ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯರ ವಿರುದ್ಧ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ʼಗೊಡ್ಡುಪುರಾಣʼ ಎಂಬ ಪದ ಬಳಸಿ ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ ಲೇಖನವನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತೀವ್ರವಾಗಿ ಖಂಡಿಸಿ ಸಾಣೇಹಳ್ಳಿ ಶ್ರೀಗಳ ಬೆಂಬಲಕ್ಕೆ ನಿಂತಿದೆ.
ವಿಶ್ವೇಶ್ವರ ಭಟ್ಟರು ಸಾಣೆಹಳ್ಳಿ ಶ್ರೀಗಳ ಕುರಿತು ಹಗುರವಾಗಿ ಬರೆದಿರುವುದು ಭಟ್ರ ಪತ್ರಿಕಾ ಧರ್ಮಕ್ಕೂ ಮತ್ತು ವ್ಯಕ್ತಿತ್ವಕ್ಕೂ ಶೋಭೆ ತರುವಂತಹದ್ದಲ್ಲ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಬಸವಾದಿ ಶರಣರು 12ನೇ ಶತಮಾನದಲ್ಲಿ ಸ್ಥಾಪಿಸಿದ ‘ಅಂಗಾಯತ’ ಸ್ವತಂತ್ರ ಧರ್ಮ ಎಂಬುದು ಶತಸಿದ್ದ. ಅದರಲ್ಲಿ ಯಾವುದೇ ಸಂಶಯ, ಸಂದೇಹವಿಲ್ಲ. ಇದನ್ನು 12ನೇ ಶತಮಾನದ ಶರಣರಿಂದ ಇತ್ತೀಚಿನ ಸಂಶೋಧಕರು, ಸಾಹಿತಿಗಳು, ಮಠಾಧೀಶರು ಮತ್ತು ಈ ನಾಡಿನ ಬಹುದೊಡ್ಡ ಸಮಾಜದ ಅನುಯಾಯಿಗಳು ನಂಬಿಕೊಂಡು ಬಂದಿದ್ದಾರೆ. ಇದನ್ನೇ ಸಾಣೇಹಳ್ಳಿ ಪಂಡಿತಾರಾಧ್ಯರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಅವರ ಮಾತುಗಳು ನೂರಕ್ಕೆ ನೂರು ಸತ್ಯವಾಗಿವೆ. ಸ್ವಾಮೀಜಿಯವರು ಆಯುಷ್ಯದುದ್ದಗಲಕ್ಕೂ ಈ ವಿಷಯವನ್ನು ಪ್ರಸ್ತಾಪಿಸುತ್ತಾ ಅಂಗಾಯತರಲ್ಲಿ ಜಾಗೃತಿ ಉಂಟು ಮಾಡುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ಶ್ರೀಗಳು ಹೇಳಿರುವ ಮಾತುಗಳು ಹೊಸದೆನಲ್ಲ. ಅವರ ಹೇಳಿಕೆಯನ್ನು ಅಂಗಾಯತ ಮಠಾಧಿಪತಿಗಳ ಒಕ್ಕೂಟ ಒಗ್ಗಟ್ಟಿನಿಂದ ಬೆಂಬಲಿಸುತ್ತದೆʼ ಎಂದು ತಿಳಿಸಿದ್ದಾರೆ.

ʼಅಂಗಾಯತರದು ಪುರಾಣ ಸಂಸ್ಕೃತಿ ಅಲ್ಲದೆ, ವಚನ ಸಂಸ್ಕೃತಿ ಆಗಿದೆ. ವಚನಗಳು ಯಾವ ಚಿಂತನೆಗಳನ್ನು ಹೇಳುತ್ತವೆಯೋ ಅದನ್ನೇ ಸಾಣೇಹಳ್ಳಿ ಶ್ರೀಗಳು ಧೈರ್ಯವಾಗಿ ಹೇಳಿದ್ದಾರೆ. ಅದನ್ನು ಅಪವ್ಯಾಖ್ಯಾನ ಮಾಡುವ ನೆಪದಲ್ಲಿ ಭಟ್ರು ತಮ್ಮ ಗಣೇಶಪುರಾಣವನ್ನು ಮುಂದೆವರೆಸಿದ್ದಾರೆ. 2017ರಲ್ಲಿ ʼಲಿಂಗಾಯತʼ ಸ್ವತಂತ್ರ ಧರ್ಮವೆಂಬ ಹೋರಾಟ ಇಡೀ ದೇಶದಲ್ಲಿಯೇ ಸಂಚಲನವನ್ನುಂಟು ಮಾಡಿರುವುದು ಪತ್ರಕರ್ತರಾದ ವಿಶ್ವೇಶ್ವರ ಭಟ್ರಿಗೆ ಗೊತ್ತಿಲ್ಲವೇ? ಕರ್ನಾಟಕ ಸರ್ಕಾರ ನ್ಯಾಯಮೂರ್ತಿ ನಾಗಮೋಹನದಾಸ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿ ಅಂಗಾಯತ ಧರ್ಮ ಸ್ವತಂತ್ರ ಧರ್ಮವೆಂಬ ವರದಿ ನೀಡಿತ್ತು. ಅದನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಕೂಡ ಮಾಡಿದೆ. ಆ ಸಂದರ್ಭದಲ್ಲಿ ಸ್ವತಂತ್ರ ಧರ್ಮ ಹೋರಾಟದ ಪರವಾಗಿ ಬರಹಗಳು ಬರೆದ ವಿಶ್ವೇಶ್ವರ ಭಟ್ರು ಇದೀಗ ಈ ರೀತಿ ಮಾತನಾಡುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲʼ ಎಂದಿದ್ದಾರೆ.
ʼಪತ್ರಕರ್ತರಾಗಿ ಒಬ್ಬ ಪ್ರತಿಷ್ಠಿತ ಮಠಾಧೀಶರ ಕುರಿತು ಈ ರೀತಿಯ ಭಾಷೆ ಬಳಸಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಭಟ್ರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಲಿಂಗಾಯತ ಧರ್ಮಗುರುಗಳಿಗೆ ತಮ್ಮ ಅನುಯಾಯಿಗಳಿಗೆ ಏನು ಹೇಳಬೇಕೆಂಬ ಸ್ವಾತಂತ್ರ್ಯವೂ ಇಲ್ಲವೆ?ʼ ಎಂದು ಭಾಲ್ಕಿ ಶ್ರೀಗಳು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯಪಾಲರ ಕಚೇರಿಯು ಕರ್ನಾಟಕಕ್ಕೆ ಮಾಡುತ್ತಿರುವ ಅವಮಾನವನ್ನು ಈ ರಾಜ್ಯ ಸಹಿಸಲ್ಲ
ʼಕೆಲವರು ಅಂಗಾಯತ ಹೋರಾಟ ನಿಂತು ಹೋಗಿದೆ ಎಂಬ ಭ್ರಮೆಯಿಂದ ಲಿಂಗಾಯತ ಸಮಾಜದ ಮೇಲೆ ಅನೇಕ ರೀತಿಯ ಆಕ್ರಮಣಗಳನ್ನು ಮಾಡುತ್ತಿದ್ದಾರೆ. ಆದರೆ, ಅವರ ಈ ಪ್ರಯತ್ನಗಳು ಎಂದಿಗೂ ಫಲಿಸುವುದಿಲ್ಲ. ಅಂಗಾಯತ ಸ್ವತಂತ್ರ ಧರ್ಮದ ಹೋರಾಟ ಎಂದಿಗೂ ನಿಲ್ಲುವುದಿಲ್ಲʼ ಎಂದು ಡಾ. ಬಸವಲಿಂಗ ಪಟ್ಟದ್ದೇವರು ಸ್ಪಷ್ಟಪಡಿಸಿದ್ದಾರೆ.