಪಕ್ಷವನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಆಡಳಿತಕ್ಕೆ ತರಲಾಗಿದೆ. ನಮ್ಮ ಸಮಸ್ಯೆಗೆ ನೆರವಾಗಬಹುದೆಂದು ಬೇಡಿಕೆ ಮಂಡಿಸಿದರೆ, ʼಬಜೆಟ್ ಇಲ್ಲ, ಗ್ಯಾರಂಟಿ ಯೋಜನೆಗೆ ದುಡ್ಡು ಹಾಕಬೇಕುʼ ಎಂಬ ನೆಪ ಹೇಳುತ್ತಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಆಚರಣೆ ಅದ್ದೂರಿ: ಸಚಿವ ಡಾ ಎಚ್ ಸಿ ಮಹದೇವಪ್ಪ
“ದಶಕಗಳಿಂದ ಸಾಗುವಳಿ ಮಾಡುತ್ತಿರುವ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ಹಾಗೂ ಅರ್ಜಿ ಸಲ್ಲಿಸಿದ ಫಾರಂ 53, 50, 57 ಭೂಮಿ ಪಂಚನಾಮೆ ಜಿಪಿಎಸ್ ಸರ್ವೇ ಮಾಡಿಸಬೇಕು ಮತ್ತು ಭೂ ಮಂಜೂರಾತಿ ಹೆಸರಲ್ಲಿ ಭ್ರಷ್ಟಾಚಾರ ನಡೆಸುವವರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಕರ್ನಾಟಕ ವಿದ್ಯಾರ್ಥಿ ಸಂಘಟನೆ ದುರುಗೆಶ್, ಭೂಮಿ ವಸತಿ ಮುಖಂಡ ವಸಂತರಾಜ್ ಕಹಳೆ, ನೀಲಪ್ಪ ಪೇಂಟರ್, ಪ್ರಗತಿ, ಶರಣು ಸೇರಿದಂತೆ ಇತರರು ಇದ್ದರು.
